ಬಳ್ಳಾರಿಯಲ್ಲಿ ಹೆಗ್ಗಿಲ್ಲದೆ ನಡೆಯುತ್ತಿರುವ ಗಣಿಗಾರಿಕೆಯಿಂದ ಕೃಷಿಗೆ ತೊಂದರೆಯಾಗುತ್ತಿದೆ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಅಳಲು-ಮನವಿ ಆಲಿಸಲು ಐಎಎಸ್ ಅಧಿಕಾರಿ, ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಬಳ್ಳಾರಿಗೆ ಭೇಟಿ ನೀಡಿದ್ದರು. ಈ ವೇಳೆ, ಅವರು ಸರ್ಕಾರಿ ಅತಿಥಿ ಗೃಹದಲ್ಲಿ ತಂಗುವ ಬದಲು, ಜಿಂದಾಲ್ ಸಂಸ್ಥೆಗೆ ಸೇರಿದ ಟೌನ್ಶಿಪ್ನಲ್ಲಿ ವಾಸ್ತವ್ಯ ಹೂಡಿದ್ದರು. ಅವರ ಈ ವಾಸ್ತವ್ಯವು ಚರ್ಚೆ ಮತ್ತು ಅನುಮಾನಗಳಿಗೆ ಕಾರಣವಾಗಿದೆ. ಅವರ ವಾಸ್ತವ್ಯದ ಕುರಿತು ತನಿಖೆ ನಡೆಸುವಂತೆ ಪ್ರತಿಭಟನಾನಿರತ ರೈತರು ಆಗ್ರಹಿಸಿದ್ದಾರೆ.
ಬಳ್ಳಾರಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಲ್ಲಿ ಜಿಂದಾಲ್ ಸಂಸ್ಥೆಯದ್ದೂ ಹೆಚ್ಚಿನ ಪಾಲಿದೆ. ಜಿಂದಾಲ್ ಕಂಪನಿಯು ಉಕ್ಕು ಉತ್ಪಾದನೆ ಜೊತೆಗೆ, ಸಂಡೂರಿನಲ್ಲಿ ಗಣಿಗಾರಿಕೆ ನಡೆಸುತ್ತಿದೆ. ಇತ್ತೀಚೆಗೆ ನಾಲ್ಕು ಗಣಿಗಳನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಗಣಿ ಹರಾಜಿನಲ್ಲಿ ಸುಪ್ರೀಂ ಕೋರ್ಟ್ ಆದೇಶಗಳ ಉಲ್ಲಂಘನೆಯಾಗಿದ್ದು, ಪ್ರಕರಣವು ಸುಪ್ರೀಂ ಕೋರ್ಟ್ನಲ್ಲಿದೆ. ಈ ಪ್ರಕರಣದಲ್ಲಿ ಜಿಂದಾಲ್ ಕಂಪನಿ, ರಾಜ್ಯ ಸರ್ಕಾರ ಹಾಗೂ ರೋಹಿಣಿ ಸಂಧೂರಿ ಕೂಡ ಪ್ರತಿವಾದಿಯಾಗಿದ್ದಾರೆ.
ಈ ಲೇಖನ ಓದಿದ್ದೀರಾ?: ಉನ್ನಾಂವ್ ಅತ್ಯಾಚಾರ ಹಗರಣ: ಕುಲದೀಪ್ ಸೆಂಗರ್ನ ಹೀನಕೃತ್ಯ; ಬಿಜೆಪಿ ನೈತಿಕ ದಿವಾಳಿತನ
ಹೀಗಾಗಿ, ರೈತರ ಪ್ರತಿಭಟನೆಯು ಜಿಂದಾಲ್ ಸಂಸ್ಥೆಯ ವಿರುದ್ಧವೂ ನಡೆಯುತ್ತಿದೆ. ಹೀಗಿರುವಾಗ, ರೈತರ ಮನವಿ ಆಲಿಸಲು ಡಿಸೆಂಬರ್ 25ರಿಂದ 27ರವರೆಗೆ ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದ ರೋಹಿಣಿ ಸಿಂಧೂರಿ, ಜಿಂದಾಲ್ ಟೌನ್ಶಿಪ್ನಲ್ಲಿ ಉಳಿದುಕೊಂಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರೋಹಿಣಿ ಸಿಂಧೂರಿ ಅವರು ಸರ್ಕಾರಿ ಅಧಿಕಾರಿಯಾಗಿದ್ದರೂ, ಸರ್ಕಾರದ ವಸತಿಗೃಹದಲ್ಲಿ ಉಳಿದುಕೊಳ್ಳದೆ, ಖಾಸಗಿ ಉದ್ದಿಮೆದಾರರ ಅತಿಥಿ ಗೃಹದಲ್ಲಿ ತಂಗಿದ್ದಾರೆ. ಮಾತ್ರವಲ್ಲದೆ, ತಮ್ಮ ರಜಾ ದಿನದಲ್ಲಿಯೂ ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ವಾಹನಗಳನ್ನು ರೋಹಿಣಿ ಬಳಸಿದ್ದಾರೆ. ಅವರು ಕರ್ನಾಟಕ ನಾಗರಿಕ ಸೇವೆಗಳು (ನಡವಳಿಕೆ) ನಿಯಮಗಳು– 1966 ಅನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸರ್ಕಾರದ ಮುಖ್ಯಕಾರ್ಯದರ್ಶಿ ಪತ್ರ ಬರೆದಿದ್ದಾರೆ.




