ಮುಂಗಾರು ಹಂಗಾಮಿಗಾಗಿ ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಹರಿಸುತ್ತಿರುವ ವಾರಬಂದಿ ಕ್ರಮ ಅವೈಜ್ಞಾನಿಕವಾಗಿದೆ. ಈ ಕ್ರಮವನ್ನು ನಿಲ್ಲಿಸಿ, ನಿರಂತರವಾಗಿ ನೀರು ಹರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕಾಲುವೆ ನೀರು ಬಳಕೆದಾರರ ಸಂಘಟನೆ ಒತ್ತಾಯಿಸಿವೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. “ಮುಂಗಾರು ಬೆಳೆ ಉಳಿಸಿಕೊಳ್ಳಬೇಕಾದರೆ, ಕಾಲುವೆಗೆ ನೀರು ಹರಿಸಬೇಕು. ಮುಂಗಾರು ಹಂಗಾಮಿಗೆ ವಾರಬಂದಿ ಮಾಡಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಕಳೆದ 20 ವರ್ಷಗಳಿಂದ ಯಾವುದೇ ಕಾರಣಕ್ಕೂ ಮುಂಗಾರು ಬೆಳೆಗೆ ಈ ರೀತಿಯ ಕ್ರಮ ಕೈಗೊಂಡಿರಲ್ಲಿಲ್ಲ. ಕಾಲುವೆ ನೀರು ಪೋಲಾಗುವುದನ್ನು ತಡೆಯಲು ಕಳೆದ ಮೂರು ವರ್ಷಗಳಲ್ಲಿ ಮುಖ್ಯ ಕಾಲುವೆ, ವಿತರಣಾ ಕಾಲುವೆ ಹಾಗೂ ಕೆಲವು ಲ್ಯಾಟ್ರಲ್ಗಳ ಅಧುನೀಕರಣ ಕಾಮಗಾರಿಗೆ ₹2,466 ಕೋಟಿ ವೆಚ್ಚ ಮಾಡಲಾಗಿದೆ. ಅದರೂ, ಕಾಲುವೆಯ ಕೊನೆಯ ಭಾಗದ ರೈತರ ಜಮೀನುಗಳಿಗೆ ಇಲ್ಲಿಯವರೆಗೆ ಸರಿಯಾಗಿ ನೀರು ತಲುಪಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಸ್ಥಳಕ್ಕೆ ಬಂದ ಜಿಲ್ಲಾ ಸಹಾಯಕ ಆಯುಕ್ತ ಮೈಹಿಬೂಬಿ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದ ರೈತರು. ಹಕ್ಕೊತ್ತಾಯ ಸ್ವೀಕರಿಸಿ ಮಾತನಾಡಿದ ಆಯುಕ್ತರು, “ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಶೀಘ್ರವಾಗಿ ಪರಿಹರಿಸುತ್ತೇವೆ” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಹನುಮಂತ ಗುರಿಕಾರ, ಮೌನೇಶ ಜಾಲಹಳ್ಳಿ, ದುರುಗಪ್ಪ ಹೊರಟ್ಟಿ, ರಂಗನಾಥ ಬುಂಕಲದೊಡ್ಡಿ, ದೇವಣ್ಣ ಸೂಲದಗುಡ್ಡ, ಹನುಮಂತ ಮಡಿವಾಳ, ಲಕ್ಕಪ್ಪಗೌಡ ಚಿಂಚೋಡಿ, ಸಿದ್ದಪ್ಪ ಗುಮೇದಾರ, ಚಿಂದಾನಂದ ಚಿಂಚೋಡಿ, ನಾಯಣಗೌಡ ಯರಗುಡ್ಡ, ಮಕ್ತುಮ್ ಭಾಷಾ, ರೈತ ಸಾಬಣ್ಣ ಹೂಗಾರ, ಟಿ.ಆದಿನಾರಾಯಣ, ಶಶೀಧರ ಬಳೆ, ಭೀಮಣ್ಣ ಡೆಂಗಿ, ಆಂಜನೇಯ ರಾಂಪಳ್ಳಿ ಸೇರಿದಂತೆ ಅನೇಕರು ಇದ್ದರು.




