ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಒಂಬತ್ತು ವರ್ಷಗಳ ಸೆರೆಮನೆ ವಾಸ ಅನುಭವಿಸಿ ನಂತರ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ದೇಶ ಕಟ್ಟಿದ ಜವಾಹರ್ ಲಾಲ್ ನೆಹರು ಅವರ ಸಂಪೂರ್ಣ ಸ್ವರಾಜ್ಯ, ವೈಜ್ಞಾನಿಕ ಚಿಂತನೆ ಮತ್ತು ಸಮಾನತೆಯ ಪರಿಕಲ್ಪನೆಗಳು ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುಧಾಕರ್ ದೇವಾಡಿಗ ಅಭಿಪ್ರಾಯಪಟ್ಟರು.
ರಥಬೀದಿ ಗೆಳೆಯರು (ರಿ.) ಉಡುಪಿ ಮತ್ತು ಎಸ್.ಎಂ.ಎಸ್. ಆಂಗ್ಲ ಮಾಧ್ಯಮ (CBSE) ಶಾಲೆ, ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ನೆಹರು–ಮಕ್ಕಳ ಕಿರುಚಿತ್ರೋತ್ಸವ (ಮಾತುಕತೆ – ಚಿತ್ರ ಪ್ರದರ್ಶನ – ಸಂವಾದ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂದುವರಿದು ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ನೆಹರು ಅನುಸರಿಸಿದ ತಟಸ್ಥ ವಿದೇಶ ನೀತಿ, ಅಲಿಪ್ತ ರಾಷ್ಟ್ರಗಳೊಂದಿಗೆ ಶಾಂತಿಯುತ ಮಾತುಕತೆ, ಪಂಚವಾರ್ಷಿಕ ಯೋಜನೆಗಳ ಮೂಲಕ ಕೈಗಾರಿಕೀಕರಣಕ್ಕೆ ನೀಡಿದ ಉತ್ತೇಜನ, ಅಣೆಕಟ್ಟುಗಳ ನಿರ್ಮಾಣ—ಇವೆಲ್ಲವೂ ಭವಿಷ್ಯದ ಭಾರತದ ಭದ್ರ ಅಡಿಪಾಯವಾಗಿದ್ದುದು ಎಂದು ಹೇಳಿದರ ಅವರು ಇಂದಿನ ರಾಜಕೀಯ ಕಾರಣಗಳಿಂದ ದೇಶದ ನಿರ್ಮಾತೃಗಳಾದ ನೆಹರು ಅವರನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನ ನಡೆಯುತ್ತಿದೆ. ಯುವಜನರು ಈ ಪಾಠ ವಿಭಿನ್ನವಾಗಿ ಗ್ರಹಿಸಬಾರದು, ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ದೇಶ ಸ್ವಾತಂತ್ರ್ಯ ಪಡೆದಾಗ ಅತ್ಯಂತ ಬಡತನದಿಂದ ಕೂಡಿದ ಪರಿಸ್ಥಿತಿಯಲ್ಲಿ ನೆಹರು ವಿಜ್ಞಾನಾಧಾರಿತ ರಾಷ್ಟ್ರ ನಿರ್ಮಾಣಕ್ಕೆ ಸ್ಪಷ್ಟ ದೃಷ್ಟಿ ಹೊಂದಿದ್ದರು. ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು ಎಂಬ ಅವರ ಮಾತು ಇಂದಿಗೂ ಪ್ರಸ್ತುತ ಎಂದು ಹೇಳಿದ ಅವರು ದೇಶ ಕಟ್ಟಿದ ಮಹಾನೀಯರನ್ನು ಮರೆಸುವ ಪ್ರಯತ್ನಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚಿಂತಕರಾದ ಪ್ರೊ. ಕೆ. ಫಣಿರಾಜ್, ಸಿನಿಮಾ ವಿಶ್ಲೇಷಕರಾದ ಸಂವರ್ತ ಸಾಹಿಲ್, ಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು. ಉಪಾಧ್ಯಕ್ಷರು ಡಾ. ಯು.ಸಿ. ನಿರಂಜನ್, ಸಂತೋಷ್ ಬಲ್ಲಾಳ್, ನಾಟಕ ವಿಭಾಗದ ಸಂತೋಷ್ ನಾಯಕ್ ಪಟ್ಲ, ಸದಸ್ಯೆ ಕಾವ್ಯ ಪ್ರಭು ಮೊದಲಾದವರು ಭಾಗವಹಿಸಿದರು. ಕಾರ್ಯಕ್ರಮಕ್ಕೆ ಎಸ್.ಎಂ.ಎಸ್. ಶಾಲೆಯ ಪ್ರಾಂಶುಪಾಲರು ಅಭಿಲಾಷಾ ಎಸ್. ಸ್ವಾಗತಿಸಿದರು. ಶಿಕ್ಷಕ ನಾಗೇಂದ್ರ ನಿರೂಪಣೆ ಮಾಡಿದರು. ನಂತರ ಮಕ್ಕಳಿಗಾಗಿ ಕಿರುಚಿತ್ರ ಪ್ರದರ್ಶನ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಪ್ರೊ. ಫಣಿರಾಜ್ ಮತ್ತು ಸಂವರ್ತ ಸಾಹಿಲ್ ನೆರವೇರಿಸಿದರು.





