ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿ ವಾರದ ಹಿಂದೆ ಸಂಭವಿಸಿದ್ದ ಅಡುಗೆ ಅನಿಲ ಸಿಲಿಂಡರ್ ಸ್ಫೋಟದ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಒಂದೇ ಕುಟುಂಬದ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಕನಕಪುರ ನಗರದ ರಾಮನಗರ ರಸ್ತೆಯ ಅಮರ ನಾರಾಯಣ ಬ್ಲಾಕ್ ನಿವಾಸಿಗಳಾದ ಸಿದ್ದರಾಜು(55), ಪತ್ನಿ ಚಂದ್ರಮ್ಮ(50) ಹಾಗೂ ಪುತ್ರ ಪ್ರಶಾಂತ್(22) ಮೃತಪಟ್ಟವರು.
ಕುಟುಂಬವು ತಳ್ಳುಗಾಡಿ ಕ್ಯಾಂಟೀನ್ ಇಟ್ಟುಕೊಂಡು ಬದುಕು ಸಾಗಿಸುತ್ತಿತ್ತು. ಜನವರಿ 26ರಂದು ಮನೆಯಲ್ಲಿ ವಿವಿಧ ತಿಂಡಿಗಳನ್ನು ಎಣ್ಣೆಯಲ್ಲಿ ಬೇಯಿಸುತ್ತಿದ್ದ ವೇಳೆ, ಅಡುಗೆ ಅನಿಲ ಸೋರಿಕೆಯಾಗಿದ್ದು, ಒಮ್ಮೆಲೆ ಬೆಂಕಿ ಹೊತ್ತಿಕೊಂಡು ಇಡೀ ಕೋಣೆಯನ್ನು ಆವರಿಸಿದ್ದರಿಂದಾಗಿ ಮೂವರಿಗೆ ತೀವ್ರವಾದ ಸುಟ್ಟ ಗಾಯಗಳಾಗಿದ್ದವು ಎನ್ನಲಾಗಿದೆ.
ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ, ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಮೂವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೊದಲಿಗೆ ಪುತ್ರ ಪ್ರಶಾಂತ್, ಎರಡು ದಿನದ ನಂತರ ತಂದೆ ಸಿದ್ದರಾಜು ಹಾಗೂ ಅದಾದ ಎರಡು ದಿನದ ನಂತರ ತಾಯಿ ಚಂದ್ರಮ್ಮನವರೂ ಕೊನೆಯುಸಿರೆಳದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ರೈತನ ಕಬ್ಬಿನ ತೋಟ ಬೆಂಕಿಗಾಹುತಿ
ದುರ್ಘಟನೆಯೊಂದಿಗೆ ಮೂವರಿದ್ದ ಕುಟುಂಬವೊಂದು ದುರಂತ ಅಂತ್ಯ ಕಂಡಿದೆ. ಸಿದ್ದರಾಜು ಮತ್ತು ಚಂದ್ರಮ್ಮ ದಂಪತಿಯ ಏಕೈಕ ಪುತ್ರ ಪ್ರಶಾಂತ್ ಅವರು ಅವಿವಾಹಿತರಾಗಿದ್ದರು. ತಂದೆ–ತಾಯಿಯನ್ನು ಬಿಟ್ಟು ಬೇರೆಡೆ ಹೋಗುವುದಕ್ಕೆ ಮನಸ್ಸಿಲ್ಲದ ಅವರು, ಕ್ಯಾಂಟಿನ್ ನಡೆಸಲು ನೆರವಾಗುತ್ತಿದ್ದರು. ಆದರೆ, ಸಿಲಿಂಡರ್ನಿಂದ ಸೋರಿಕೆಯಾದ ಅನಿಲದಿಂದ ಹೊತ್ತಿಕೊಂಡ ಬೆಂಕಿ ಮೂವರನ್ನೂ ಬಲಿ ಪಡೆದಿದೆ.
ಘಟನೆ ಕುರಿತು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





