77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಲು ಸರ್ಕಾರದ ಆದೇಶವಿದ್ದರೂ ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಸಿಂಧನೂರ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಗುರುರಾಜ್ ಅವರು ನೀಡಿದ ದೂರು ಆದರಿಸಿ ಸಹಕಾರಿ ನಿಯಮಿತ ಮೂವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣರಾಜ್ಯೋತ್ಸವ ಆಚರಣೆಯಲ್ಲಿ ಕಡ್ಡಾಯವಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಇಡಬೇಕೆಂದು ಸರ್ಕಾರದ ನಿಯಮವಿದ್ದರೂ ಶ್ರೀ ಜಗದ್ಗುರು ಪಂಚಾಚಾರ್ಯ ಸಹಕಾರಿ ನಿಯಮಿತ ಪದಾಧಿಕಾರಿಗಳು ಮಹಾತ್ಮ ಗಾಂಧಿ ಹಾಗೂ ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ್ ಅವರ ಭಾವಚಿತ್ರವನ್ನು ಇಟ್ಟು ಗಣರಾಜ್ಯೋತ್ಸವ ಆಚರಿಸಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ರವಿ ಬೆಳಗೆರೆ ಪುಸ್ತಕದ ನಕಲಿ ಪ್ರತಿ: ಅಮೆಜಾನ್, ಮೀಶೋ, ಫ್ಲಿಫ್ಕಾರ್ಟ್ ವಿರುದ್ಧ ತಲಾ 1 ಕೋಟಿ ರೂ. ಕೃತಿಚೌರ್ಯ ದೂರು ದಾಖಲಿಸಲಿರುವ ಭಾವನಾ
ಈ ಸಂಬಂಧ ಆಡಳಿತ ಮಂಡಳಿ ಹಾಗೂ ಶಾಖೆಯ ವ್ಯವಸ್ಥಾಪಕ ಲಿಂಗನಗೌಡ, ಶಾಖೆಯ ಸಿಬ್ಬಂದಿ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.





