“ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ, ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಹಗರಣಗಳ ವಿರುದ್ಧ ಹಾಗೂ ಫಸಲ್ ವಿಮಾ ಭ್ರಷ್ಟಾಚಾರ ಖಂಡಿಸಿ ಜು.18 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜನಪರ ಕೆಲಸ ಮಾಡದೇ ಬೇಡವಾದ ವಿಷಯಗಳನ್ನು ಚರ್ಚಿಸಿ ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಕಾಂಗ್ರೆಸ್ ಸರ್ಕಾರವು ಸಹ ಹಲವು ಹಗರಣದಲ್ಲಿ ಭಾಗಿಯಾಗಿ ಲೂಟಿಗೆ ನಿಂತಿದೆ. ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದಲ್ಲಿ ಭ್ರಷ್ಟಾಚಾರ, ಟ್ರಕ್ ಟರ್ಮಿನಲ್ನಲ್ಲಿ ಭ್ರಷ್ಟಾಚಾರ, ವಕ್ಫ್ ಮಂಡಳಿಯಲ್ಲಿ ಭ್ರಷ್ಟಾಚಾರ ಹಗರಣದಲ್ಲಿ ತೊಡಗಿದೆ” ಎಂದು ದೂರಿದರು.
“ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ರೈತ ವಿರೋಧಿ ವಿದ್ಯುತ್ ನೀತಿಯಿಂದ ರೈತರು ತೊಂದರೆ ಅನುಭಸುತ್ತಿದ್ದಾರೆ. ಪಂಪ್ಸೆಟ್ ಅಳವಡಿಕೆಗೆ ರೈತರೇ ಹಣ ಖರ್ಚು ಮಾಡಬೇಕಾಗಿದೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಈ ನೀತಿ ಸರ್ಕಾರ ಹಿಂಪಡೆಯಬೇಕು” ಎಂದು ತಿಳಿಸಿದರು.

“ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ಗೆ ಅಧಿಕಾರಿ ನೀಡಲಾಗಿದೆ. ಆದರೆ ದೇಶದ ಜನರಿಗೆ ಆಹಾರ ಉತ್ಪಾದನೆ ಮಾಡುವ ರೈತರನ್ನು ಕಡೆಗಣಿಸುತ್ತಿದ್ದಾರೆ. ರೈತರಿಗೆ ಸೌಲಭ್ಯ ನೀಡಿದರೆ ಆಹಾರ ಉತ್ಪಾದನೆ ಸಾಧ್ಯ. ಆಹಾರ ಉತ್ಪಾದನೆ ಸೌಲಭ್ಯಗಳೇ ಇಲ್ಲದಿದ್ದರೆ ಉತ್ಪಾದನೆ ನಿಂತು ಹೋಗುತ್ತದೆ. ಇದರಿಂದ ಆಹಾರದ ಕೊರತೆ ಉಂಟಾಗುತ್ತದೆ. ವಿದ್ಯುತ್ ನೀತಿ ಬದಲಾವಣೆ ಆಗಬೇಕು” ಎಂದು ಚಾಮರಸ ಮಾಲೀ ಪಾಟೀಲ್ ಹೇಳಿದರು.
ರಾಯಚೂರು ಭಾಗದಲ್ಲಿ ಕಳೆದ ಬಾರಿ ಜೋಳ ಖರೀದಿ ಮಾಡಿದ್ದು, ಸಾಕಷ್ಟು ರೈತರಿಗೆ ಹಣ ಪಾವತಿಸಿಲ್ಲ, ಬೇರೆ ಭಾಗದಲ್ಲಿ ಹಣ ಪಾವತಿಸಿದೆ. ಈ ಭಾಗದಲ್ಲಿ ಮಾತ್ರ ತಾರತಮ್ಯ ಮಾಡಲಾಗಿದೆ. ಪ್ರತಿಭಟಿಸಿ ಒತ್ತಡ ಹಾಕಿದಾಗ ಕೆಲವು ರೈತರಿಗೆ ಮಾತ್ರ ಪಾವತಿಸಿದ್ದಾರೆ. ಇದೀಗ ಮಳೆಗಾಲ ಆರಂಭವಾಗಿದ್ದು, ರೈತರಿಗೆ ಹಣ ಪಾವತಿಸಿದರೆ ಬೀಜ ಗೊಬ್ಬರ ಖರೀದಿ ಮಾಡಬಹುದು. ಹಣ ಪಾವತಿಸಿಲ್ಲವೆಂದರೆ, ರೈತರು ಜೀವನ ನಡೆಸಲು ಸಾಧ್ಯವಿಲ್ಲ. ರಾಜ್ಯದಲ್ಲಿ 1180 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ? ಫಸಲು ವಿಮಾ ಕಂಪನಿಗೆ ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಹಣ ಪಾವತಿಯಾಗಿಲ್ಲ, ದುರ್ಬಳಕೆ ಯಾಗಿದೆ. ಈ ಬಗ್ಗೆ ದೂರು ನೀಡಿದೆ. ಆದರೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಎಸ್ಟಿ ನಿಗಮಕ್ಕಿಂತ ದೊಡ್ಡ ಹಗರಣವಾಗಿದೆ. ಇದರಲ್ಲಿ ಕೃಷಿ ಮಂತ್ರಿ ಭಾಗಿಯಾಗಿದ್ದಾರೆ” ಎಂದು ಆರೋಪಿಸಿದರು.
ಇಂದಿನಿಂದ ಅಧಿವೇಶನ ಆರಂಭವಾಗಿದೆ. ಸರ್ಕಾರದ ಗಮನ ಸೆಳೆಯಲು ಹಾಗೂ ರೈತರ ಸಮಸ್ಯೆಗಳಿಗೆ ಬೇಡಿಕೆಗಳಿಗೆ ಸ್ಪಂದಿಸಬೇಕು. ಸದನದಲ್ಲಿ ಪ್ರಶ್ನಿಸಬೇಕು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಬೂದಯ್ಯಸ್ವಾಮಿ ಗಬ್ಬೂರು, ಗೋವಿಂದ ನಾಯಕ, ದೇವರಾಜ ನಾಯಕ, ಬೊಮ್ಮಯ್ಯ ಆಚಾರಿ ಇದ್ದರು.





