21ನೇ ಶತಮಾನದಲ್ಲಿ ದೇಶವು ವ್ಯಾಪಕ ಖಾಸಗೀಕರಣದ ಹಾದಿಯಲ್ಲಿ ಸಾಗುತ್ತಿದೆ. ಸಾರ್ವಜನಿಕ ವಲಯದ ಅನೇಕ ಉದ್ಯಮಗಳನ್ನು ಕೋಟ್ಯಾಧಿಪತಿಗಳಿಗೆ ಮಾರಾಟ ಮಾಡುತ್ತಿರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಖಾಸಗಿ ವಲಯಕ್ಕೆ ಹೆಚ್ಚುವರಿ ಆದ್ಯತೆ ನೀಡಲಾಗುತ್ತಿದ್ದು, ಇದರ ಪರಿಣಾಮವಾಗಿ ಮೀಸಲಾತಿಯ ಭವಿಷ್ಯವೇನು? ಎಂಬ ಕುರಿತು ಗಂಭೀರ ಚರ್ಚೆಯ ಅಗತ್ಯವಾಗಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಕಿವಿಮಾತು ಹೇಳಿದರು.
ರಾಯಚೂರು ನಗರದಲ್ಲಿ ನಡೆದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತಾನಾಡಿದ ಅವರು, “ಖಾಸಗೀಕರಣ ಪ್ರಬಲವಾಗುತ್ತ ಹೋದರೆ, ಖಾಸಗೀಕರಣವೇ ಈ ದೇಶದ ಜೀವನ ವಿಧಾನವಾಗಿಬಿಟ್ಟರೆ, ಅಲ್ಲಿ ಮೀಸಲಾತಿಗೆ ಎಷ್ಟರ ಮಟ್ಟಿಗೆ ಅವಕಾಶ ಉಳಿಯುತ್ತದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಖಾಸಗೀಕರಣವು ಸ್ವಾರ್ಥಪರವಾಗಿದ್ದು, ಲಾಭಕೇಂದ್ರಿತವಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳು ಹಾಗೂ ಸಂವಿಧಾನಾತ್ಮಕ ಮೌಲ್ಯಗಳು ಹೇಗೆ ಉಳಿಯಲಿವೆ ಎಂಬ ಪ್ರಶ್ನೆಗಳನ್ನು ನಾವು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಸಮಾಜದಲ್ಲಿ ನಿಜವಾದ ಬದಲಾವಣೆ ಆಗಬೇಕಾದರೆ ಜಾತಿ ವಿನಾಶವಾಗಬೇಕೆಂದು ನಾವು ಸದಾ ಹೇಳುತ್ತ ಬಂದಿದ್ದೇವೆ. ಆದರೆ ವಾಸ್ತವದಲ್ಲಿ ಜಾತಿ ವಿನಾಶವಾಗುವ ಬದಲು ಜಾತಿಯೇ ಮತ್ತಷ್ಟು ವಿಕಾಸವಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಮಿಕ ವಿರೋಧಿ ಶ್ರಮನೀತಿ-25 ರದ್ದಾಗಲಿ: ಕಾರ್ಮಿಕರ ಹಕ್ಕುಗಳ ದಿನವಾಗಿ ಶ್ರಮಿಕ ಶಕ್ತಿ ಪ್ರತಿಭಟನೆ
“ಒಂದು ಕಾಲದಲ್ಲಿ ಶಿಕ್ಷಣ ಬಂದರೆ ಜಾತಿ ವ್ಯವಸ್ಥೆ ತಾನಾಗಿಯೇ ಕುಸಿಯುತ್ತದೆಂದು ನಾವು ನಂಬಿದ್ದೆವು. ಆದರೆ ಇಂದಿನ ಸ್ಥಿತಿಯಲ್ಲಿ ಹೆಚ್ಚು ಶಿಕ್ಷಣ ಪಡೆದವರೇ ಜಾತಿ ವಿಚಾರವನ್ನು ಹೆಚ್ಚು ಪ್ರಸ್ತಾಪಿಸುತ್ತಿರುವುದು ವಿಪರ್ಯಾಸವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.





