ಮುಡಿಪು ಸಮೀಪದ ಬೋಳಿಯಾರ್ ನಿವಾಸಿಯಾದ ವಿವಾಹಿತ ಯುವಕನೋರ್ವ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಲಾರಿ ಅಪಘಾತದಲ್ಲಿ ಮಂಗಳವಾರ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ಮೃತರನ್ನು ಬೋಳಿಯಾರ್ ನಿವಾಸಿ ಬಿಎಚ್ ಕರೀಂ ಅವರ ಪುತ್ರ ಮುಹಮ್ಮದ್ ರಿಝಾನ್ (28) ಎಂದು ಪೊಲೀಸರು ಗುರುತಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಂಪೆನಿಯೊಂದರ ಮೂಲಕ ಮೀನಿನ ಲಾರಿಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಿಝಾನ್, ಮೀನಿನ ಸರಕು ಸಾಗಾಟಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ರತ್ನಗಿರಿ ಪ್ರದೇಶದಲ್ಲಿ ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ರಿಝಾನ್ ಅವರು ತಂದೆ, ತಾಯಿ, ಪತ್ನಿ, ಎರಡು ವರ್ಷದ ಮಗು ಸೇರಿದಂತೆ ಮೂವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಬಂಧುಬಳಗದಲ್ಲಿ ಶೋಕಮಡುಗಟ್ಟಿದೆ.
ಮೃತದೇಹವು ಬುಧವಾರ ಬೆಳಿಗ್ಗೆ ಸ್ವಗ್ರಾಮಕ್ಕೆ ತರಲಾಗಲಿದ್ದು, ಬೋಳಿಯಾರ್ ಕೇಂದ್ರ ಮಸೀದಿಯ ವಠಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.





