ಸಿರವಾರ ತಾಲೂಕಿನ ಹರವಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆರ್.ಎಂ.ಎಸ್.ಎ – ಪಿ.ಎಂ. ಯೋಜನೆಯಡಿಯಲ್ಲಿ ಬಂದ ಅನುದಾನವನ್ನು ದುರ್ಬಳಕೆ ಮಾಡಿರುವ ಆರೋಪದಡಿ ಶಾಲೆಯ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್ಡಿಎಂಸಿ) ಒತ್ತಾಯಿಸಿ ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಆರ್.ಎಂ.ಎಸ್.ಎ (ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ) ಮತ್ತು ಪಿ.ಎಂ. (ಪ್ರಧಾನ ಮಂತ್ರಿ) ಯೋಜನೆಗಳಡಿ ಶಾಲೆಗಳ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ ಮತ್ತು ಶೈಕ್ಷಣಿಕ ಸಾಮಗ್ರಿಗಳ ಖರೀದಿಗಾಗಿ ಬಿಡುಗಡೆಯಾದ ಅನುದಾನವನ್ನು ಶಾಲಾ ಮುಖ್ಯಸ್ಥರು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಣವನ್ನು ಉದ್ದೇಶಿತ ಕಾಮಗಾರಿಗಳಿಗೆ ಬಳಸದೆ ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಕೂಡಲೇ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
2024–25ನೇ ಸಾಲಿನಲ್ಲಿ ಬಿಡುಗಡೆಗೊಂಡಿದ್ದ ಅನುದಾನವನ್ನು ಶಾಲೆಯ ಮುಖ್ಯೋಪಾಧ್ಯಾಯ ರಾಜಖಾನ ಹಾಗೂ ಪ್ರಭಾರಿ ಶಿಕ್ಷಕ ದತ್ತಾತ್ರೇಯ ಇವರು ದಾಖಲೆಗಳಲ್ಲಿ ಅಸಮರ್ಪಕತೆ ಮತ್ತು ಲೆಕ್ಕಪತ್ರಗಳಲ್ಲಿ ಅನುದಾನದ ಹಣವನ್ನು ಶಾಲಾ ಅಭಿವೃದ್ಧಿಗೆ ಬಳಸದೆ, ಖಾಸಗಿ ಖರ್ಚು ಮತ್ತು ಕೃತಕ ಬಿಲ್ಗಳ ಮೂಲಕ ತೋರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸ್ಥಳೀಯ ಶಿಕ್ಷಣ ಇಲಾಖೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಾಹಿತಿಯ ಪ್ರಕಾರ, ಉಭಯ ಶಾಲೆಗಳಿಗೂ ಒಟ್ಟಾರೆ ಸುಮಾರು ₹6,27,459/- ಅನುದಾನ ಬಿಡುಗಡೆಯಾಗಿದ್ದು, ಈ ಮೊತ್ತವನ್ನು ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಅಥವಾ ಶಿಕ್ಷಣ ಸಂಬಂಧಿತ ಸಾಮಗ್ರಿ ಖರೀದಿಗೆ ಬಳಸದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣದ ದುರ್ಬಳಕೆ ನಡೆಸಲಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಹಲ್ಲೆ; ಇಬ್ಬರ ಬಂಧನ
ಈ ವೇಳೆ ಎಸ್,ಡಿಎಂಸಿ ಉಪಾಧ್ಯಕ್ಷ ಈರೇಶ ಪೆದ್ದರೆಡ್ಡಿ, ಯಲ್ಲಪ್ಪ ಗೋನಕ್ಕಿ, ಹನುಮಂತ ಹಳ್ಳಿ, ಬಸವರಾಜ ಇನ್ನಿತರರು ಹಾಜರಿದ್ದರು.





