ಸರ್ವೋಚ್ಚ ನ್ಯಾಯಾಲಯ(ಸುಪ್ರೀಂ ಕೋರ್ಟ್)ದ ಆದೇಶದಂತೆ ಮಾಲೂರು ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಮರುಮತ ಎಣಿಕೆ ಕಾರ್ಯ ಮಂಗಳವಾರ ಭಾರೀ ಬಿಗಿ ಬಂದೋಬಸ್ತಿನಲ್ಲಿ ನಡೆದಿದ್ದು, ರಾಜಕೀಯ ವಲಯದ ಚಿತ್ತ ಕೋಲಾರದತ್ತ ನೆಟ್ಟಿತ್ತು.
ನ್ಯಾಯಾಲಯದ ಆದೇಶದಂತೆ ಕೋಲಾರ ಜಿಲ್ಲಾಡಳಿತವು ಮರು ಎಣಿಕೆ ಪ್ರಕ್ರಿಯೆ ನಡೆಸಲು ನಗರ ತೋಟಗಾರಿಕೆ ಮಹಾವಿದ್ಯಾಲಯದ ಎಣಿಕಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದು, ಬೆಳಿಗ್ಗೆ 8ರಿಂದ ಎಣಿಕೆ ಕಾರ್ಯ ಪ್ರಾರಂಭಿಸಿತ್ತು.
ಜಿಲ್ಲಾಡಳಿತ ಭವನದ ಆವರಣದಲ್ಲಿದ್ದ ಇವಿಎಂ ಮತ ಯಂತ್ರಗಳನ್ನು ಕೊಠಡಿಯಿಂದ ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ತೆರೆದು ಮಾಲೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಂಟೈನರ್ಗಳ ಮೂಲಕ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಸಾಗಿಸಿ ಮತ ಎಣಿಕೆಗೆ ಕೇಂದ್ರದಲ್ಲಿ ಮರುಮತ ಎಣಿಕೆ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು.
ಒಟ್ಟು 14 ಟೇಬಲ್ಗಳಲ್ಲಿ 18 ಸುತ್ತಿನ ಮತ ಎಣಿಕೆ ಕಾರ್ಯ ನಡೆಸಿದರು. ಮರುಮತ ಎಣಿಕೆ ಹಿನ್ನೆಲೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಯಾವುದೇ ಅಹಿತರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಾಗುತ್ತಿತ್ತಾದರೂ ಮರುಮತ ಎಣಿಕೆಯ ಮಾಹಿತಿ ಕಿಂಚಿತ್ತೂ ಸೋರಿಕೆಯಾಗದಂತೆ ಜಾಗೃತಿ ವಹಿಸಿದ್ದರು. ಅಲ್ಲದೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮರುಮತ ಎಣಿಕೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಘೋಷಿಸದೇ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿತ್ತು.
ಕೇಂದ್ರದ ಸುತ್ತ 144 ಜಾರಿ ಮಾಡಲಾಗಿತ್ತು. ಅಲ್ಲದೆ ಮರುಮತ ಎಣಿಕಾ ಕೇಂದ್ರದಿಂದ ಒಂದು ಕಿಮೀವರೆಗೂ ನಿಷೇಧಾಜ್ಞೆ ಜಾರಿ ಮಾಡಿದ್ದರೂ ಮಾಲೂರು ವಿಧಾನಸಭಾ ಕ್ಷೇತ್ರದ ಎಲ್ಲ ಅಭ್ಯರ್ಥಿಗಳ ಅಭಿಮಾನಿಗಳು ಆಯಾ ಪಕ್ಷದ ಮುಖಂಡರು ಆಗಮಿಸಿದ್ದರು. ಇದರಿಂದ ರಾಷ್ಟ್ರೀಯಾ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಒಂದು ಕಿಮೀವರೆಗೂ ನಿಷೇಧಾಜ್ಞೆ ಜಾರಿ ಇರುವ ಕಾರಣ ಅವರನ್ನೂ ಕಳುಹಿಸಿದರು.
ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಪ್ರಭು ನಾರಾಯಣಸಿಂಗ್ ಅವರನ್ನು ಮರುಮತ ಎಣಿಕಾ ವೀಕ್ಷಕರನ್ನಾಗಿ ನೇಮಿಸಿದ್ದರು. ಅಲ್ಲದೆ ಮರುಮತ ಎಣಿಕಾ ಕೇಂದ್ರಕ್ಕೆ ಯಾವೊಬ್ಬರು ಮೊಬೈಲ್ಪೋನ್ಗಳನ್ನು ಕೊಂಡೊಯ್ಯದಂತೆ ನಿಷೇಧಾಜ್ಞೆ ಹೇರಿದ್ದರು. ಅಲ್ಲದೆ ಯಾವುದೇ ಕಾರಣಕ್ಕೂ ಕಣ್ ತಪ್ಪಿಯೂ ಮೊಬೈಲ್ ಎಣಿಕಾಕೇಂದ್ರಕ್ಕೆ ಒಯ್ಯದಂತೆ ನಿಗಾ ವಹಿಸಿದ್ದರು ಅಲ್ಲದೆ ಸ್ಥಳೀಯ ಪೊಲೀಸರೂ ಕೂಡ ಮತ ಎಣಿಕೆ ಕೇಂದ್ರದೊಳಗೆ ಅವಕಾಶ ನೀಡಿರಲಿಲ್ಲ. ಎಲ್ಲವನ್ನೂ ಸವೋರ್ಚ್ಚ ನ್ಯಾಯಾಲಯದ ಆದೇಶದಂತೆ ಮರುಮತ ಎಣಿಕೆ ನಡೆಸಿದರು.
ಮಾಲೂರು ಕ್ಷೇತ್ರದ ಚುನಾವಣೆಯ ಮರುಮತ ಎಣಿಕೆ ನಡೆಯುವುದರಿಂದ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ ಆರ್ ರವಿಯವರು ಮೆರವಣಿಗೆ, ವಿಜಯೋತ್ಸವ, ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಮತ ಎಣಿಕೆ ನಡೆಯುವ ತೋಟಗಾರಿಕೆ ವಿಶ್ವವಿದ್ಯಾನಿಲಯದ ಸುತ್ತ ಸೆಕ್ಷನ್ 144 ವಿಧಿಸಿ ನಿಷೇಧಾಜ್ಞೆ ಜಾರಿ ಮಾಡಿದ್ದರು.
ಮೂಲಗಳ ಪ್ರಕಾರ ಮರುಮತ ಎಣಿಕೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದು ತಿಳಿದುಬಂದಿದೆ ಅಲ್ಲದೆ. ಅಂಚೆ ಮತ ಎಣಿಕೆಯಲ್ಲಿ ಸ್ವಾಭಿಮಾನಿ ಪಕ್ಷದಿಂದ ಸ್ಪರ್ದಿಸಿದ್ದ ಹೂಡಿ ವಿಜಯ್ ಕುಮಾರ್ ಅವರಿಗೆ ಒಂದು ಮತ ಕಳೆದ ಎಣಿಕೆಗಿಂತ ಹೆಚ್ಚಾಗಿತ್ತು ಎಂಬುದು ಕೇಳಿ ಬಂದಿತು.
ಮರುಮತ ಎಣಿಕೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೇಂದ್ರದ ಬಳಿ ಒಟ್ಟು ಓರ್ವ ಎಸ್ಪಿ, ಇಬ್ಬರು ಎಎಸ್ಪಿ, ಎಂಟು ಮಂದಿ ಸಿಐ, 12 ಮಂದಿ ಪಿಎಸ್ಐ, ಒಂಬತ್ತು ಮಂದಿ ಎಚ್ಸಿಪಿಸಿ, 161 ಎಎಸ್ಐ, 25 ಮಂದಿ ಹೋಮ್ ಗಾರ್ಡ್ಸ್ ಸಿಬ್ಬಂದಿಗಳು ಸೇರಿದಂತೆ ನೂರಾರು ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಒಂದು ಕೆಎಸ್ಆರ್ಪಿ ತುಕಡಿ, ಎರಡು ಡಿಅರ್ ತುಕಡಿ, ಬಾಂಬ್ ಸ್ಕ್ವ್ಯಾಡ್ ಸಿಬ್ಬಂದಿಗಳ ಶ್ವಾನ ದಳ, ಆರ್ಎಎಫ್ ಸಿಬ್ಬಂದಿ, ಬಿಎಸ್ಎಫ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ಮತ ಕೇಂದ್ರಕ್ಕೆ ಶಾಸಕ ನಂಜೇಗೌಡ, ಸೇರಿದಂತೆ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ, ಹೂಡಿ ವಿಜಯ್ ಕುಮಾರ್ ಸೇರಿದಂತೆ ಎಲ್ಲ ಅಭ್ಯರ್ಥಿಗಳ ಪರವಾಗಿ 120 ಬೂತ್ ಏಜೆಂಟ್ಸ್ ಮತ ಕೇಂದ್ರದಲ್ಲಿ ಮೊಕ್ಕ ಹೂಡಿದ್ದರು. ಆದರೆ ಫಲಿತಾಂಶದಲ್ಲಿ ಯಾವುದೇ ರೀತಿಯ ಏರುಪೇರಾಗಿರುವ ಬಗ್ಗೆ ವಿಷಯ ಮಾತ್ರ ಗೌಪ್ಯವಾಗಿತ್ತು. ಆದರೆ ಬೆಳಗ್ಗೆಯಿಂದ ಸಂಜೆವರೆಗೂ ಮರುಮತ ಎಣಿಕೆ ನಡೆಸಿದರು. ಅಲ್ಲದೆ ಮರು ಎಣಿಕೆಯಲ್ಲಿ ಗೊಂದಲಗಳನ್ನು ಅಭ್ಯರ್ಥಿಗಳ ಸಮ್ಮುಖದಲ್ಲಿನಿವಾರಣೆ ಮಾಡಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿ ನಂತರ ಅಲ್ಲಿಂದ ಬಂದ ಅನುಮತಿ ಮೇರೆಗೆ ಮುಂದಿನ ಸುತ್ತಿನ ಎಣಿಕೆ ನಡೆಸುತ್ತಿದ್ದರು.
ಕೋಲಾರ ನಗರದ ಬಾಲಕರ ಕಾಲೇಜಿನಲ್ಲಿ 2023ರ ಮೇ 13ರಂದು ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆದಿತ್ತು. ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್ನ ನಂಜೇಗೌಡ ಅಂಚೆ ಮತ ಸೇರಿ ಒಟ್ಟು 50,955 ಮತ ಪಡೆದು, ಕೇವಲ 248 ಮತಗಳಿಂದ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಕೆ ಎಸ್ ಮಂಜುನಾಥ ಗೌಡ 50,707 ಮತ ಗಳಿಸಿದ್ದರು.
ಕೆಲವೇ ಮತಗಳ ಅಂತರದಿಂದ ಸೋಲಾಗಿದೆ ಎಂಬುದು ಗೊತ್ತಾಗುತ್ತಿದಂತೆ ಮತ ಎಣಿಕೆ ಕೇಂದ್ರಕ್ಕೆ ಧಾವಿಸಿ ಬಂದ ಮಂಜುನಾಥಗೌಡ ಹಾಗೂ ಬೆಂಬಲಿಗರು ಮರುಮತ ಎಣಿಕೆಗೆ ಪಟ್ಟು ಹಿಡಿದ್ದರು. ಇದಕ್ಕೆ ನಂಜೇಗೌಡ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿ, ಮರು ಎಣಿಕೆ ಮಾಡುವಂತೆ ಮನವಿ ಮಾಡಿದ್ದರು.
ಅಂದಿನ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಉಭಯ ಪಕ್ಷದವರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯುವ ಮುನ್ನೆಚ್ಚರಿಕೆ ಕಂಡು ಕೇಂದ್ರ ವಲಯ ಐಜಿಪಿಯಾಗಿದ್ದ ಬಿ ಆರ್ ರವಿಕಾಂತೇಗೌಡ ಬಂದು ವಾತಾವರಣವನ್ನು ತಿಳಿಗೊಳಿಸಿದ್ದರು.
ಇದನ್ನು ಓದಿದ್ದೀರಾ..? ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ
ಬಳಿಕ ಅಭ್ಯರ್ಥಿಗಳ ಸಮ್ಮುಖದಲ್ಲಿ ಚುನಾವಣಾ ನಿಯಮದ ಪ್ರಕಾರ ಕ್ಷೇತ್ರದ ಐದು ಮತಗಟ್ಟೆಗಳ ವಿವಿ ಪ್ಯಾಟ್ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿಕೊಂಡು ಮತ ತಾಳೆ ಮಾಡಲಾಯಿತು. ಆಗಲೂ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ಹೀಗಾಗಿ, ಚುನಾವಣಾಧಿಕಾರಿ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದ್ದರು.
ಕುತೂಹಲ ಮೂಡಿಸಿದ್ದ ಮಾಲೂರು ಕ್ಷೇತ್ರದ ಮತಗಳ ಮರು ಎಣಿಕೆ ಇದೀಗ ಪೊಲೀಸ್ ಬಿಗಿ ಭದ್ರತೆಯಲ್ಲಿ ಮಂಗಳವಾರ ನಡೆದಿದ್ದು, ಫಲಿತಾಂಶದಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುವುದೇ ಅಥವಾ ಯಥಾಸ್ಥಿತಿಲ್ಲಿರುವುದೇ ಎಂಬುದನ್ನು ಕಾದು ನೋಡಬೇಕಿದೆ.





