ತಾಲ್ಲೂಕಿನ ಮುಕ್ಕುಂದ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕುರಿ ಶೆಡ್ ಸೇರಿ ಸುಮಾರು 700 ಕುರಿ ಹಾಗೂ ಟಗರು ಮರಿಗಳು ಸುಟ್ಟು ಕರಕಲಾಗಿರುವ ದುರ್ಘಟನೆ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ವೈ. ಹೇಮಲತಾ ಮಧುಸೂದನ್ ರಾವ್ ಅವರು ಕುರಿ ಶೆಡ್ ನಿರ್ಮಿಸಿ ಕುರಿ ಮತ್ತು ಟಗರು ಮರಿಗಳ ಸಾಕಾಣಿಕೆ ಮಾಡುತ್ತಿದ್ದರು. ಶುಕ್ರವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಶೆಡ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೆಲವೇ ಕ್ಷಣಗಳಲ್ಲಿ ಧಗಧಗನೆ ಉರಿಯತೊಡಗಿತು.
ಘಟನೆಯ ಮಾಹಿತಿ ತಿಳಿದ ಗ್ರಾಮಸ್ಥರು ತಕ್ಷಣ ಕಾರಟಗಿ ಅಗ್ನಿಶಾಮಕ ದಳದ ಕಚೇರಿಗೆ ಹಾಗೂ ಬಳಿಕ ಸಿಂಧನೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ಬೆಂಕಿ ಭಾರೀ ಪ್ರಮಾಣದಲ್ಲಿ ಹಬ್ಬಿಕೊಂಡಿತ್ತು. ಪರಿಣಾಮವಾಗಿ ಶೆಡ್ನಲ್ಲಿದ್ದ ಸುಮಾರು 700 ಕುರಿ ಹಾಗೂ ಟಗರು ಮರಿಗಳು ಬೆಂಕಿಗೆ ಆಹುತಿಯಾಗಿವೆ.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ರಾಯಚೂರು ಜಿಲ್ಲೆಗೆ ಸಿಕ್ಕಿದ್ದೇನು?
ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿದರು. ಆದರೆ ಅಷ್ಟರೊಳಗೆ ಕುರಿ ಶೆಡ್ ಹಾಗೂ ಅದರಲ್ಲಿದ್ದ ಕುರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು.ಈ ಸಂಬಂಧ ಸಿಂಧನೂರು ಅಗ್ನಿಶಾಮಕ ದಳದ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದೆ.





