ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ಅವರ ಅಧಿಕಾರ ದುರುಪಯೋಗದ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಭೀಮ್ ಆರ್ಮಿ ದೇವದುರ್ಗ ತಾಲ್ಲೂಕಾಧ್ಯಕ್ಷ ವಿಶ್ವನಾಥ ಬಲ್ಲಿದೇವ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಕೂಡಲೇ ಶಾಸಕಿ ವಿರುದ್ದ ಪ್ರಕರಣ ದಾಖಲಿಸಿ ಶಿಸ್ತು ಕ್ರಮಕೈಗೊಳ್ಳಬೇಕು ಹಾಗೂ ವಿಶ್ವನಾಥ ಬಲ್ಲಿದೇವ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಭೀಮ್ ಆರ್ಮಿ ಜಿಲ್ಲಾ ಘಟಕ ವತಿಯಿಂದ ವಿಧಾನಸಭೆ ಅಧ್ಯಕ್ಷರು ಯುಟಿ.ಖಾದರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಒಂದು ವರ್ಷದಿಂದ ಆಡಳಿತಾತ್ಮಕ ವಿಚಾರಗಳನ್ನು ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ಬೆಂಬಲಿಗರಿಂದ ನನಗೆ ನಿರಂತರವಾಗಿ ಜೀವ ಬೆದರಿಕೆಗಳು ಬರುತ್ತಿವೆ. ಈ ಕುರಿತು ದೇವದುರ್ಗ ಪೊಲೀಸ್ ಠಾಣೆ, ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮಾನ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನನ್ನ ಜೀವಕ್ಕೆ ಯಾವುದೇ ಅಪಾಯ ಸಂಭವಿಸಿದರೆ, ಅದಕ್ಕೆ ಸಂಬಂಧಿಸಿದ ಶಾಸಕರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಶಾಸಕಿ ಕರೆಮ್ಮ.ಜಿ.ನಾಯಕ್ ಅವರು ಈಗಾಗಲೇ ಪ್ರವಾಸಿ ಮಂದಿರದಲ್ಲಿ ಅನಧಿಕೃತವಾಗಿ ಬೃಹತ್ ಶಾಸಕರ ಕಾರ್ಯಾಲಯ ಎಂಬ ನಾಮಫಲಕ ಅಳವಡಿಸಿಕೊಂಡು, ಅಲ್ಲಿ ಸಂಘ–ಸಂಸ್ಥೆಗಳ ಸಭೆಗಳನ್ನು ನಡೆಸಿದಂತೆ ಪ್ರದರ್ಶಿಸಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದರು ಹಾಗೂ ತಹಶೀಲ್ದಾರ್ ಕಚೇರಿಯ ಮುಖ್ಯ ಕುರ್ಚಿಯಲ್ಲಿ ಕುಳಿತು ಸಭೆ ನಡೆಸಿರುವ ವಿಚಾರವನ್ನು ಪ್ರಶ್ನಿಸಿ ಪತ್ರಿಕಾ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ನನಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಂಪಿಸಿಎಲ್- ಕೃಷ್ಣಬ್ರಿಡ್ಜ್ ರಸ್ತೆಯಲ್ಲಿ ನಿಲ್ಲದ ರಸ್ತೆ ಅಪಘಾತ
ಆಡಳಿತಾತ್ಮಕ ನಿಯಮಗಳನ್ನು ಉಲ್ಲಂಘಿಸಿ ಜನಪ್ರತಿನಿಧಿಗಳು ಅಧಿಕಾರ ದುರುಪಯೋಗ ಮಾಡಿರುವುದನ್ನು ಬಹಿರಂಗಪಡಿಸಿದ್ದಕ್ಕೆ ಈ ರೀತಿ ಬೆದರಿಕೆ ನೀಡಲಾಗುತ್ತಿದೆ. ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಂಘಟನಾಕಾರರು ಆಗ್ರಹಿಸಿದರು.





