ಮಾನ್ವಿ ಹಾಗೂ ಸಿರವಾರ ತಾಲ್ಲೂಕಿನ ಕರಡಿಗುಡ್ಡ ಕೆ.ಗುಡದಿನ್ನಿ, ಜಂಬಲದಿನ್ನಿ, ಚಾಗಬಾವಿ ಹಾಗೂ ಜಾಗೀರ್ ಪನ್ನೂರು ಗ್ರಾಮಗಳ ನಿವಾಸಿಗಳು ದಿನನಿತ್ಯ ಬಸ್ ಸೇವೆಯ ಅನಿಯಮಿತ ವೇಳಾಪಟ್ಟಿಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೇ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಭೀಮಸೇನೆ ಕರ್ನಾಟಕ ವಿದ್ಯಾರ್ಥಿ ಘಟಕ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಾನ್ವಿ ಬಸ್ ಡಿಪೋ ಅಧಿಕಾರಿಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥರ ಪ್ರಕಾರ, ಸಿರವಾರ ಮತ್ತು ಮಾನ್ವಿ ತಾಲ್ಲೂಕು ಕೇಂದ್ರಕ್ಕೆ ಬೆಳಿಗ್ಗೆ 6 ಗಂಟೆಗೆ ಕರಡಿಗುಡ್ಡ ಕೆ.ಗುಡದಿನ್ನಿ, ಜಂಬಲದಿನ್ನಿ, ಚಾಗಬಾವಿ ಹಾಗೂ ಜಾಗೀರ್ ಪನ್ನೂರು ಗ್ರಾಮದ ಮಾರ್ಗದಿಂದ ತಾಲ್ಲೂಕು ಕೇಂದ್ರಕ್ಕೆ ತೆರಳಲು ಬಸ್ ವ್ಯವಸ್ಥೆ ಸರಿಯಾಗಿ ಕಲ್ಪಿಸಬೇಕು. ಸಮಯಕ್ಕೆ ಬಾರದೆ ಕಾರಣ ಉದ್ಯೋಗಕ್ಕೆ ತೆರಳುವವರು, ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳು ನಿರಂತರವಾಗಿ ವಿಳಂಬಕ್ಕೆ ಒಳಗಾಗುತ್ತಿದ್ದಾರೆ ಎಂದರು.
ಇದೇ ರೀತಿ, ಮಾನ್ವಿ ತಾಲ್ಲೂಕು ಕೇಂದ್ರದಿಂದ ಮಧ್ಯಾಹ್ನ 2 ಗಂಟೆಗೆ ಬಸ್ ಹೊರಡಬೇಕು. ಸರಿಯಾದ ಸಮಯಕ್ಕೆ ಹೊರಡದ ಕಾರಣಕ್ಕೆ ಹಾಗೂ ನಿಗದಿತ ವೇಳೆಗೆ ಬಸ್ ಸಿಗದಿರುವುದು ವಿದ್ಯಾರ್ಥಿಗಳು ಮನೆಗಳಿಗೆ ತಲುಪುವುದರಲ್ಲಿ ತೊಂದರೆ ಅನುಭವಿಸುತ್ತಿದ್ದು, ಜನಸಾಮಾನ್ಯರ ದೈನಂದಿನ ಕಾರ್ಯಗಳಿಗೂ ಅಡಚಣೆ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಈ ಬಸ್ ಸಮಯದ ಅವ್ಯವಸ್ಥೆಗೆ ತಕ್ಷಣ ಕ್ರಮಕೈಗೊಂಡು ಈ ಭಾಗದ ಬಸ್ ಗಳನ್ನು ನಿಗದಿತ ವೇಳೆಗೆ ಬಿಡುವಂತೆ ಭೀಮಸೇನೆ ಕರ್ನಾಟಕ ವಿದ್ಯಾರ್ಥಿ ಘಟಕ ವತಿಯಿಂದ ಮಾನ್ವಿ ಬಸ್ ಡಿಪೋ ಅಧಿಕಾರಿಗೆ ಹಕ್ಕೊತ್ತಾಯ ಸಲ್ಲಿಸಿದರು. ಹೀಗೆ ನಿರ್ಲಕ್ಷ್ಯ ವಹಿಸಿದರೆ ಮಾನ್ವಿ ತಾಲ್ಲೂಕಿನ ಶಾಲಾ – ಕಾಲೇಜು ವಿದ್ಯಾರ್ಥಿಗಳು ಸೇರಿ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಹಲ್ಲೆ; ಇಬ್ಬರ ಬಂಧನ
ಈ ವೇಳೆ ವಿದ್ಯಾರ್ಥಿ ಮುಖಂಡ ಪ್ರಶಾಂತ, ಶಾಂತರಾಜ್ , ಮುನಿಸ್ವಾಮಿ, ಸುನಿತಾ, ಪುಷ್ಪ, ಸಂಜಯ್, ವಿನೋದ್ ಭಾರ್ಗವ್, ಜಂಬಣ್ಣ, ಮೌನೇಶ, ಯಲ್ಲಮ್ಮ, ಸಾಯಿ ಕುಮಾರ್, ನಾಗರಾಜ್, ಉಪಸ್ಥಿತರಿದ್ದರು.





