ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ಜನರ ಆರೋಗ್ಯ ಪರಿಸ್ಥಿತಿ ಉತ್ತಮ ಗುಣಮಟ್ಟ ಹೊಂದಿಲ್ಲ. ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿರುತ್ತವೆ. ಹಾಗಾಗಿ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ವಿಜಯಪುರದ ಹಿರಿಯ ಪತ್ರಕರ್ತ ಅನಿಲ ಹೊಸಮನಿ ಮನವಿ ಮಾಡಿದರು.
ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಮೂಲಕ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅರವಿಂದ ಕುಲಕರ್ಣಿ ಮಾತನಾಡಿ, “ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜಿನ ಉದ್ದೇಶ ಪಿಪಿಪಿ ಮಾದರಿಯನ್ನು ಕೈಬಿಟ್ಟು ಸಂಪೂರ್ಣ ಸರ್ಕಾರಿ ಮಾದರಿಯ ವೈದ್ಯ ಕಾಲೇಜನ್ನು ಸ್ಥಾಪನೆ ಮಾಡಬೇಕು” ಎಂದು ಒತ್ತಾಯಿಸಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಕೆವಿನ್ ಮಾತನಾಡಿ, “ಅತೀವೃಷ್ಟಿ, ಅನಾವೃಷ್ಟಿಗೆ ತುತ್ತಾಗುವ ಬಲಿಯಾಗುವ ಜಿಲ್ಲೆ ಹೆಸರಿಗೆ ಪಂಚ ನದಿಗಳ ಬೀಡಾದರೂ ಜನರ ಬದುಕು ಹಸನಾಗಲಿಲ್ಲ. ಕಿತ್ತು ತಿನ್ನುವ ಬಡತನ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಇಲ್ಲಿನ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ” ಎಂದು ಆರೋಪಿಸಿದರು.
ಹೋರಾಟ ಸಮಿತಿಯ ಬಿ ಭಗವಾನ ರೆಡ್ಡಿ ಮಾತನಾಡಿ, “ಸರಕಾರಿ ಆಸ್ಪತ್ರೆಯು ಖಾಸಗೀಕರಣದ ಕೂಗು ಎದ್ದಾಗಲೂ ಜನತೆ ಸಿಡಿದೆದ್ದು ಅದನ್ನು ಧಿಕ್ಕರಿಸಿದೆ. ಸರಕಾರಿ ಆಸ್ಪತ್ರೆಗೆ ಸೂಕ್ತವಾದ ಸುಮಾರು 149 ಎಕರೆಗೂ ಹೆಚ್ಚು ಸ್ಥಳಾವಕಾಶ ಸರಕಾರಿ ಆಸ್ಪತ್ರೆ ಆವರಣದಲ್ಲಿದೆ. ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆಯೂ ಇದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಎಂಸಿಐ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ನಿಯೋಗ ವಿಜಯಪುರಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಶಿಫಾರಸ್ಸು ಮಾಡಿತ್ತು. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಆರಂಭಿಸಲು ಕ್ರಮವಹಿಸಬೇಕು” ಎಂದರು.
ಸಾಮಾಜಿಕ ಹೋರಾಟಗಾರ ಶ್ರೀನಾಥ ಪೂಜಾರಿ ಮಾತನಾಡಿ, “ಸರ್ಕಾರ ಪಿಪಿಪಿ (ಪಬ್ಲಿಕ್, ಪ್ರೈವೇಟ್, ಪಾರ್ಟ್ನರ್ಶಿಪ್) ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಹೊನ್ನಾರದಲ್ಲಿದೆ. ಶಾಸಕರು ಒಬ್ಬರು 500 ಕೋಟಿ ಬಂಡವಾಳ ಹೂಡುವುದಾಗಿ ಸದನದಲ್ಲಿ ಹೇಳಿದ್ದಾರೆ. ಅವರಿಗೆ ಖಾಸಗಿ ಕಾಲೇಜು ಬೇಕೆನಿಸಿದರೆ ನಾಲ್ಕಾರು ಕಾಸಿಗೆ ಕಾಲೇಜು ಆರಂಭಿಸಲಿ. ಆದರೆ ಪಿಪಿಪಿ ಹೆಸರಿನಲ್ಲಿ ಸರ್ಕಾರಿ ಕಾಲೇಜನ್ನು ಅಪಹರಿಸುವುದನ್ನು ಇಡೀ ಜಿಲ್ಲೆಯ ಜನತೆ ತೀವ್ರವಾಗಿ ಖಂಡಿಸುತ್ತದೆ” ಎಂದರು.
ಇದನ್ನೂ ಓದಿ: ವಿಜಯಪುರ | ‘ಒಳಮೀಸಲಾತಿ ಜಾರಿಗೊಳಿಸಿದ ಸರ್ಕಾರದ ನಡೆ ಸ್ವಾಗತಾರ್ಹ’
ಕಾರ್ಮಿಕ ಮುಖಂಡ ಮಲ್ಲಿಕಾರ್ಜುನ್ ಎಚ್ ಟಿ ಮಾತನಾಡಿ, “ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಸಕಲ ಸೌಲಭ್ಯಗಳಿವೆ. ಸರ್ಕಾರ ಒಂದಿಂಚು ಭೂಮಿ ಖರೀದಿಸುವ ಭಾರವು ಬೀಳುವುದಿಲ್ಲ. ಅಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ನಿತ್ಯ 1500ಕ್ಕೂ ಹೆಚ್ಚು ಹೊರರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದರು.
ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗಬಾಗೇವಾಡಿ ಮಾತನಾಡಿ, “ಜಿಲ್ಲಾಸ್ಪತ್ರೆಯಲ್ಲಿಯ ಪಂಚಕರ್ಮ ಪ್ರಾಕೃತಿ ಚಿಕಿತ್ಸಾಲಯ ಸೌಲಭ್ಯ ಕಟ್ಟಡ ಒಂದಿದೆ. 670 ಬೆಡ್ಗಳ ಜನರಲ್ ಆಸ್ಪತ್ರೆ, 150 ಬೆಡ್ಗಳ ತಾಯಿ ಮಕ್ಕಳ ಆಸ್ಪತ್ರೆ, 60 ಬೆಡ್ಡುಗಳ ಸೆಂಟರ್ ತುರ್ತು ನಿಗಾ ಘಟಕ, ಆಕ್ಸಿಜನ್ ಪ್ಲಾಂಟ್, ತುರ್ತು ಅಪಘಾತ ಘಟಕ, ಹೈಟೆಕ್ ಶವಾಗಾರಗಳು ಸಾರ್ವಜನಿಕ ಸೇವೆಯಲ್ಲಿವೆ. ಈ ಎಲ್ಲಾ ಸೌಲಭ್ಯಗಳಿರುವುದರಿಂದ ಸರ್ಕಾರಿ ವೈದ್ಯಕೀಯ ಮಾದರಿಯ ಕಾಲೇಜು ಸ್ಥಾಪನೆ ಮಾಡುವುದು ಮುಖ್ಯವಾಗಿದೆ” ಎಂದರು.
ಪ್ರತಿಭಟನೆಯಲ್ಲಿ ಭರತ್ ಕುಮಾರ ಎಚ್ ಟಿ, ಮಲ್ಲಿಕಾರ್ಜುನ ಎಚ್ ಟಿ, ಶಿವಬಾಳಮ್ಮ ಕೊಂಡಗೂಳಿ, ಗೀತಾ ಎಚ್ ಟಿ, ಶಿವ ರಂಜನಿ, ಶ್ರೀಕಾಂತ, ಸಿದ್ದರಾಮ ಹಿರೇಮಠ, ಮಲ್ಲಿಕಾರ್ಜುನ ಬಟಗಿ, ಅಕ್ಷಯ್ ಕುಮಾರ ಅಜಮನಿ ಹಾಗೂ ಇತರರು ಇದ್ದರು.





