ರಾಜ್ಯ ಬಜೆಟ್ನಲ್ಲಿ ಮಸಣ ಕಾರ್ಮಿಕರನ್ನು ರಾಯಚೂರು ನಗರ ಸ್ಥಳೀಯ ನೌಕರರೆಂದು ಪರಿಗಣಿಸುವುದು ಹಾಗೂ ಇತರೆ ಯೋಜನೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಫೆಬ್ರವರಿ 13ರಂದು ಕುತ್ತಿಗೆ ಮಟ್ಟಕ್ಕೆ ಹೂತುಕೊಂಡು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಸಣ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಕೆ ಜಿ ವೀರೇಶ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಕಳೆದ ಅನೇಕ ವರ್ಷಗಳಿಂದ ಮಸಣ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಗುರುತಿಸುವ ಕೆಲಸವಾಗಿಲ್ಲ. ಸಂಘಟನೆಯಿಂದ ಅನೇಕ ಹಂತದ ಪ್ರತಿಭಟನೆ ನಡೆಸಲಾಗಿದೆ. ಕಳೆದ ಡಿಸೆಂಬರ್ 21ರಿಂದ ಮೂರು ದಿನ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಂದು ಸ್ಥಳಕ್ಕೆ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಅಧಿಕಾರಿಗಳ ಸಭೆ ನಡೆಸುವುದಾಗಿ ಭರವಸೆ ನೀಡಿದ್ದರು. ಈ ಕುರಿತು ಫೆಬ್ರವರಿ 2ರಂದು ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಜ್ಯಕ್ಕೆ ಕೇಂದ್ರದ ಅನ್ಯಾಯ ವಿರೋಧಿಸಿ ಸಿಪಿಐ ಪ್ರತಿಭಟನೆ
“ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಸಣ ಕಾರ್ಮಿಕರಾಗಿ ಸೇವೆ ಸಲ್ಲಿಸುವವರಿಗೆ ಕನಿಷ್ಠ ವೇತನ, ಮಕ್ಕಳಿಗೆ ಉಚಿತ ವಿದ್ಯಾಬ್ಯಾಸ, ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ನೆರವು, ಪಿಂಚಣಿ, ನಿವೇಶನ ಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಬಜೆಟ್ನಲ್ಲಿ ಅನುದಾನ ಕಾಯ್ದಿರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಫೆಬ್ರವರಿ 14ರಂದು ರಾಯಚೂರು ನಗರದ ಜಲಾಲನಗರ ಮಸಣ ಭೂಮಿಯಲ್ಲಿ ಕುತ್ತಿಗೆ ಮಟ್ಟಕ್ಕೆ ಗುಂಡಿ ತೋಡಿ ಪ್ರತಿಭಟನೆ ನಡೆಸಲಾಗುವುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಂದಪ್ಪ, ನರಸಿಂಹಲು, ಕರಿಯಪ್ಪ ಬುರ್ದಿಪಾಡ ಇದ್ದರು.
ವರದಿ : ಹಫೀಜುಲ್ಲ





