ಉದ್ಯೋಗ ಖಾತ್ರಿ ಸಮರ್ಪಕ ಅನುಷ್ಠಾನ ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಮಹಿಳಾ ಒಕ್ಕೂಟ ಕಾರ್ಯಕರ್ತರು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಮಳೆಯ ನಡುವೆಯೂ ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಿದರು.
“ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ) ಅಡಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ತುಂಬಾ ಕೀಳಾಗಿ ಕಾಣುತ್ತಾರೆ” ಎಂದು ಮಹಿಳಾ ಕೂಲಿ ಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಕೂಸ್ ಕಾರ್ಯಕರ್ತೆ ವಿರುಪಮಾ ಉದ್ಬಾಳ ಈ ದಿನ.ಕಾಮ್ ಜೊತೆ ಮಾತನಾಡಿ, “ಕೆ ಬಸ್ಸಾಪೂರು ಪಂಚಾಯಿತಿ ಕಂಪ್ಯೂಟರ್ ಆಪರೇಟ್ ಪಂಪಯ್ಯ ಸ್ವಾಮಿ ಎಂಬಾತ ಮಹಿಳೆಯರನ್ನು ಏಕವಚನದಲ್ಲಿ ಮಾತನಾಡಿಸುತ್ತಾನೆ. ಅಸಭ್ಯವಾಗಿ ನಡೆದುಕೊಂಡು ಅನುಚಿತ ವರ್ತನೆ ತೋರುತ್ತಿದ್ದಾನೆ. ಹಾಗಾಗಿ ಈತನನ್ನು ಕೂಡಲೇ ಅಮಾನತು ಗೋಳಿಸಬೇಕೆಂದು ಈ ಹಿಂದೆಯೂ ತಾಲೂಕು ಪಂಚಾಯತ್ ಅಧಿಕಾರಿ ಗಮನಕ್ಕೆ ತರಲಾಗಿತ್ತು. ಆದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ” ಎಂದು ಆರೋಪಿಸಿದರು.
“ಹೊಸಳ್ಳಿ ಇ ಜೆ, ಸಾಸಲಮರಿ, ಸಾಸಲಮರಿ ಕ್ಯಾಂಪ್, ಹೊಸಳ್ಳಿ ಕ್ಯಾಂಪ್, ಹನುಮಾನ್ ನಗರ ಕ್ಯಾಂಪ್ ಸೇರಿದಂತೆ ಹಲವೆಡೆ ನೀರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದ್ದು, ಕೂಡಲೇ ನಿರುದ್ಯೋಗ ಭತ್ಯೆ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
“ಹೊಸಳ್ಳಿ ಇ ಜೆ ಕ್ಯಾಂಪಿನಲ್ಲಿ ಕೆಲಸ ಮಾಡುವಾಗ ಬಸವರಾಜ ಎನ್ನುವ ವ್ಯಕ್ತಿಗೆ ಹೃದಯಘಾತವಾಗಿದ್ದು, ಆಸ್ಪತ್ರೆಯ ಬಿಲ್ ಪಾವತಿಗೆ ಕ್ರಮ ಜರುಗಿಸಬೇಕು. ಜೊತೆಗೆ 41 ಜಾಬ್ ಕಾರ್ಡ್ ವಿತರಣೆ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಟಿ ಜಿಟಿ ಮಳೆ; ಮುಂದುವರೆದ ದಸಂಸ ಧರಣಿ
ಈ ವೇಳೆ ಜಿಲ್ಲಾ ಯೋಜನಾ ನಿರ್ದೇಶಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು, ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದು, ಅನಿರ್ದಿಷ್ಟಾವಧಿ ಧರಣಿ ಹಿಂಪಡೆಯುವಂತೆ ಕೋರಿದರು. ಬಳಿಕ ಗ್ರಾಮೀಣ ಕೂಲಿಕಾರರು ಪ್ರತಿಭಟನೆ ಹಿಂಪಡೆದಿದ್ದಾರೆ.
ಪ್ರತಿಭಟನೆಯಲ್ಲಿ ಗುಂಡಪ್ಪ ಯರಡೋಣಾ, ಇಂದ್ರಮ್ಮ, ಮರಿಯಮ್ಮ, ಶ್ರದಾಕ್ ಶ್ರಯ ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತೆಯರು ಇದ್ದರು.




