ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿ ಸಾವಿರಾರು ಕೋಟಿ ರೂ ಅನುದಾನ ಬಿಡುಗಡೆಯಾಗುತ್ತಿದ್ದರೂ ಈ ಭಾಗದ ಅಭಿವೃದ್ದಿ ಬದಲಾವಣೆಯಾಗದೇ ಇರುವದರಿಂದ ನ್ಯಾಯಬದ್ದ ಅಭಿವೃದ್ದಿಗೆ ಆಗ್ರಹಿಸಿ ವೇಲ್ಪೇರ್ ಪಾರ್ಟಿ ಆಫ್ ಇಂಡಿಯಾ ಅ.6ರಿಂದ 13ವರೆಗೆ ನಿಷ್ಟೆಯ ನಡಿಗೆ ಜಾಥಾ ಪ್ರಾರಂಭಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ತಾಹೀರ ಹುಸೇನ್ ಹೇಳಿದರು.
ನಗರದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲುಸ ಸರ್ಕಾರಗಳು ಬದ್ದವೆಂದು ಎಲ್ಲಾ ರಾಜಕೀಯ ಪಕ್ಷಗಳು ಹೇಳುತ್ತಲೇ ಬಂದಿವೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಸಾವಿರಾರು ಕೋಟಿ ರೂ ಅನುದಾನ ನೀಡುವದಾಗಿ ಘೋಷಿಸುತ್ತಿವೆ. ಆದರೆ ಪರಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಬಾಣಂತಿಯರ ಸಾವು, ಅಪೌಷ್ಠಿಕತೆ, ಮಕ್ಕಳ ಮಾರಾಟ, ಬಾಲ್ಯ ವಿವಾಹ, ನಿರುದ್ಯೋಗದಂತಹ ಸಮಸ್ಯೆಗಳು ಪರಿಹಾರ ಕಂಡಿಲ್ಲ ಎಂದರು.
371(ಜೆ) ಕಾಯ್ದೆ ಅನುಷ್ಠಾನಗೊಳಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ನಿಗಧಿಗೊಳಿಸಲಾಗಿದೆ. ಆದರೆ ನೇಮಕಾತಿಗಳು ನಡೆಯುತ್ತಿಲ್ಲ. ಪ್ರತಿವರ್ಷ 10 ಸಾವಿರ ಇಂಜಿನಿಯರ್ ವಿದ್ಯಾರ್ಥಿಗಳು ಶಿಕ್ಷಣ ಮುಗಿಸುತ್ತಿದ್ದಾರೆ ಆದರೆ ಉದ್ಯೋಗಕ್ಕಾಗಿ ಬೇರೆಡೆ ವಲಸೆ ಹೋಗುವ ಸ್ಥಿತಿಯಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪಡೆದು ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯದೇ ವೈದ್ಯರ, ಇಂಜಿನಿಯರಗಳ ಕೊರತೆ ಎದುರಿಸುವಂತಾಗಿದೆ. 22 ಸಾವಿರ ಶಿಕ್ಷಕ ಹುದ್ದೆಗಳು ಖಾಲಿಯಿದ್ದರೂ ಭರ್ತಿಯಾಗಿಲ್ಲ. 80 ಸಾವಿರ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮೂದಾಯ ಆರೋಗ್ಯ ಕೇಂದ್ರಗಳು ಜನಸಂಖ್ಯೆಗೆ ಅನುಗುಣವಾಗಿ ಸ್ಥಾಪನೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಪ್ರಮುಖ ೧೧ ಬೇಡಿಕೆಗಳ ಈಡೇರಿಕೆಗೆ ಡಬ್ಲ್ಯೂಪಿಐ ಜಾಥಾ ಬೀದರ್ನಿಂದ ಪ್ರಾರಂಭಗೊಂಡಿದ್ದು, ಈ ಭಾಗದ ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆಯೋಜಕರು ತಿಳಿಸಿದ್ದಾರೆ. ಸರ್ಕಾರವು ಬದ್ದತೆಯನ್ನು ತೋರಿಸುವ ರೀತಿಯಲ್ಲಿ ಕೆಲಸ ಮಾಡಲು ಮುಂದಾಗಬೇಕು. ಜಾಥಾ ವೇಳೆ ಎಲ್ಲಾ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಬೆಂಬಲ ನೀಡುವಂತೆ ಮನವಿ ಮಾಡಿದರು. ಜಾಥಾ ಕಲಬುರಗಿಗೆ ತಲುಪುವ ಸಂದರ್ಭದಲ್ಲಿ ಕೆಕೆಆರ್ಡಿಬಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಈ ಭಾಗದ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಡ ಹೇರುವ ಯೋಜನೆ ಇದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಲೆ ಡೆಮಾಲಿಷನ್ ವೇಳೆ ದುರಂತ ; ಕಾರ್ಮಿಕ ಸಾವು
ಈ ಸಂದರ್ಬದಲ್ಲಿ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ ಸಾಲಿಯಾನ್, ಜಿಲ್ಲಾಧ್ಯಕ್ಷ ಶೇಖ್ ಫರೀದ್ ಉಮರಿ, ಅಬ್ದುಲ್ ಸಲಾಂ, ಇರ್ಫಾನ್, ಅಬ್ದುಲ್ ಗನಿ ಉಪಸ್ಥಿತರಿದ್ದರು





