ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಪಿಐ(ಎಂ) ಕಾರ್ಯಕರ್ತರು ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
“ಬರ ಪೀಡಿತ ಕೂಲಿಕಾರರು, ಬಡ ರೈತರು ಗುಳೆ ಹೋಗದಂತೆ ತಡೆಯಲು ಉದ್ಯೋಗ ಖಾತ್ರಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ 150 ದಿನಗಳವರೆಗೆ ಕಡ್ಡಾಯವಾಗಿ ಕೆಲಸ ನೀಡಲು ಅಗತ್ಯ ಕ್ರಮ ವಹಿಸಬೇಕು. ಬೆಳೆ ನಷ್ಟಕ್ಕೆ ಬೆಳೆವಿಮೆ ದೊರಕುವಂತೆ ವ್ಯವಸ್ಥೆ ಮಾಡಬೇಕು. ಬಡ ರೈತರು, ಕೂಲಿಕಾರರು ಮತ್ತು ಸ್ತ್ರೀಶಕ್ತಿ ಸಂಘಗಳ ಮಹಿಳೆಯರ ಎಲ್ಲ ಸಾಲ ಮನ್ನಾ ಮಾಡಬೇಕು. ಶ್ರೀಮಂತ ರೈತರ ಸಾಲವನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸಬೇಕು. ಬಡ್ಡಿ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದರು.
“ಬೆಳೆನಷ್ಟ ಪರಿಹಾರವನ್ನು ಒದಗಿಸಬೇಕು. ಮುಂದಿನ ಸಾಲಿಗೆ ಉಚಿತ ಬೀಜ, ಗೊಬ್ಬರ, ಕೀಟ ನಾಶಕಗಳನ್ನು ಒದಗಿಸಬೇಕು. ಬಿತ್ತನೆಯ ಹಾಗೂ ಕೊಯ್ಲು ಕೆಲಸಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ತರಬೇಕು. ಬರಗಾಲದ ಕಾರಣದಿಂದ ಬರ ಬಾಧಿತರ ಶೈಕ್ಷಣಿಕ ಶುಲ್ಕಗಳನ್ನು ಮನ್ನಾ ಮಾಡಬೇಕು. ಆಹಾರ ಧಾನ್ಯಗಳ ಕೃತಕ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಗ್ರಾಹಕರನ್ನು ಸುಲಿಗೆಗೊಳಪಡಿಸುವ ಕಾಳ ಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದರು.
“ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ತಾಲೂಕಗಳಲ್ಲಿ ಕೃಷಿ ಕೂಲಿಕಾರರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತಕ್ಷಣ ಕೆಲಸ ನೀಡಬೇಕು. ಸಂಕಷ್ಟದಲ್ಲಿರುವ ರೈತರಿಗೆ ಬೆಳೆನಷ್ಟ ಪರಿಹಾರ ಎಕರೆಗೆ ₹25,000 ಪರಿಹಾರ ನೀಡಬೇಕು. ಮೇವಿನ ಅಭಾವ ಮತ್ತು ಕುಡಿಯುವ ನೀರಿನ ತೊಂದರೆ ಉಂಟಾದ ಕಡೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಬರಪೀಡಿತ ತಾಲೂಕುಗಳ ಪಟ್ಟಿ; ಅರಸೀಕೆರೆ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಶಾಸಕ ಕಿಡಿ
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ ಜಿ ವಿರೇಶ, ತಾಲೂಕು ಕಾರ್ಯದರ್ಶಿ ಡಿ ಎಸ್ ಶರಣಬಸವ, ಮುಖಂಡರುಗಳಾದ ಕರಿಯಪ್ಪ ಅಚ್ಚೊಳಿ, ಪ್ರವೀಣ ರೆಡ್ಡಿ ಗುಂಜಳ್ಳಿ, ವರಲಕ್ಷ್ಮಿ, ನಾಗೇಂದ್ರ, ಜಿಲಾನಿ ಪಾಷ, ರಾಘವೇಂದ್ರ, ಖಾಸಿಂ, ಬಂದೇನವಾಜ, ಮಹೆಬೂಬ್ ಸೇರಿದಂತೆ ಬಹುತೇಕರು ಇದ್ದರು.
ಸಿಟಿಜನ್ ಜರ್ನಲಿಸ್ಟ್ : ಹಫೀಜುಲ್ಲ ರಾಯಚೂರು





