ಸರ್ಕಾರ ಕುವೆಂಪು ಅವರಿಗೆ ಅವಮಾನ ಮಾಡುವ ರೀತಿ ಯಾವುದೇ ಕೆಲಸ ಮಾಡುತ್ತಿಲ್ಲ. ಅಂತಹ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ ಎಂದು ಶಾಸಕ ಬಾಲಕೃಷ್ಣ ಸ್ಪಷ್ಟನೆ ನೀಡಿದರು.
ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಬಿಜೆಪಿಯವರಿಗೆ ಕೆಲಸವಿಲ್ಲ. ಮೊರಾರ್ಜಿ ವಸತಿ ಶಾಲೆಗಳಲ್ಲಿ ಅಧಿಕಾರಿ ಹೇಳಿಕೆಯಂತೆ ʼಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿʼ ಎಂದು ಸಾಲುಗಳನ್ನು ಬದಲಿಸಿದ್ದಾರೆ. ಬಿಜೆಪಿಯವರು ಈ ರೀತಿಯ ಚಿಲ್ಲರೆ ವಿಚಾರಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಸರಿಯಲ್ಲ” ಎಂದು ಕಿಡಿಕಾರಿದರು.
“ಗಂಡಸರು ಎನ್ನುವ ಬಿಜೆಪಿ ಸಂಸದರು ವಿತ್ತ ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರಿಂದ ಭದ್ರಾ ಮೇಲ್ದಂಡೆ ಯೋಜನೆಗೆ ₹5,000 ಕೋಟಿ ಬಿಡುಗಡೆ ಮಾಡಿಸಿಕೊಂಡು ಬರಲಿ. ಅದನ್ನು ಬಿಟ್ಟು ಕೈಮುಗಿದು ಒಳಗೆ ಬರಲಿಲ್ಲ, ಕಾಲ್ ಮುಗಿದುಕೊಂಡು ಒಳಗೆ ಬರಲಿಲ್ಲ ಎಂದು ಚಿಲ್ಲರೆ ರಾಜಕೀಯ ಮಾಡುವುದನ್ನು ಬಿಜೆಪಿಯವರು ನಿಲ್ಲಿಸಬೇಕೆಂದು ಬಾಲಕೃಷ್ಣ ಟೀಕಿಸಿದರು.
“ಕುವೆಂಪು ಅವರಿಗೆ ಅತ್ಯಂತ ಗೌರವ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ನಮ್ಮ ಯಾವುದೇ ಸಮಾರಂಭ ನಡೆದರೂ ಕೂಡ ನಾಡಗೀತೆಯನ್ನು ಹಾಡುವ ಮೂಲಕ ಕುವೆಂಪು ಅವರಿಗೆ ಗೌರವ ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. 15 ವರ್ಷ ದೇಶವನ್ನು ಆಳಿದ ಬಿಜೆಪಿ ರಾಜ್ಯದ ಸಮಸ್ಯೆಗಳ ಕುರಿತು ಚರ್ಚೆ ಮಾಡಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ರೈತರ ಖಾತೆಗಳಿಗೆ ಹಣ ಜಮಾ ವಿಳಂಬ; ಪ್ರತಿಭಟನೆ
“ಮಾಜಿ ಶಾಸಕ ಎ ಮಂಜುನಾಥ್ ಅರ್ಥಗರ್ಭಿತವಾಗಿ ಚರ್ಚೆ ಮಾಡಲಿ. ಅದನ್ನು ಬಿಟ್ಟು ಗಾಬರಿಯಾದ ರೀತಿಯಲ್ಲಿ ನನ್ನ ಹೇಳಿಕೆಗೆ ಉತ್ತರ ಕೊಟ್ಟಿದ್ದಾರೆ. ನಾನು ಏಕೆ ಗಾಬರಿಯಾಗಲಿ ತಪ್ಪು ಮಾಡಿದವರು ಮಾತ್ರ ಗಾಬರಿಯಾಗಬೇಕು. ಪಾಯಿಖಾನೆ ತಿಂದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರ ರೀತಿ ಕೆಳಮಟ್ಟಕ್ಕೆ ಇಳಿದು ಮಾತನಾಡಲು ಸಾಧ್ಯವಿಲ್ಲ. ʼಡಾರ್ಲಿಂಗ್ ಬಾಲಣ್ಣʼ ಎಂದು ಮೊದಲು ಕರೆದವರು ಮಾಜಿ ಶಾಸಕ ಎ ಮಂಜುನಾಥ್. ಅದಕ್ಕೆ ನಾನು ʼಮಾಮʼ ಅಂತ ಕರೆದಿದ್ದೇನೆ. ನಮ್ಮ ಕ್ಷೇತ್ರದ ಹೆಣ್ಣು ಮಗಳನ್ನು ಮದುವೆಯಾಗಿದ್ದಕ್ಕೆ ಮಾಮ ಅಂತ ಕರೆದಿದ್ದೇನೆ. ಗೌರವಯುತವಾಗಿ ಮಾತನಾಡಬೇಕು. ಸುಮ್ಮನೆ ನಾವೇಕೆ ಅವರ ಬಗ್ಗೆ ಮಾತನಾಡೋಣ” ಎಂದು ಮಾಜಿ ಶಾಸಕ ಎ ಮಂಜುನಾಥ್ ವಿರುದ್ಧ ಬೇಸರ ವ್ಯಕ್ತಪಡಿಸಿದರು.




