ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೆಲಸ ನಡೆಯುತ್ತಿರುವುದು ಕಳವಳಕಾರಿಯಾಗಿದ್ದು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಹದಗೆಡದಂತೆ ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಂಸದ ಜಿ.ಕುಮಾರನಾಯಕ ಹೇಳಿದರು.
ನಗರದ ನವೋದಯ ಶಿಕ್ಷಣ ಸಂಸ್ಥೆಯ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿ ವೇದಿಕೆ, ಭಾರತ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ಮಹಿಳಾ ಒಕ್ಕೂಟ ಮತ್ತು ಶಿಕ್ಷಣ ಹಕ್ಕಿಗಾಗಿ ಕೆಲಸ ಮಾಡುತ್ತಿರುವ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ನಮ್ಮ ಶಾಲೆ ನಮ್ಮ ಹಕ್ಕು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ಪೀಠಿಕೆಯಲ್ಲಿ ಪ್ರಸ್ತಾಪಿಸಲಾದ ವಿಷಯಗಳನ್ನು ಸಾಧಿಸಲು ಇರುವ ಸಾಧನ ಶಿಕ್ಷಣ ಮಾತ್ರವಾಗಿದೆ. ಹೊಸ ಸಮಾಜವನ್ನು ಕಟ್ಟಲು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಪ್ರಮುಖ ಸಾಧನವಾಗಿದೆ. ಮನೆಯಲ್ಲಿನ ಶಿಕ್ಷಣ ಇತಿಮಿತಿ ಹೊಂದಿರುತ್ತಿದ್ದು, ಮಗು ಪರಿಪೂರ್ಣತೆ ಪಡೆಯಲು ಸಾರ್ವಜನಿಕ ಶಿಕ್ಷಣ ಅವಶ್ಯವಾಗಿದೆ ಎಂದು ಹೇಳಿದರು.
ಸಂವಿಧಾನ ಪೀಠಿಕೆ ಸಾಕಾರಗೊಳ್ಳಲು ಸಾರ್ವಜನಿಕ ಶಿಕ್ಷಣ ಆಯುಧವಾಗಿದೆ.ಇದರ ಬಲವರ್ಧನೆಗೆ ಹೆಚ್ಚಿನ ಆದ್ಯತೆ ಅಗತ್ಯ. ಸರಕಾರಿ ಶಾಲೆಗಳ ಪಾತ್ರ ಮತ್ತು ಅವುಗಳ ರಕ್ಷಣೆಗೆ ಸಾರ್ವಜನಿಕರು ದೃಢವಾಗಿ ನಿಲ್ಲಬೇಕಾಗಿದೆ. ನಮ್ಮ ಶಾಲೆ ನಮ್ಮ ಹಕ್ಕು ಎನ್ನು ಘೋಷಣೆ ಜನರ ಘೋಷಣೆ ಆಗಬೇಕು. ನಿಮ್ಮ ಹೋರಾಟದ ಜೊತೆ ನಾವಿದ್ದೇವೆ ಎಂದು ಹೇಳಿ ಅವರು ಈ ರೀತಿಯ ಅವಲೋಕನೆಗಳಿಂದ ನಮ್ಮ ಶಾಲಾ ವ್ಯವಸ್ಥೆ ಉಳಿಯುವ ಮತ್ತು ಗುಣಾತ್ಮಕ ವೃದ್ಧಿಗೆ ಪೂರಕವಾಗಲಿದೆ ಎಂದರು.
ನಂತರ ಮಾತನಾಡಿದ ಕೆ. ಜಯಣ್ಣ ಅವರು, ಸ್ವಾತಂತ್ರ್ಯಕ್ಕೆ 77 ವರ್ಷಗಳು ಕಳೆದರೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮುಂದುವರಿದಿರುವುದು ದುರಂತದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈವರೆಗೆ ಶಾಲೆಗಳ ಸಮಸ್ಯೆಯನ್ನು ನಾವು ಹಕ್ಕಿನ ದೃಷ್ಟಿಯಿಂದ ಚರ್ಚಿಸಿದ್ದೇವೆ. ಆದರೆ ಈಗ ಇದು ಕೇವಲ ಹಕ್ಕಿನ ಪ್ರಶ್ನೆಯಲ್ಲ, ನಮ್ಮ ಸ್ವಾಭಿಮಾನದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ನಮ್ಮ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ತರಗತಿಗಳು ನಡೆಯದಿರುವುದು ಮಕ್ಕಳ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆ ತರುತ್ತಿದೆ. ಇರುವ ಶಿಕ್ಷಕರು ಮಕ್ಕಳೊಂದಿಗೆ ಭಾವನಾತ್ಮಕವಾಗಿ ಕೆಲಸ ಮಾಡಬೇಕಿದೆ. ಶಾಲೆಗಳು ಜ್ಞಾನ ಮಂದಿರಗಳಾಗಿದ್ದು, ಅವುಗಳನ್ನು ಉಳಿಸಿ ಅಭಿವೃದ್ಧಿಪಡಿಸುವ ಜವಾಬ್ದಾರಿ ಸಮಾಜದ ಮೇಲಿದೆ. ಶಿಕ್ಷಕರ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ, ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆಯನ್ನು ಬಲಪಡಿಸಬೇಕೆಂದು, ಅಲ್ಲದೇ ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಧರ್ಮದ ಹೆಸರಿನಲ್ಲಿ ದೌರ್ಜನ್ಯ; ಫ್ಯಾಸಿಸಂಗೆ ವಿರುದ್ಧ ಸಾಂಸ್ಕೃತಿಕ ಹೋರಾಟದ ಅಗತ್ಯ
ಈ ವೇಳೆ ಸೈಯದ್ ಹಫೀಜುಲ್ಲಾ, ಮೋಕ್ಷಮ್ಮ, ಕೆ.ಸತ್ಯನಾರಾಯಣ,ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಶಾವಂತಗೇರ, ಗ್ರಾಕೂಸ ಸುವರ್ಣ ಭಟ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ರೆಡ್ಡಿ, ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಭುಲಿಂಗ ಗದ್ದಿ, ಸಾವಿತ್ರಿಬಾಯಿ ಪುಲೆ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಛಾಯಾ, ಮೊಹಿನುಲ್ಲಾ ಹಕ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಕೊಪ್ಪಳ ಜಿಲ್ಲಾಧ್ಯಕ್ಷರಾದ ಶರಣಬಸ್ಸಪ್ಪ, ಮಹಾಂತೇಶ್ ಬಿರಾದಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ಶ್ರೀ ವಿಜಯರಾಜೇಂದ್ರ ಸೇರಿ ಇನ್ನಿತರರು ಉಪಸ್ಥಿತರಿದ್ದರು.





