ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದ ಬೂದಿಹಾಳ ಕ್ಯಾಂಪ್ನ ಸರ್ವೆ ನಂ.71Aನಲ್ಲಿರುವ 3.27 ಎಕರೆ ಸರ್ಕಾರಿ ಭೂಮಿಯನ್ನು ವಸತಿಹೀನ ಬಡವರಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಮತ್ತು ವಸತಿ ವಂಚಿತರು ಬೂದಿಹಾಳ ಕ್ಯಾಪ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರೈತಸಂಘದ ಮುಖಂಡ ಡಿ.ಎಚ್ ಪೂಜಾರ, “ಈ ಭೂಮಿಯು ಮೂಲತಃ ಸರ್ಕಾರಿ ಹೆಚ್ಚುವರಿ ಭೂಮಿಯಾಗಿದೆ. ಪ್ರಸ್ತುತ ಚಾಲ್ತಿ ಪಹಣಿಯಲ್ಲಿ ಕರ್ನಾಟಕ ಸರ್ಕಾರವೆಂದು ಇದೆ. ಈ ಸರ್ಕಾರಿ ಭೂಮಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಭಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಈ ಭೂಮಿಯನ್ನು ಕಬಳಿಸಲು ಕೆಲವರು ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ತಾಲೂಕು ಆಡಳಿತ ಮತ್ತು ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಬೂದಿವಾಳ ಕ್ಯಾಂಪಿನ ಆಂಧ್ರ ಮೂಲದ ವ್ಯಕ್ತಿಯೊಬ್ಬರು ಖಾಸಗಿ ಆಗ್ರಿಮೆಂಟ್ ಮಾಡಿಕೊಂಡು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಿಂಧನೂರು ತಹಶೀಲ್ದಾರರು ಸರಿಯಾದ ದಾಖಲಾತಿ ಸಲ್ಲಿಸಿದ್ದರೆ ಕೇಸ್ ವಜಾಗೊಳ್ಳುತ್ತಿತ್ತು. ಆದರೆ, ಅಧಿಕಾರಿಗಳು ಭೂಗಳ್ಳರೊಂದಿಗೆ ಶಾಮೀಲಾಗಿದ್ದರಿಂದ ಪ್ರಕರಣ ಕೋರ್ಟ್ನಲ್ಲಿ ಮುಂದುವರೆಯಲು ಕಾರಣವಾಗಿದೆ” ಎಂದು ದೂರಿದರು.
“ರೈತಸಂಘವು ಕಳೆದ 10 ವರ್ಷಗಳಿಂದ ಅನೇಕ ಸುತ್ತಿನ ಹೋರಾಟ ನಡೆಸಿದೆ. ಆದಾಗ್ಯೂ ಅಧಿಕಾರಿಗಳು ಕರ್ತವ್ಯ ದ್ರೋಹವೆಸಗಿದ್ದಾರೆ” ಎಂದು ಅವರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ?: ಗ್ಯಾರಂಟಿ ಯೋಜನೆಗಳು ನನ್ನವು: ಜನಾರ್ದನ ರೆಡ್ಡಿ
“ರೌಡಕುಂದ ಗ್ರಾಮದ ಸರ್ವೆ ನಂ.244 ಸರ್ಕಾರಿ ಇನಾಮ್ ಭೂಮಿಗೆ ಸಂಬಂಧಿಸಿದ ದಾಖಲಾತಿಗಳನ್ನು ಗುಲ್ಬರ್ಗಾ ಹೈಕೋರ್ಟ್ಗೆ ಸಲ್ಲಿಸಿದ ಕಾರಣ 32 ಎಕರೆ ಭೂಮಿ ಗೊರೇಬಾಳ ಗ್ರಾಮದ ಸಿದ್ದರಾಮೇಶ ಸ್ವಾಮಿಯ ಪಾಲಾಗಿದೆ. ತಾಲೂಕಿನ ಹಲವು ಭೂ ಮಾಫಿಯಾಗಳು ಮತ್ತು ಬಲಿಷ್ಠರು ಸರ್ಕಾರಿ ಭೂಮಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಕೋಟ್ಯಾಂತರ ಬೆಲೆ ಬಾಳುವ ನೂರಾರು ಎಕರೆ ಭೂಮಿಯನ್ನು ಕಬಳಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ಸ್ಥಳಕ್ಕೆ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಭೇಟಿ ನೀಡಿದ್ದು, ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಎನ್. ಯರದಿಹಾಳ, ತಾಲ್ಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ಉಪಾಧ್ಯಕ್ಷ ಚಿಟ್ಟಿಬಾಬು, ಮಸ್ಕಿ ತಾಲ್ಲೂಕು ಕಾರ್ಯದರ್ಶಿ ಮಹದ್ ಖಾಜಾ ಶೆಟ್ಟಿ, ಉಪಾಧ್ಯಕ್ಷ ಯಮನೂರಪ್ಪ, ಮುಖಂಡರಾದ ಎಂ.ಎಸ್.ರಾಜಶೇಖರ, ಲಿಂಗಪ್ಪ ಚಿಕ್ಕಬೇರಿಗಿ, ವೀರೇಶ ಬೇರಿಗಿ, ಅಂಬಮ್ಮ, ಯಲ್ಲಮ್ಮ, ಜಯಪ್ಪ, ನಾಗಮ್ಮ, ಹೊನ್ನಮ್ಮ, ಪೃಥ್ವಿರಾಜ, ಕಾಶಿ ವಿಶ್ವನಾಥ ಸೇರಿದಂತೆ ಅನೇಕರು ಭಾಗವಹಿಸಿದ್ದರು




