ತಾಲೂಕಿನ ಪುಚ್ಚಲದಿನ್ನಿ ಗ್ರಾಮದ ಬಳಿ ಸುಮಾರು 20ಕ್ಕೂ ಹೆಚ್ಚು ಕುರಿಗಳು ಉಸಿರುಗಟ್ಟಿಕೊಂಡು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಈ ಕುರಿಗಳು ಗ್ರಾಮದ ಭೀಮಣ್ಣ ಹಾಗೂ ವೀರೇಶ ಅವರಿಗೆ ಸೇರಿದ್ದವು ಎಂದು ತಿಳಿದು ಬಂದಿದೆ.
ಮಾಹಿತಿಯ ಪ್ರಕಾರ, ಕುರಿ ಹಿಂಡನ್ನು ಎಂದಿನಂತೆ ಮೇಯಿಸಲು ಹೊರತಂದಾಗ ರಸ್ತೆ ಮೇಲೆ ವಾಹನ ಸಂಚಾರ ಹೆಚ್ಚಿದ್ದರಿಂದ ದಟ್ಟಣೆ ಉಂಟಾಯಿತು. ವಾಹನಗಳ ಹಾರನ್ ಶಬ್ದಕ್ಕೆ ಬೆದರಿದ ಕುರಿಗಳು ಆತಂಕಗೊಂಡು ಓಡಿಹೋಗಿದ್ದು, ಈ ನಡುವೆ ಪರಸ್ಪರ ಒಂದರ ಮೇಲೊಂದು ಬಿದ್ದು ಗುಂಪಾಗಿ ಸಿಲುಕಿಕೊಂಡಿವೆ. ಉಸಿರಾಟಕ್ಕೆ ತೊಂದರೆ ಉಂಟಾಗಿ ಹೆಚ್ಚಿನ ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು ಕಳೆದುಕೊಂಡ ಮಾಲೀಕರು ಆಕ್ರಂದನದಲ್ಲಿ ಮುಳುಗಿದ್ದು, ಆರ್ಥಿಕವಾಗಿ ದೊಡ್ಡ ಆಘಾತ ಅನುಭವಿಸಿದ್ದಾರೆ.
ಘಟನೆಯ ಕುರಿತು ಮಾಹಿತಿಯನ್ನು ಪಡೆದ ಇಡಪನೂರು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಪಶುವೈದ್ಯರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಕುರಿಗಳ ಸಾವಿನ ಬಗ್ಗೆ ವರದಿ ಪಡೆದ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಇಡಪನೂರು ಪೊಲೀಸ್ ಠಾಣೆಯ ಪಿಎಸ್ಐ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮನೆ ಕಳ್ಳತನ ಆರೋಪಿ ಬಂಧನ; 36.22 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಇಡಪನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ದಾಖಲಾಗಿದೆ.





