ಸಿಂಧನೂರು ನಗರದ ಚನ್ನಮ್ಮ ಸರ್ಕಲ್ (ಹಳೆ ಬಜಾರ್)ನಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ಎರಡೂ ಬದಿಯ ರಸ್ತೆ ಅತಿಕ್ರಮಿಸಿದ ಕಟ್ಟಡಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಕರ್ನಾಟಕ ರೈತ ಸಂಘ (ಎಐಯುಕೆಎಸ್) ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಮಂಗಳವಾರ ತಹಸೀಲ್ದಾರ್ ಅರುಣ್ ದೇಸಾಯಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.
ʼನಗರವು ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಇದರಿಂದಾಗಿ ನಗರದ ಪ್ರಮುಖ ರಸ್ತೆಗಳು ಜನಸಂದಣಿ ಜಾಸ್ತಿಯಾಗುತ್ತಿದ್ದು, ಹೆಚ್ಚು ಜನನಿಬಿಡ ಇರುವ ಪ್ರದೇಶಗಳಲ್ಲಿ ಹಳೆಬಜಾರ್ ಪ್ರದೇಶವೂ ಒಂದಾಗಿದೆ. ಈ ಪ್ರದೇಶದ ರಸ್ತೆಯಲ್ಲಿ ಜನಸಾಮಾನ್ಯರು ಸಂಚರಿಸುವುದಕ್ಕೆ ದಿನವೂ ಹರಸಾಹಸಪಡುತ್ತಿದ್ದಾರೆ. ರಸ್ತೆ ಅಗಲೀಕರಣ ಅತ್ಯಂತ ಅವಶ್ಯಕತೆ ಇರುತ್ತದೆʼ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ʼಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ರಸ್ತೆ ಅತಿಕ್ರಮಿಸಿದ ಮಾಲೀಕರ ಕಟ್ಟಡಗಳನ್ನು ತೆರವುಗೊಳಿಸಿ, ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು, ರಸ್ತೆ ಅತಿಕ್ರಮಿಸಿದ ಕಟ್ಟಡ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಹಳೆ ಬಜಾರ್ ರಸ್ತೆ ಚಿಕ್ಕದಾಗಿರುವುದರಿಂದ ಅಂಬ್ಯುಲೆನ್ಸ್ ಓಡಾಟ, ಸಾರ್ವಜನಿಕ ವಾಹನಗಳ ಸಂಚಾರ, ಜನಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದ್ದು, ಕೂಡಲೇ ತೆರವು ಕಾರ್ಯಾಚರಣೆ ನಡೆಸಿ, ರಸ್ತೆ ಅಗಲೀಕರಣ ಮಾಡಬೇಕುʼ ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ ಮತ್ತಿತರರಿದ್ದರು.





