ರಾಜ್ಯಾದ್ಯಂತ ರೇಷನ್ ಕಾರ್ಡ್ಗಳ ಪರಿಶೀಲನೆ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆ. ನಕಲಿ ದಾಖಲೆ ನೀಡಿ, ರೇಷನ್ ಕಾರ್ಡ್ ಪಡೆದವರಿಗೆ ದಂಡ ವಿಧಿಸಲಾಗುತ್ತಿದೆ. ಈ ನಡುವೆ ಬೆಳಗಾವಿ ಜಿಲ್ಲೆಯೊಂದರಲ್ಲೇ ನಕಲಿ ದಾಖಲೆ ನೀಡಿ ರೇಷನ್ ಕಾರ್ಡ್ ಪಡೆದಿದ್ದವರಿಂದ ಬರೋಬ್ಬರಿ ₹1.89 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.
ಬೆಳಗಾವಿಯಲ್ಲಿ ಕಳೆದ ಆರು ತಿಂಗಳಿಂದ ಪಡಿತರ ಪಡೆಯದ 19,969 ಚೀಟಿಗಳನ್ನು ರದ್ದು ಮಾಡಲಾಗಿದ್ದು, ನಕಲಿ ದಾಖಲೆ ನೀಡಿ ಆದ್ಯತಾ ಪಡಿತರ ಚೀಟಿ ಪಡೆದವರಿಂದ ಈವರೆಗೆ ಒಟ್ಟು ₹1.89 ಕೋಟಿ ರೂ. ದಂಡ ಕೂಡ ವಸೂಲಿ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಅವರು, ”ಜಿಲ್ಲೆಯಲ್ಲಿ 557 ಅಂತ್ಯೋದಯ, 19,412 ಆದ್ಯತಾ ಪಡಿತರ ಚೀಟಿ ಸೇರಿ ಒಟ್ಟು 19,969 ಪಡಿತರ ಚೀಟಿದಾರರು 6 ತಿಂಗಳಿಂದ ಪಡಿತರ ಧಾನ್ಯ ಪಡೆದಿಲ್ಲ. ಹೀಗಾಗಿ, ಈ ಎಲ್ಲಪಡಿತರ ಚೀಟಿಗಳನ್ನು 2024ರ ಜುಲೈ 29ರಂದು ರದ್ದುಪಡಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

‘ಅಲ್ಲದೇ, ಸರಕಾರಿ ನೌಕರರು ಹಾಗೂ ಅನರ್ಹರು ಹೊಂದಿರುವ ಒಟ್ಟು 45,804 ಆದ್ಯತಾ ಪಡಿತರ ಚೀಟಿಗಳನ್ನು ‘ಆದ್ಯತೇತರ’ ಎಂದು ಪರಿವರ್ತಿಸಲಾಗಿದೆ. ಇಷ್ಟು ದಿನ ಆದ್ಯತಾ ಪಡಿತರ ಚೀಟಿ ಲಾಭ ಪಡೆದ ಕಾರಣ ಆ ಎಲ್ಲ ಪಡಿತರ ಚೀಟಿದಾರರಿಂದ ಒಟ್ಟು 1,88,75,946 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
11,117 ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರು, 1,421 ಆದ್ಯತೇತರ ಪಡಿತರ ಚೀಟಿದಾರರು ಸೇರಿ ಒಟ್ಟು 12,538 ಫಲಾನುಭವಿಗಳು ಮೃತಪಟ್ಟಿದ್ದು, ಅವರ ವಿವರವನ್ನು ಕುಟುಂಬ ದತ್ತಾಂಶದಿಂದ ತೆಗೆಯಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.





