ದೇವದುರ್ಗ ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಿರುವ ಕೋರ್ಟ್ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕರ ಹೆಸರನ್ನು ಉಲ್ಲೇಖಿಸದೇ ಬಿಡಲಾಗಿದ್ದು, ಸಭಾಧ್ಯಕ್ಷರಿಗೆ ಶಾಸಕಿ ಅಧಿಕೃತ ದೂರು ಸಲ್ಲಿಸಿದ್ದಾರೆ ಹಾಗೂ ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ನೋವು ಉಂಟುಮಾಡಿದೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಶಾಸಕಿ ಕರೆಮ್ಮ ಜಿ ನಾಯಕ ಹೇಳಿದ್ದಾರೆ.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತಂತೆ ಸ್ಥಳೀಯ ಶಾಸಕರ ಸಂವಿಧಾನಬದ್ದ ಸ್ಥಾನಕ್ಕೆ ಹಕ್ಕುಚ್ಯುತಿ ಆಗಿರುವಂತೆ ಕಂಡುಬರುವ ಬಗ್ಗೆ ಸಭಾಧ್ಯಕ್ಷರಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ. ನ್ಯಾಯಾಂಗ ಇಲಾಖೆಯಂತು ಅತ್ಯಂತ ಸೂಕ್ಷ್ಮವಾದ ವಿಭಾಗ. ಅದರ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಅಥವಾ ಆತಂಕ ಉಂಟುಮಾಡುವ ಉದ್ದೇಶ ನಮ್ಮದಾಗಿಲ್ಲ. ನಾವು ಅದನ್ನು ಮನಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಶಾಸಕಳಾಗಿ ಆಯ್ಕೆಯಾದ ಕ್ಷಣದಿಂದಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಷಡ್ಯಂತ್ರಗಳು ನನ್ನ ವಿರುದ್ಧ ನಡೆಯುತ್ತಿವೆ. ವಿನಾಕಾರಣ ನನ್ನ ಮೇಲೆ ಗೂಬೆ ಕೂರಿಸಿ, ನನ್ನ ರಾಜಕೀಯ ಶಕ್ತಿಯನ್ನು ಕುಗ್ಗಿಸಲು ಹಾಗೂ ಅಪಪ್ರಚಾರ ಹಬ್ಬಿಸಲು ನಿರಂತರ ಪ್ರಯತ್ನಗಳು ಸಾಗುತ್ತಿವೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರಿಯಾದ ಸಮಯಕ್ಕೆ ಬಸ್ ಸಂಚಾರ ಕಲ್ಪಿಸಲು; ವಿದ್ಯಾರ್ಥಿಗಳ ಒತ್ತಾಯ
ನ್ಯಾಯದ ಪರ ಹೋರಾಟದಲ್ಲಿ ಪಾಲ್ಗೊಂಡ ಸಂದರ್ಭಗಳಲ್ಲಿ ನನ್ನ ಮೇಲೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ ನನ್ನ ವಿರುದ್ಧ ಯಾವುದೇ ಗಂಭೀರ ಅಥವಾ ತೀವ್ರ ಸ್ವರೂಪದ ಪ್ರಕರಣಗಳಿಲ್ಲ. ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಕೈಬಿಟ್ಟಿರುವ ಕುರಿತು ಪ್ರಶ್ನೆ ಎತ್ತಿದ ಶಾಸಕಿ, “ಪ್ರಕರಣಗಳು ದಾಖಲಾಗಿರುವುದೇ ಮಾನದಂಡವಾಗಿದ್ದರೆ, ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಇರುವ ಸಚಿವರ ಮೇಲೂ ಪ್ರಕರಣಗಳಿಲ್ಲವೇ? ಎಂಬ ಪ್ರಶ್ನೆ ಕೇಳಬೇಕಾಗುತ್ತದೆ,” ಎಂದು ಹೇಳಿದರು.





