ಆಹಾರದಲ್ಲಿ ಹುಳ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕನ ವಿರುದ್ಧ ಸುಳ್ಳು ದೂರು ನೀಡಿದ್ದ ರಾಮೇಶ್ವರಂ ಕೆಫೆ ಮಾಲೀಕರು, ತಾವೇ ಸಿಕ್ಕಿಬಿದ್ದಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಆಹಾರ ಸುರಕ್ಷತೆ ಮತ್ತು ಮಾನನಷ್ಟ ಆರೋಪದ ಮೇಲೆ ರಾಮೇಶ್ವರಂ ಕೆಫೆ ಮಾಲೀಕರ ವಿರುದ್ಧ ಗ್ರಾಹಕರಾದ ನಿಖಿಲ್ ಎಂಬುವವರು ದೂರು ನೀಡಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIAL) ಟರ್ಮಿನಲ್ 1 ರಲ್ಲಿರುವ ರಾಮೇಶ್ವರಂ ಕೆಫೆಯ ಮಾಲೀಕರು ಮತ್ತು ಪ್ರತಿನಿಧಿಯ ವಿರುದ್ಧ ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸಂಸ್ಥೆಯ ಮಾಲೀಕರು ಸೇರಿದಂತೆ ಮೂವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರ ರಾವ್, ಅವರ ಪತ್ನಿ ದಿವ್ಯಾ ರಾಘವೇಂದ್ರ ರಾವ್ ಮತ್ತು ಹಿರಿಯ ಕಾರ್ಯನಿರ್ವಾಹಕ ಸುಮಂತ್ ಲಕ್ಷ್ಮಿನಾರಾಯಣ್ ವಿರುದ್ಧ ಬಿಎನ್ಎಸ್ ಸೆಕ್ಷನ್ 61, 123, 217, 228, 229, 274 ಮತ್ತು 275 ರ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕೆಫೆಯ ಮ್ಯಾನೇಜರ್ ಸುಮಂತ್ ಬಿ. ಎಲ್. ಎ 1 ಆರೋಪಿಯಾಗಿದ್ದು, ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್ (ಎ 2) ಮತ್ತು ರಾಘವೇಂದ್ರ ರಾವ್ (ಎ 3) ಎಂದು ಉಲ್ಲೇಖಿಸಲಾಗಿದೆ.
ದೂರುದಾರ ನಿಖಿಲ್ ಎಂಬುವವರು ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಯ ವಿಚಾರವನ್ನು ಮರೆಮಾಚಲು ಅವರೇ ದೂರು ನೀಡಿದ್ದು, ಇದರಿಂದ ತನ್ನ ಮಾನಹಾನಿಯಾಗಿದೆ. ಸುಳ್ಳು ಪ್ರತಿ ದೂರು ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಏನಿದು ಪ್ರಕರಣ?
ಜುಲೈ 24, 2025ರಂದು ಸಂಜೆ 7:42ರ ಸುಮಾರಿಗೆ ಗುವಾಹಟಿಗೆ ಹೋಗುವ ಉದ್ದೇಶದಿಂದ ಬೆಂಗಳೂರು ವಿಮಾನದ ಮೂಲಕ ಪ್ರಯಾಣಿಸಲು ಬಂದಿದ್ದರು. ಟರ್ಮಿನಲ್ 1ನಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದ ವೇಳೆ ನಿಖಿಲ್ ಅವರು ರಾಮೇಶ್ವರಂ ಕೆಫೆಯಲ್ಲಿ ಪೊಂಗಲ್ ಮತ್ತು ಫಿಲ್ಟರ್ ಕಾಫಿ ಆರ್ಡರ್ ಮಾಡಿದ್ದರು.
ಈ ವೇಳೆ ತನಗೆ ನೀಡಿದ್ದ ಪೊಂಗಲ್ನಲ್ಲಿ ಹುಳ ಕಂಡು ಬಂದಿತ್ತು. ಅದನ್ನು ಕೂಡಲೇ ರೆಸ್ಟೋರೆಂಟ್ನ ಸಿಬ್ಬಂದಿಯ ಗಮನಕ್ಕೆ ತಂದಿದ್ದರು. ಸಿಬ್ಬಂದಿ ಬದಲಿ ಆಹಾರ ನೀಡಲು ಮುಂದಾದರೂ ನಿಖಿಲ್ ಅವರು ನಿರಾಕರಿಸಿ, ಬೆಳಗ್ಗೆ 8:45ಕ್ಕೆ ನಿಗದಿತ ವಿಮಾನ ಹಿಡಿದು ತಮ್ಮ ಪ್ರಯಾಣವನ್ನು ಮುಂದುವರಿಸಿದ್ದರು.

ಈ ನಡುವೆ ರಾಮೇಶ್ವರಂ ಕೆಫೆಯು, “ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ತನ್ನ ಹೋಟೆಲ್ನಲ್ಲಿ ಆಹಾರದಲ್ಲಿ ಹುಳು ಪತ್ತೆಯಾಗಿದೆ ಎಂಬ ಸುಳ್ಳು ಘಟನೆಯನ್ನು ಸೃಷ್ಟಿಸಿ, ಬ್ರ್ಯಾಂಡ್ಗೆ ಮಸಿ ಬಳಿಯಲು ಮತ್ತು ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ” ಎಂದು ಗ್ರಾಹಕನ ವಿರುದ್ಧವೇ ಮರುದಿನ ಜುಲೈ 25ರಂದು ನಿಖಿಲ್ ಅವರ ವಿರುದ್ಧ ಕೆಫೆಯ ಪ್ರತಿನಿಧಿ ಸುಮಂತ್ ಬಿ.ಎಲ್. ಅವರು ತಮ್ಮ ವಿರುದ್ಧ ದೂರು ದಾಖಲಿಸಿದ್ದರು. ಆ ದೂರಿನಲ್ಲಿ ₹25 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿ, ಬ್ರ್ಯಾಂಡ್ ಹೆಸರಿಗೆ ಧಕ್ಕೆ ತರುವ ಬೆದರಿಕೆ ಹಾಕಿದ್ದಾರೆ ಎಂದು ನಿಖಿಲ್ ವಿರುದ್ಧ ಆರೋಪ ಮಾಡಲಾಗಿತ್ತು. ನಿಖಿಲ್ ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ತಾನು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರಲಿಲ್ಲ, ರೀಫಂಡ್ ಕೂಡ ಕೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಎಂ ಎಸ್ ಉಮೇಶ್- ಹತ್ತು ಕಟ್ಟುವ ಜೊತೆಗೆ ಮುತ್ತು ಕಟ್ಟಿದ ಕಲಾವಿದ
“ಕೆಫೆಯ ದೂರಿನಲ್ಲಿ ಉಲ್ಲೇಖಿಸಿರುವ ಸಮಯಕ್ಕೆ ತಾನು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೆ ಎಂದು ವಿಮಾನಯಾನ ದಾಖಲೆಗಳ ಮೂಲಕ ಸಾಬೀತುಪಡಿಸುತ್ತೇನೆ ಎಂದು ಹೇಳಿದ್ದರು. ಕೆಫೆಯ ಸಿಸಿಟಿವಿ ದೃಶ್ಯಗಳು ಮತ್ತು ತಮ್ಮ ಪ್ರಯಾಣ ದಾಖಲೆಗಳನ್ನು ಪೊಲೀಸರು ಪರಿಶೀಲಿಸಬೇಕು” ಎಂದು ರಾಮೇಶ್ವರಂ ಕೆಫೆ ವಿರುದ್ಧ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಲಿನ ಆಹಾರ ನೀಡಿದ್ದು ಗಂಭೀರ ಸುರಕ್ಷತಾ ಉಲ್ಲಂಘನೆಯಾಗಿದ್ದು, ಸುಳ್ಳು ಪ್ರತಿ-ದೂರು ಸಲ್ಲಿಸಿ ತಮ್ಮನ್ನು ಮಾನಹಾನಿ ಮತ್ತು ಕಿರುಕುಳಕ್ಕೊಳಪಡಿಸಲಾಗಿದೆ ಎಂದು ನಿಖಿಲ್ ಆರೋಪಿಸಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದು, ಹುಳು ಕಂಡುಬಂದಿದ್ದಾಗ ಅಧಿಕೃತ ಹೇಳಿಕೆ ನೀಡಿದ್ದ ರಾಮೇಶ್ವರಂ ಕೆಫೆಯ ಮಾಲೀಕರು, ಈಗ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಬಗ್ಗೆ ಇದುವರೆಗೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.





