ದೇವದುರ್ಗ ತಾಲೂಕಿನ ಎಪಿಎಂಸಿ ನಿವೇಶನಗಳ ಹಂಚಿಕೆ, ಪರವಾನಗಿ ನವೀಕರಣದ ಹೆಸರಿನಲ್ಲಿ ಅಕ್ರಮ ನಡೆದಿದೆ. ಆ ಅಕ್ರಮಗಳ ಕುರಿತು ತನಿಖೆಗೆ ಆಗ್ರಹಿಸಿ ಆಗಸ್ಟ್ 10ರಂದು ದೇವದುರ್ಗದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ನರಸಿಂಹ ನಾಯಕ ಕಮಲಾಪುರ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, “ಮೂರು ವರ್ಷಗಳಿಗೊಮ್ಮೆ ನವೀಕರಿಸುವ ಪರವಾನಗಿ ನೀಡುವಾಗ ಎಪಿಎಂಸಿ ಕಾಯ್ದೆ ಉಲ್ಲಂಘಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾರುಕಟ್ಟೆ ಜಾಗಕ್ಕೆ ಅರ್ಜಿ ಸಲ್ಲಿಸಿದ್ದರೂ ಪರಿಗಣಿಸದೇ, ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗಿ ಹಂಚಿಕೆ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
“ಅಕ್ರಮ ನಡೆದಿರುವ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ಎಸ್ಸಿಎಸ್ಟಿ ಸಮೂದಾಯ ಅರ್ಜಿಗಳನ್ನು ಪರಿಗಣಿಸಿ, ಮರು ಹಂಚಿಕೆ ಮಾಡಬೇಕು. ಅಲ್ಲದೆ, ನಾರಾಯಣಪುರ ಬಲದಂಡೆ ಕಾಲುವೆ ವಿತರಣಾ ಕಾಲುವೆ 17 ಮತ್ತು 18ಕ್ಕೆ ನೀರು ಬಾರದೇ ರೈತರು ಕಂಗಾಲಾಗಿದ್ದಾರೆ. ಕೂಡಲೇ ನೀರು ಹರಿಸಬೇಕು” ಎಂದು ಆಗ್ರಹಿಸಿದರು.
ಸಂಗಮೇಶ ನಾಯಕ ಮಾತನಾಡಿ, “ಎಪಿಎಂಸಿಯ ನಿವೇಶನಗಳಿಗೆ 88 ಅರ್ಜಿ ಸಲ್ಲಿಕೆಯಾಗಿವೆ. ಕೆವಲನ್ನು ಮಾತ್ರ ಪರಿಗಣಿಸಿ ಎಸ್ಸಿ/ಎಸ್ಟಿ ಸಮೂದಾಯದವರಿಗೆ ನಿವೇಶನ ಹಂಚಿಕೆ ಮಾಡಿಲ್ಲ. ನಿಯಮ ಬಾಹಿರವಾಗಿ ಹಂಚಿಕೆ ಮಾಡಲಾಗಿದ್ದು, ಆ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಜಿದ್ ಹುಸೇನ್, ಶಿವಪ್ಪ, ಧರ್ಮರೆಡ್ಡಿ ಉಪಸ್ಥಿತರಿದ್ದರು.




