ಬಿಸಿಯೂಟ ತಯಾರಿಕೆಗಾಗಿ ನೀರು ತರಲು ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕರು ಕಳುಹಿಸಿದ್ದು, ನೀರು ತರುವ ವೇಳೆ ವಿದ್ಯಾರ್ಥಿಗೆ ಗಾಯಗಳಾಗಿವೆ. ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಿದ ಮುಖ್ಯ ಶಿಕ್ಷಕ ಮತ್ತು ಗ್ರಾಮ ಪಂಚಾಯತಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.
ರಾಯಚೂರು ಜಿಲ್ಲೆಯ ಮಸೀದಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ನೀರು ತರಲು ಕಳುಹಿಸಲಾಗಿತ್ತು. 5ನೇ ತರಗತಿ ವಿದ್ಯಾರ್ಥಿ ಭರತ್ ಎಂಬಾತ ಆಟೋದಿಂದ ನೀರಿನ ಕೊಡ ಒಯ್ಯುವಾಗ ನೀರಿನ ಕೊಡ ಬಿದ್ದು, ಆತನ ಕೈ ಮುರಿದಿದೆ ಎಂದು ಸಂಘದ ಮುಖಂಡರು ಆರೋಪಿಸಿದ್ದಾರೆ.
ಆತನನ್ನು ರಾಯಚೂರಿನ ಸುರಕ್ಷಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೂಡಲೇ ತಪ್ಪಿತಸ್ಥ ಮುಖ್ಯ ಶಿಕ್ಷಕ ಮತ್ತು ಪಿಡಿಒ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ತಿಮ್ಮಪ್ಪ ಮಲದಕಲ್, ಉಪಾಧ್ಯಕ್ಷ ನಾಗರಾಜ ಮನವಿ ಮಾಡಿದ್ದಾರೆ.




