ರಿ-ಬೂಟ್ ಹೆಸರಿನಲ್ಲಿ ರಾಯಚೂರು ನಗರದ ಸಮಗ್ರ ಅಭಿವೃದ್ದಿ ಮಾಡುವುದಾಗಿ ಹೇಳುವ ಸಚಿವ ಎನ್ ಎಸ್ ಬೋಸರಾಜು ಅವರು ಜನರ ಕಣ್ಣೋರಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರುಪಾಕ್ಷಿ ಆರೋಪಿಸಿದರು.
ನಗರದಲ್ಲಿ ನಡೆದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, “ನಗರದ ಸಮಗ್ರ ಅಭಿವೃದ್ಧಿಗೆ ಹೊಸ ವಿನ್ಯಾಸದ ವರದಿಯನ್ನು ನೀಡಿದ್ದು, ರಿ-ಬೂಟ್ ರಾಯಚೂರು ಪರಿಕಲ್ಪನೆಯೊಂದಿಗೆ 20 ಸಾವಿರ ಎಕರೆ ಪ್ರದೇಶದ ಅಭಿವೃದ್ಧಿ ಮಾಡಲು ಮುಂದಾಗಿರುವ ಸಚಿವ ಎನ್ ಎಸ್ ಬೋಸರಾಜು ಅವರ ದೂರದೃಷ್ಟಿ ಸ್ವಾಗತಾರ್ಹ. ಅದರೆ ಸರ್ಕಾರ ಎಲ್ಲ ಅನುದಾನವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡುತ್ತಿದ್ದು, ಇದಕ್ಕೆ ಅನುದಾನ ನೀಡಲು ಅಸಾಧ್ಯ” ಎಂದರು.
“ಅಭಿವೃದ್ಧಿ ಕೆಲಸಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಕೂಡಿಕೊಂಡು ಕೆಲಸ ಮಾಡದೆ ತಾವೇ ಉಸ್ತುವಾರಿ ಎಂದು ಬೀಗಿ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ಮಾಡುವುದು ಸಲ್ಲ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಆಯ್ಕೆಯಾಗದೇ ಇರುವವರಿಗೆ ಸಚಿವ ಸ್ಥಾನ ನೀಡಿದ್ದು, ಕಾಂಗ್ರೆಸ್ ಸಚಿವರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಇದನ್ನು ಮೊದಲು ಬಗೆ ಹರಿಸಿಕೊಳ್ಳಬೇಕು” ಎಂದು ಹೇಳಿದರು.
“ಸಚಿವ ಎನ್ ಎಸ್ ಬೋಸರಾಜು ಅವರು ತಾವೇ ಉಸ್ತುವಾರಿ ಸಚಿವರಂತೆ ಅಧಿಕಾರಿಗಳೊಂದಿಗೆ ಸಭೆ ಮಾಡುತ್ತಿದ್ದು, ಮತ್ತೊಂಡೆದೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತೇಕ ಸಭೆಗಳು ಮಾಡುತ್ತಿದ್ದಾರೆ. ಇದರ ಜೊತೆಗೆ ಯಾವುದೇ ಜನಪ್ರತಿನಿಧಿಯಲ್ಲದ ಬೋಸರಾಜರ ಮಗ ರವಿ ಬೋಸರಾಜು ಅಧಿಕಾರಿಗಳನ್ನು ಕರೆದು ಸಭೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ರಿ-ಬೂಟ್ ಹೆಸರಿನಲ್ಲಿ ನಗರ ಸಮಗ್ರ ಅಭಿವೃದ್ಧಿಗೆ ಸಚಿವ ಬೋಸರಾಜು ಮುಂದಾಗಿದ್ದು, 20 ಸಾವಿರ ಎಕರೆಯಲ್ಲಿ ಅಭಿವೃದ್ಧಿ ಮಾಡಲು ವರದಿ ನೀಡಿದ್ದು, ಜಿಲ್ಲೆಯ ಜನರ ಕಿವಿಗೆ ಹೂ ಇಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅನುದಾನವಿಲ್ಲ. ಇನ್ನು ಇಂತಹ ದೊಡ್ಡ ಗಾತ್ರದ ಯೋಜನೆಗೆ ಸರ್ಕಾರ ಅನುದಾನ ಕೊಡಲು ಸಾಧ್ಯವೇ?” ಎಂದರು.
“ಜಿಲ್ಲೆಯ ಜನರಿಗೆ ಅಭಿವೃದ್ಧಿ ಹೆಸರಿನಲ್ಲಿ ಮೊಸ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಬಣ ರಾಜಕೀಯದಲ್ಲಿ ಜಿಲ್ಲೆಯ ಅಭಿವೃದ್ಧಿ ಅಸಾಧ್ಯವಾಗಿದೆ. ಉಸ್ತುವಾರಿ ಸಚಿವ ಶರಣ ಪ್ರಕಾಶ ಜೊತೆಗೆ ಕಾಂಗ್ರೆಸ್ನ 3 ಮಂದಿ ಶಾಸಕರು ಮತ್ತು ಎನ್ ಎಸ್ ಬೋಸರಾಜು ಅವರ ಬಣದ ರಾಜಕೀಯ ನಡೆದಿದೆ. ಶಾಸಕರಲ್ಲದವರಿಗೆ ಮಂತ್ರಿ ಸ್ಥಾನ ನೀಡಿದರ ಬಗ್ಗೆ ಅಸಮಾನವಿದೆ. ಜೊತೆಗೆ ಯಾವುದೇ ಶಾಸಕರಿಗೆ ಸರ್ಕಾರದ ಅನುದಾನ ನೀಡುವುದಿಲ್ಲವೆಂದು ತಿಳಿಸಿದೆ. ಇದರ ಮಧ್ಯೆ ಜಿಲ್ಲೆಯ ಅಭಿವೃದ್ಧಿ ಶ್ಯೂನ್ಯವಾಗಿದೆ” ಎಂದರು.
“ನಗರ ಮತ್ತು ಜಿಲ್ಲೆಯಲ್ಲಿ ಸಾಕಷ್ಟು ರಸ್ತೆಗಳು, ಕಾಲುವೆಗಳು, ಸೇತುವೆಗಳು ಹಾಳಾಗಿ ಹೋಗಿವೆ. ಸ್ವಚ್ಛತೆ ಮರೆಯಾಗಿದೆ. ಜೊತೆಗೆ ಕಾರ್ಮಿಕರಿಗೆ ವೇತನ ನೀಡಿಲ್ಲ. ಸಾಕಷ್ಟು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಸರ್ಕಾರ ಮಾಡಬೇಕಿದೆ” ಎಂದರು.
“ಎಸ್ಸಿ/ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದಲ್ಲಿ 11 ಸಾವಿರ ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿದ್ದು, ದಲಿತರು ಅಭಿವೃದ್ಧಿಯಾಗಬಾರದು ಎನ್ನುವ ಉದ್ದೇಶ ಹೊಂದಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಎಸ್ಸಿಎಸ್ಪಿ/ಟಿಎಸ್ಪಿ ವಾಪಸ್ ಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ: ಬೊಮ್ಮಾಯಿ ಎಚ್ಚರಿಕೆ
“ರವಿ ಬೋಸರಾಜ ಅವರು ದೇವದುರ್ಗ ತಾಲೂಕಿನ ಬಾಗೂರಿನಲ್ಲಿ ಅಕ್ರಮ ಮರಳು ಸಾಗಾಣೆಗೆ ಮುಂದಾಗಿದ್ದಾರೆ. ಬಾಬು ಎನ್ನುವ ಗುತ್ತಿಗೆದಾರರ ಮೂಲಕ ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದಾರೆ” ಎಂದು ದೂರಿದರು.
“ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟೀಲ್ ಅವರು ಜಿಲ್ಲೆಗೆ 2 ಬಾರಿ ಉಸ್ತುವಾರಿ ಸಚಿವರಾಗಿದ್ದು, ಅವರಿಂದ ಯಾವುದೇ ಅಭಿವೃದ್ಧಿ ಅಸಾಧ್ಯ. ತಿಂಗಳಿಗೊಮ್ಮೆ ಬಂದು ಹಣ ಲೂಟಿ ಮಾಡಿ ಸೂಟ್ಕೇಸ್ ತುಂಬಿಕೊಂಡು ಹೋಗುವ ಸಚಿವರಾಗಿದ್ದಾರೆ. ಇವರ ಜೊತೆಗೂಡಿ ಕಾಂಗ್ರೆಸ್ ಶಾಸಕರು ಬಣ ರಾಜಕೀಯ ಮಾಡುತ್ತಿದ್ದಾರೆ. ಇವರಿಂದ ಜಿಲ್ಲೆಯ ಅಭಿವೃದ್ಧಿ ಅಸಾಧ್ಯ” ಎಂದರು.
ಈ ಸಂದರ್ಭದಲ್ಲಿ ಶಿವಶಂಕರ ವಕೀಲ, ವಿಶ್ವನಾಥ ಪಟ್ಟಿ ಸೇರಿ ಇತರರು ಇದ್ದರು.




