ರಾಯಚೂರು ನಗರ ಹಾಗೂ ತಾಲೂಕಿನ ವಿವಿಧೆಡೆ ಸುರಿದ ಏಕಾಏಕಿ ಮಳೆಯ ಪರಿಣಾಮ ಹೊಲದಲ್ಲಿ ಕಟಾವು ಮಾಡಿದ ಜೋಳ ಹಾನಿಗೀಡಾಗುವಂತಾಗಿದೆ. ಜಿಲ್ಲೆಯ ಬಹುತೇಕ ಕಡೆ ಜೋಳ ರಾಶಿ ನಡೆದಿದ್ದು, ಜೋಳ ಕಟಾವು ಮಾಡಿ ನೆಲದ ಮೇಲೆ ಹಾಕಲಾಗಿದೆ. ಏಕಾಏಕಿ ಮಳೆ ಬಂದಿದ್ದರಿಂದಾಗಿ ಜೋಳ ನೆಲದ ಪಾಲಾಗುವಂತಾಗಿದೆ.
ರಾಯಚೂರು ತಾಲೂಕಿನ ಮನ್ಸಲಾಪೂರ, ಹೊಸಪೇಟೆ, ಮರ್ಚೇಡ್, ಮಲ್ಲಾಪೂರ, ಜೇಗರಕಲ್ ಸೇರಿದಂತೆ ಸೋಮವಾರ ಬೆಳಗಿನ ಜಾವ, ತಡರಾತ್ರಿ ಮಳೆ ಸುರಿದಿದೆ. ಅಕಾಲಿಕವಾಗಿ ಮಳೆ ಸುರಿಯುತ್ತಿರುವುದರಿಂದ ಬಿಳಿ ಜೋಳ ಬೆಳೆದ ರೈತರಲ್ಲಿ ಆತಂಕ ಮೂಡಿದೆ.
ಜೋಳ ಕಟಾವು ಮಾಡಿದ್ದರಿಂದ ರಾಶಿ ಸಂದರ್ಭದಲ್ಲಿ ಜೋಳ ಕಪ್ಪಾಗಲಿದೆ. ಇದರಿಂದ ರೈತರು ಹಾನಿ ಅನುಭವಿಸುವಂತಾಗಿದೆ. ಮೋಡ ಕವಿದ ವಾತಾವರಣದಿಂದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದ್ದ ಮಳೆ ಸುರಿದಿರುವುದು ಅನ್ನದಾತರಿಗೆ ಭೀತಿ ಮೂಡಿಸಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಮೋಡ ಮುಸುಕಿದ ವಾತಾವರಣವಿದೆ.
ಅಕಾಲಿಕ ಮಳೆ ಹೊಡೆತಕ್ಕೆ ಬೆಳೆದು ನಿಂತ ಬೆಳೆಗಳು ನೆಲಕಚ್ಚಿದ್ದು ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಬೀಳಿಜೋಳ, ಕಟಾವು ಮಾಡಿ ಇನ್ನೇನು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಾಸ್ಟೆಲ್ ವಿದ್ಯಾರ್ಥಿಗಳಿಂದ ಮಧ್ಯರಾತ್ರಿ ಪ್ರತಿಭಟನೆ; ಮೂಲಸೌಲಭ್ಯ ಕಲ್ಪಿಸಲು ಒತ್ತಾಯ
ಅಕಾಲಿಕ ಮಳೆಯಿಂದ ಸಾವಿರಾರು ಪ್ರದೇಶದಲ್ಲಿ ಬೆಳೆ ಹಾನಿಗೊಳಗಾಗಿದ್ದು ಜಿಲ್ಲಾಡಳಿತ ಬೆಳೆಗಳ ಸಮೀಕ್ಷೆ ನಡೆಸಿ ಹಾನಿ ಅನುಭವಿಸಿದ ರೈತರ ನೆರವಿಗೆ ಮುಂದಾಗಬೇಕೆಂಬುದು ರೈತರ ಒತ್ತಾಯವಾಗಿದೆ.





