ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರ್ಎಸ್ಎಸ್ ಕಾರ್ಯಕರ್ತರ ವಿರುದ್ಧ ಹಾಗೂ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಬಣದ ಜಿಲ್ಲಾ ಮುಖಂಡ ಮಲ್ಲಪ್ಪ ಗೋನಾಳ ಹೇಳಿದರು.
ಇಂದು ಪತ್ರಿಕಾ ಹೇಳಿಕೆ ನೀಡಿ, ಸರ್ಕಾರಿ ಶಾಲಾ ಕಾಲೇಜು ಆವರಣದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರವಾದ ದೊಣ್ಣೆ ಹಿಡಿದು ಪಥಸಂಚಲನ ಸೇರಿದಂತೆ ಇನ್ನಿತರ ಜನವಿರೋಧಿ ಚಟುವಟಿಕೆಗಳನ್ನು ಸಂಘಟನೆಯನ್ನು ನಿಷೇಧಿಸುವ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾಪ ಸರಿಯಾಗಿದೆ. ಇದನ್ನು ಸಹಿಸದೇ ಅವರ ಕುಟುಂಬದ ಮೇಲೆ ವೈಯಕ್ತಿಕವಾಗಿ ಬೆದರಿಕೆ ಹಾಕುತ್ತಿರುವ ಖಂಡನೀಯ ಎಂದರು.
ವಾಸ್ತವವಾಗಿ ಪಥಸಂಚಲನ ಮಾಡುವ ಅಧಿಕಾರ ಸಾಂವಿಧಾನಿಕವಾಗಿ ಇರುವುದು ಪೊಲೀಸ್ ಮತ್ತು ಇನ್ನಿತರ ರಕ್ಷಣಾ ಪಡೆಗಳಿಗೆ ಮಾತ್ರ. ಆರ್ಎಸ್ಎಸ್ ಸೇರಿದಂತೆ ಇತರ ಯಾವುದೇ ಸಂಘ ಸಂಸ್ಥೆಗಳು ಮೆರವಣಿಗೆ-ಪ್ರತಿಭಟನೆ ಮಾಡಬಹುದೇ ಹೊರತು, ‘ಪಥಸಂಚಲನವನ್ನಲ್ಲ. ಆದ್ದರಿಂದ ಸರ್ಕಾರ ದೃಢ ನಿಲುವು ತಾಳುವುದರ ಮೂಲಕ ಆರ್ಎಸ್ ಎಸ್ ದೊಣ್ಣೆ ಹಿಡಿದು ಪಥ ಸಂಚಲನ ನಡೆಸುವುದಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಂಗನವಾಡಿ ಕೇಂದ್ರದಲ್ಲಿ 20 ದಿನಗಳಿಂದ ಉಪಹಾರವಿಲ್ಲ — ಸಾರ್ವಜನಿಕರ ಆಕ್ರೋಶ
ಆರ್ಎಸ್ಎಸ್ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಪಾರಮ್ಯವನ್ನು ಜನ ಸಾಮಾನ್ಯರ ಮೇಲೆ ಹೇರುತ್ತಿದ್ದು, ಜನರ ಮನಸ್ಸಿನಲ್ಲಿ ಜಾತೀಯತೆ-ಮತೀಯತೆ, ಮೌಡ್ಯತೆ, ಮೂಢನಂಬಿಕೆಗಳ ವಿಷ ಬೀಜ ಬಿತ್ತುತ್ತಿದೆ. ಇಂತಹ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ತಿಳಿಸಿದರು.





