ಕನಕಪುರ ತಾಲೂಕಿನ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರು ಕೋಟ್ಯಂತರ ರೂಪಾಯಿ ಸರಕಾರಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮಾಹಿತಿ ಹಕ್ಕು ಹೋರಾಟಗಾರರು ಭ್ರಷ್ಟಾಚಾರದ ವಿರುದ್ಧ ದೂರು ದಾಖಲಿಸಿದ್ದಾರೆ.
ಕನಕಪುರ ತಾಲೂಕಿನ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತುರಾಜ್ ಅವರು 2017 ರಿಂದ 2021ರ ಅವಧಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ’ (PMKSY) ಅಡಿಯಲ್ಲಿ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿತ ಅಧಿಕಾರಿ ಮುತ್ತುರಾಜ್ ‘ನಾಗಾರ್ಜುನ ಫರ್ಟಿಲೈಸರ್ ಕೆಮಿಕಲ್ಸ್’ ಸಂಸ್ಥೆಯೊಂದಿಗೆ ಕೈಜೋಡಿಸಿ, ‘ಮುಂಗಾರು ಎಂಟರ್ಪ್ರೈಸಸ್’ ಎಂಬ ಹೆಸರಿನ ನಕಲಿ ಕಂಪನಿಯನ್ನು ಸೃಷ್ಟಿಸಿಕೊಂಡಿದ್ದರು ಎನ್ನಲಾಗಿದೆ. ಈ ನಕಲಿ ಕಂಪನಿಯ ಹೆಸರಿನಲ್ಲಿ ಯೋಜನೆಯ ಹಣವನ್ನು ಪಡೆದು, ನಂತರ ಆ ಮೊತ್ತವನ್ನು ಅಧಿಕಾರಿಯ ಪತ್ನಿಯ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ವಂಚಿಸಿದ್ದಾರೆ ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬರಬೇಕಿದೆ.
ಇದನ್ನೂ ಓದಿ: ಕನಕಪುರ | ಸಾತನೂರು ಸಂತೆ ಜಾಗ ಅತಿಕ್ರಮಣ; ರಸ್ತೆಯಲ್ಲೇ ವ್ಯಾಪಾರ ಮಾಡುವ ದುಸ್ಥಿತಿ
ಈ ಬೃಹತ್ ಭ್ರಷ್ಟಾಚಾರದ ಜಾಲವನ್ನು ಬಯಲಿಗೆಳೆದಿರುವ ಮಾಹಿತಿ ಹಕ್ಕು ಬಳಕೆದಾರರಾದ ಸ್ವಾಮಿ ಎಚ್.ಎಸ್. ಸಂಬಂಧಪಟ್ಟ ಇಲಾಖೆ ಹಾಗೂ ಭ್ರಷ್ಟಾಚಾರ ನಿಗ್ರಹದಳಕ್ಕೆ ಈಗಾಗಲೇ ದೂರು ನೀಡಿದ್ದಾರೆ. ಕಠಿಣ ಶ್ರಮ ಪಡುವ ರೇಷ್ಮೆ ಬೆಳೆಗಾರರಿಗೆ ತಲುಪಬೇಕಾದ ಸಬ್ಸಿಡಿ ಮತ್ತು ಸೌಲಭ್ಯಗಳನ್ನು ಅಧಿಕಾರಿಗಳು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿರುವುದು ರೈತ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಯಿಂದ ಹಣ ವಸೂಲಿ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





