ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣವನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ನಿಗಮದ ಅನುದಾನ ಸಮಾಜದ ಅಭಿವೃದ್ಧಿಗೆ ಬಳಕೆಯಾಗುವಂತೆ ನಿಗಾವಹಿಸಬೇಕೆಂದು ಆಗ್ರಹಿಸಿ ರಾಯಚೂರು ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿದರು.
ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ ಶಾಸಕ ಶಿವರಾಜ ಪಾಟೀಲ್, ಮಾಜಿ ಸಚಿವ ಕೆ ಶಿವನಗೌಡ ನಾಯಕ, ಮಾಜಿ ಸಂಸದ ಬಿ ವಿ ನಾಯಕ ಹಾಗೂ ಹಿರಿಯ ಮುಖಂಡ ಎನ್ ಶಂಕ್ರಪ್ಪ ಸೇರಿ ಅನೇಕ ಮುಖಂಡರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಾಲ್ಮೀಕಿ ನಿಗಮದ ಅದ್ಯಕ್ಷ ಸೇರಿದಂತೆ ಸಾಕಷ್ಟು ಜನರು ಇದರಲ್ಲಿ ಶಾಮೀಲಾಗಿದ್ದು, ಅವರನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶಾಸಕ ಡಾ. ಶಿವರಾಜ ಪಾಟೀಲ್ ಮಾತನಾಡಿ, “ವಾಲ್ಮೀಕಿ ನಿಗಮದ ಹಗರಣದಲ್ಲಿ ಭಾಗಿಯಾದ ಪ್ರತಿಯೊಬ್ಬರ ತಲೆದಂಡ ಆಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ವಾಲ್ಮೀಕಿ ಸಮಾಜದ ಜನರಿಗೆ ನ್ಯಾಯ ಸಿಗಬೇಕು ಹಾಗೂ ಇವರುಗಳ ಹಣದ ದಾಹಕ್ಕೆ ಬಲಿಯಾದ ಅಧಿಕಾರಿಯ ಸಾವು ವ್ಯರ್ಥವಾಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಶಾಮಿಲಾದವರ ತಲೆದಂಡವಾಗಬೇಕು” ಎಂದು ಆಗ್ರಹಿಸಿದರು.
ಮಾಜಿ ಸಚಿವ ಕೆ ಶಿವನಗೌಡ ಮಾತನಾಡಿ, “ಈ ಹಗರಣದಲ್ಲಿ ಸರ್ಕಾರದ ಸಂಪೂರ್ಣ ಯಂತ್ರಾಂಗದ ಸಹಕಾರವಿಲ್ಲದೆ ಕೋಟಿಗಟ್ಟಲೆ ಹಣ ಹಲವು ಅಕೌಂಟ್ಗಳಿಗೆ ವರ್ಗಾವಣೆಯಾಗುವುದು ಅಸಾಧ್ಯ. ಇದು ಸಂಪೂರ್ಣ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಪಾಪದ ಕೂಪವಾಗಿದೆ.
ಈ ಹಗರಣದಲ್ಲಿ ಭಾಗಿಯಾದ ನಿಗಮದ ಅಧ್ಯಕ್ಷರು, ಶಾಸಕರು, ಅಧಿಕಾರಿಗಳು ಹಾಗೂ ಸಚಿವರು ಹೇಗೆ ಉತ್ತರದಾಯಿಗಳೋ ಅವರಿಗಿಂತಲೂ ಒಂದು ಕೈ ಮೇಲೆ” ಎಂದರು.
“ಬಡವರ, ಬುಡಕಟ್ಟು ಜನರ ಪಾಲಿನ ಹಣವನ್ನು ಕದ್ದು ರಾಜಕೀಯದ ತೃಷೆಗೆ ಬಳಸಿಕೊಂಡಿರುವುದು ನಮ್ಮ ಸಮುದಾಯಕ್ಕಾಗಿರುವ ಅನ್ಯಾಯ. ಈ ಕೂಡಲೇ ಹಗರಣ ಸಿಬಿಐಗೆ ವಹಿಸಿ ನ್ಯಾಯ ಒದಗಿಸಿಕೊಡಬೇಕು” ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎನ್ ಶಂಕ್ರಪ್ಪ ಮಾತನಾಡಿ, “ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದ್ದು, ಬಡವರ ದುಡ್ಡು ಕದಿಯುವ, ದಲಿತರ ಅನ್ನ ಕಸಿಯುವ ಇಂತಹವರಿಗೆ ಸರ್ಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಇವರೆಲ್ಲರೂ ಅಧಿಕಾರದಲ್ಲಿ ಮುಂದುವರೆದರೆ ನಿಷ್ಪಕ್ಷಪಾತ ತನಿಖೆ ಅಸಾಧ್ಯ. ಬಡವರಿಗೆ ನ್ಯಾಯ ಒದಗಿಸಿಕೊಡಬೇಕು” ಎಂದರು.
“ಪರಿಶಿಷ್ಟರ ಹಣವನ್ನೂ ಬಿಡದೆ ಕದ್ದಿರುವ ಇವರು ಯಾರ ಹಿತಕ್ಕಾಗಿ ಕೆಲಸ ಮಾಡಬಲ್ಲರು. ಇವರಿಗೆ ಚುನಾವಣೆಯಲ್ಲಿ ಗೆಲ್ಲಲು ಮಾತ್ರ ನಾವು ಬೇಕು, ಗೆದ್ದ ಮೇಲೆ ಅವರನ್ನು ಮತ್ತಷ್ಟು ತುಳಿಯುತ್ತಿದ್ದಾರೆ. ಕಾಂಗ್ರೆಸ್ಸಿನ ಹಳೆಯ ಚಾಳಿ ಮುಂದುವರೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ಗ್ಯಾರೆಂಟಿ ಹೆಸರಿನಲ್ಲಿ ನಮ್ಮ ರಾಜ್ಯವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದ್ದು, ಎಲ್ಲ ನಿಗಮಗಳಲ್ಲೂ ಹಗರಣಗಳ ಸರಮಾಲೆಯೊಂದಿಗೆ ಸಾಧ್ಯವಾದಷ್ಟು ದೋಚಬೇಕೆಂದು ನಿರ್ಧಾರ ಮಾಡಿದಂತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ-ಕಿತ್ತೂರ-ಧಾರವಾಡ ಮಾರ್ಗದಲ್ಲಿ ಹೊಸ ರೈಲು ಯೋಜನೆಗೆ ಶೆಟ್ಟರ್ ಮನವಿ
ಪ್ರತಿಭಟನೆಯಲ್ಲಿ ಮಾಜಿ ಸಂಸದ ಬಿ ವಿ ನಾಯಕ, ಮಾಜಿ ಶಾಸಕ ಗಂಗಾಧರ ನಾಯಕ, ಮುಖಂಡರುಗಳಾದ ತ್ರಿವಿಕ್ರಮ ಜೋಶಿ, ಕೊಟ್ರೇಶಪ್ಪ ಕೋರಿ, ಪಿ ಯಲ್ಲಪ್ಪ, ಶರಣಪ್ಪ ಗೌಡ ಜಾಡಲದಿನ್ನಿ, ಈ ಶಶಿರಾಜ, ಗಿರಿಶ ಕನಕವೀಡು ಸೇರಿದಂತೆ ಬಹುತೇಕ ಕಾರ್ಯಕರ್ತರು ಇದ್ದರು.
ವರದಿ : ಹಫೀ ಜುಲ್ಲ





