ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಹಾಗೂ ರಾಯಚೂರು ಭಾಗವನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ ಧರಣಿ ನಡೆಸಿದರು.
“ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ತತ್ತರಿಸಿದ್ದು, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕಾಯಕ ಬಂಧುಗಳಿಗೆ ಗುರುತಿನ ಚೀಟಿ, ಪ್ರೋತ್ಸಾಹಧನ ನೀಡುತ್ತಿಲ್ಲ. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸವನ್ನು 200 ದಿನಗಳಿಗೆ ಹೆಚ್ಚಿಸಿ ಕೂಲಿಕಾರರಿಗೆ ₹600 ಕೂಲಿಯನ್ನು ನೀಡಬೇಕು” ಎಂದು ಒತ್ತಾಯಿಸಿದರು.
“ಕಾಯಕ ಬಂಧುಗಳು ಅಥವಾ ಕೂಲಿಕಾರರು ಫಾರಂ ನಂಬರ್ 6ರ ಅರ್ಜಿ ಕೊಡಲು ಬಂದಾಗ ಪಿಡಿಒ ಪಂಚಾಯತಿ ಕೇಂದ್ರದಲ್ಲಿದ್ದು, ಅರ್ಜಿ ಸ್ವೀಕರಿಸಿದ ಪ್ರತಿಯನ್ನು ಸಹಿ ಮೊಹರಿನೊಂದಿಗೆ ಕೊಡಬೇಕು. ಕಾಯಕ ಬಂಧುಗಳಿಗೆ ಗುರಿತಿನ ಚೀಟಿ ಮತ್ತು ಪ್ರೋತ್ಸಾಹ ಧನ ನೀಡಬೇಕು. ಕಾಯಕ ಬಂಧುಗಳು ಮತ್ತು ಕೂಲಿಕಾರರನ್ನು ಪಂಚಾಯತಿಯಲ್ಲಿ ದಾಖಲು ಮಾಡಿ ಕಂಪ್ಯೂಟರ್ ತಂತ್ರಾಂಶದಲ್ಲಿ ಕಾಯಕ ಬಂಧುಗಳ ಹೆಸರುಗಳನ್ನು ನಮೂದಿಸಬೇಕು. ಕ್ರಿಯಾಯೋಜನೆ ಮಾನವ ದಿನಗಳ ಅಂದಾಜು ವೆಚ್ಚದ ಪ್ರತಿಯನ್ನು ಕೊಡಬೇಕು” ಎಂದು ಮನವಿ ಮಾಡಿದರು.
“ಮನರೇಗಾ ಕೂಲಿ ಕಾರ್ಮಿಕರಿಗೆ ಕಡಿಮೆ ಕೂಲಿ ಹಾಕುವುದನ್ನು ಕೂಡಲೇನಿಲ್ಲಿಸಿ ಮತ್ತು ಕೇಂದ್ರ ಸರ್ಕಾರ ನಿಗದಿಗೊಳಿಸಿದ ಕೂಲಿ ಹಣ ನೀಡಬೇಕು. ಕೂಲಿಕಾರರ ಸ್ಥಳದಲ್ಲಿ ಕುಡಿಯುವ ನೀರು, ವಿಶ್ರಾಂತಿಗೆ ವ್ಯವಸ್ಥೆ ಮಾಡಬೇಕು. 60 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಕಲಚೇತನರಿಗೆ ಕೆಲಸದ ಪ್ರಮಾಣವನ್ನು ನಿಗದಿಗೊಳಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ಕುಡಿಯುವ ನೀರು ವ್ಯವಸ್ಥೆಗೆ ಕೂಡಲೇ ಕ್ರಮವಹಿಸಿ: ಜಿಲ್ಲಾಧಿಕಾರಿ
“ಕಾಯಕ ಬಂಧುಗಳಿಗೆ ಮತ್ತು ಕೂಲಿಕಾರರಿಗೆ ತರಬೇತಿ ಶಿಬಿರ ಏರ್ಪಡಿಸಬೇಕು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೆಲಸದಲ್ಲಿ ಬಳಸುವ ಹಾರೆ, ಗುದ್ದಲಿ, ಸಲಗೆ, ಪಿಕಾಸಿ, ಬುಟ್ಟಿ ಇತರೆ ಸಲಕರಣೆಗಳನ್ನು ಪಂಚಾಯತಿಯಿಂದಲೇ ಒದಗಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ, ಸಂಗಮೇಶ ಮೂಲಿಮನಿ, ಬಿ ಲಿಂಗಪ್ಪ, ಲಿಂಗಣ್ಣ ಮೊಕಾಶಿ ಇದ್ದರು.





