ಮುಂದಿನ ತಲೆಮಾರಿಗೆ ಪರಿಸರ ಉಳಿಸುವ ಮೂಲಕ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಪರಿಸರವಾದಿ ರೇವತಿ ಕಾಮತ್ ಹೇಳಿದರು.
ಕನಕಪುರ ರಸ್ತೆಯಲ್ಲಿರುವ ʼಧೀ DHEEʼ ಆಸ್ಪತ್ರೆಯು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಧೀ ಶಕ್ತಿ ಉದ್ಘಾಟಿಸಿ ಮಾತನಾಡಿದ ಅವರು, “ಜನರು ತಮ್ಮ ಅಭಿವೃದ್ಧಿ ಬಗ್ಗೆ ನೋಡುತ್ತಿದ್ದಾರೆಯೇ ಹೊರತು, ಪರಿಸರ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದೇ ಇರುವುದು ಬೇಸರದ ಸಂಗತಿ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಮಾಲಿನ್ಯ ಮಾಡುವುದನ್ನು ತಡೆಯಬೇಕು” ಎಂದರು.
“ಬಿಲ್ಡರ್ಗಳು ಕೇವಲ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಾಣ ಮಾಡುವಲ್ಲಿ ಆಲೋಚನೆ ಮಾಡುತ್ತಿದ್ದಾರೆಯೇ ಹೊರತು ಅವರಿಗೆ ಪರಿಸರ ಕಾಳಜಿ ಇಲ್ಲ. ನಾವು ಕಾಳಜಿ ಬಗ್ಗೆ ಮಾತನಾಡುತ್ತೇವೆಯೇ ಹೊರತು ಯಾರೂ ಅದರ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ಮನೆಯಲ್ಲಿ ಬೆಳೆಸುವ ಸಸಿಗಳ ಬಗ್ಗೆ ನಮಗೆ ಸ್ವಲ್ಪವೂ ತಿಳಿವಳಿಕೆ ಇರುವುದಿಲ್ಲ. ಆದರೂ, ನಾವು ನಮ್ಮದಲ್ಲದ ಗಿಡಗಳನ್ನು ಬೆಳೆಸುತ್ತೇವೆ. ರೈತರೂ ಕೂಡ ಅನವಶ್ಯಕವಾಗಿ ಕೀಟನಾಶಕ ಬಳಕೆ ಮಾಡುತ್ತಾರೆ. ಇದು ಪರಿಸರ ವಿನಾಶವಾಗಿದೆ. ಇದರ ಬಗ್ಗೆ ಎಚ್ಚರವಹಿಸಬೇಕು” ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಅನುಪಮಾ ಹೊಸಕೆರೆ ಮಾತನಾಡಿ, “ನಾವು ಇತಿಹಾಸ ನೋಡಿದರೆ, ಮಹಿಳೆಯರ ಶಕ್ತಿ ಬಹಳಷ್ಟಿದೆ. ನಾವು ಎದುರಾಗುವ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಮಹಿಳೆಯರು ಯಾವುದೇ ಕಷ್ಟ ಬಂದರೂ ಧೃತಿಗೆಡಬಾರದು. ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಬಾರದು. ನಾವು ನಮ್ಮ ಇರುವಿಕೆಯನ್ನು ತೋರಿಸಬೇಕು” ಎಂದರು.
“ಮಹಿಳೆಯರಿಗೆ ಅರ್ಥಿಕ ಸ್ವಾತಂತ್ರ್ಯ ಬಹಳ ಮುಖ್ಯ. ಮಹಿಳೆಯರು ಮದುವೆ ನಂತರ ಗೃಹಿಣಿಯಾಗಿ ಉಳಿಯುವುದೇ ಹೆಚ್ಚು. ನೀವು ಈ ರೀತಿ ಆಗಬೇಡಿ. ನೀವು ಆರ್ಥಿಕವಾಗಿ ಸಬಲರಾಗಬೇಕು” ಎಂದು ಬ್ರಿಗೇಡ್ ಗ್ರೂಪ್ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ನಿರುಪಮಾ ಶಂಕರ್ ಕಿವಿಮಾತು ಹೇಳಿದರು.
“ಸುರಕ್ಷತೆ ಮತ್ತು ಭದ್ರತೆಯನ್ನು ಬೇರೆಯವರು ಮಾಡಿಕೊಡುವುದಿಲ್ಲ. ನಾವು ಮಾಡಿಕೊಳ್ಳುವುದಾಗಿದೆ. ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಮಹಿಳೆಯರು ಆತ್ಮವಿಶ್ವಾಸ ಇಟ್ಟುಕೊಂಡು ಎಲ್ಲ ಕ್ಷೇತ್ರದಲ್ಲೂ ಮುನ್ನಡೆಯಬೇಕು” ಎಂದು ವಿಬು ಅಕಾಡೆಮಿ ಸಂಸ್ಥಾಪಕಿ ಡಾ. ವಿ ಬಿ ಆರತಿ ತಿಳಿಸಿದರು.
“ನಮ್ಮ ಆಸ್ಪತ್ರೆಯಲ್ಲಿ ದಾನಿಗಳಿಂದ ಸಹಾಯ ಪಡೆದು ಬಹುತೇಕ ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಿಕೊಟ್ಟಿದ್ದೇವೆ. ಇದರಿಂದ ಬಹುತೇಕರು ಇಂದು ಕ್ರೀಡಾ ಪಟುಗಳಾಗಿ ಉಳಿದುಕೊಂಡಿದ್ದಾರೆ. ನಾವು ಗುಣಮಟ್ಟ ಚಿಕಿತ್ಸೆಯನ್ನು ನೀಡುತ್ತೇವೆ” ಧೀ ಶಕ್ತಿ ಆಸ್ಪತ್ರೆಯ ನರರೋಗ ತಜ್ಞ ಡಾ. ಚಂದ್ರಶೇಖರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಸತತ ಅಧ್ಯಯನ, ಪರಿಶ್ರಮದಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ: ಡಾ. ಸುಜಾತ ಅಕ್ಕಿ
ಇದೇ ವೇಳೆ ನಟಿ ಗಿರಿಜಾ ಲೋಕೇಶ್, ಹೇಮಾ ಶಾನಭೋಗ್, ಪತ್ರಕರ್ತೆ ಮಿನಿ ಥಾಮಸ್ ಹಾಗೂ ಇತರೆ ಮಹಿಳಾ ಸಾಧಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಡಾ. ಸುಪ್ರಜಾ ಚಂದ್ರಶೇಖರ್ ಇತರರು ಇದ್ದರು.





