ಮೈಸೂರು ಗ್ರಾಮಾಂತರ, ಇಲವಾಲದಲ್ಲಿ ಮಂಗಳವಾರ ನಡೆದ ದಿವಂಗತ ಕೆ ಎಸ್ ಪುಟ್ಟಣ್ಣಯ್ಯನವರ ಜನ್ಮದಿನಾಚರಣೆ, ರೈತ ವಿಶ್ವ ದಿನಾಚರಣೆ ಹಾಗೂ ಬೃಹತ್ ಜಿಲ್ಲಾ ರೈತ ಸಮಾವೇಶದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಗೌರವ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ‘ಆಳುವ ಸರ್ಕಾರಗಳಿಗೆ ರೈತರ ಬದುಕಿನ ಅರಿವಿಲ್ಲ’ ಎಂದು ವಿಷಾದಿಸಿದರು.
ಕೇಂದ್ರ, ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆ ತರುವ ಮೂಲಕ ರೈತ ಸಮುದಾಯವನ್ನ ಸಂಕಷ್ಟಕ್ಕೆ ಸಿಲುಕಿಸಿವೆ. ಕೇಂದ್ರ ಸರ್ಕಾರ ರೈತ ಹೋರಾಟಕ್ಕೆ ಮಣಿದು ರೈತ ವಿರೋಧಿ ಕಾಯ್ದೆ ವಾಪಸ್ ಪಡೆದಿದೆ. ಆದರೇ, ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ಹೊರತುಪಡಿಸಿ ಇನ್ನುಳಿದ ಎರಡು ಕಾಯ್ದೆಗಳಾದ ಜಾನುವಾರು ಹತ್ಯೆ ಕಾಯ್ದೆ, ಭೂ ಸುಧಾರಣೆ ಕಾಯ್ದೆಯನ್ನು ಇದುವರೆಗೆ ವಾಪಸ್ ಪಡೆದಿಲ್ಲ.
ಸರ್ಕಾರದ ನೀತಿಗಳು ರೈತರ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಕೋಮುವಾದಿಗಳು ಸುಳ್ಳು ಬಿತ್ತುವುದರ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಅದರ ಮೂಲಕವೇ ಅಧಿಕಾರ ಹಿಡಿಯುತ್ತಿದ್ದಾರೆ. ರೈತರನ್ನ ತಮ್ಮ ಅಧಿಕಾರದ ಗಾಳವನ್ನಾಗಿಸಿಕೊಂಡು ತಮಗೆ ಹೇಗೆ ಬೇಕು ಹಾಗೇ ಬಳಸುತ್ತಾ ಕಾರ್ಪೋರೆಟ್ ಕುಳಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಕೃಷಿ ಕ್ಷೇತ್ರ ಉಳಿಸುವ ಜವಾಬ್ದಾರಿ ರೈತ ಸಂಘದ ಮೇಲಿದೆ. ಈ ಉದ್ದೇಶದಿಂದ ರಾಜ್ಯದಲ್ಲಿ ಯುವಕರನ್ನ ಚಳವಳಿಗೆ ತರುವ ಎಲ್ಲಾ ಪ್ರಯತ್ನ ನಡೆಯುತ್ತಿದೆ. ಆ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಶ್ರಮಿಸುತ್ತಿದ್ದಾರೆ. ಈಗಾಗಲೇ, ಕಾರ್ಮಿಕ ವಲಯ ಅಪಾಯಕ್ಕೆ ಸಿಲುಕಿ ಆತಂಕದಲ್ಲಿದೆ. ಕೇಂದ್ರ, ರಾಜ್ಯ ಸರ್ಕಾರದ ಅತಿಕೆಟ್ಟ ನೀತಿಗಳು ಭವಿಷ್ಯವನ್ನೇ ಬುಡಮೇಲು ಮಾಡುತ್ತಿವೆ. ಇಂತಹ ಧೋರಣೆಗಳಿಂದ ಶ್ರಮಿಕವರ್ಗ ನೆಮ್ಮದಿಯಿಂದ, ಘನತೆಯಿಂದ ಜೀವನ ನಡೆಸುವುದು ಅಸಾಧ್ಯ ಮಾತು ಎಂದು ಕಿಡಿಕಾರಿದರು.
ಜನ ಸಮುದಾಯಕ್ಕೆ ಅಗತ್ಯ ಆಹಾರ ಪೂರೈಕೆ ಮಾಡುವ ಜವಾಬ್ದಾರಿ ರೈತರದ್ದು. ಅದೇ ರೈತರನ್ನ ಕಾಪಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಮಾರುಕಟ್ಟೆ ಕೃಷಿಗೆ ಮುಳುವಾಗಿ, ಕಾರ್ಪೋರೇಟ್ ಕುಳಗಳಿಗೆ ಮಣೆ ಹಾಕುವುದರಿಂದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ರಾಜಕೀಯ ಬದಲಾವಣೆ ಕಾಣದೆ, ವ್ಯವಸ್ಥೆ ಸುಧಾರಣೆ ಸಾಧ್ಯವಿಲ್ಲ ಎಂದು ಹೇಳಿದರು.

ಕೆ ಎಸ್ ಪುಟ್ಟಣ್ಣಯ್ಯನವರ ಒಡನಾಡಿ ಹಾಗೂ ರಾಜ್ಯ ಉಪಾಧ್ಯಕ್ಷರಾದ ಕೆಂಪೂಗೌಡ ಮಾತನಾಡಿ, ಪುಟ್ಟಣ್ಣಯ್ಯ ಸಂಘಟನೆಗೆ ಬಂದಿದ್ದು ಆಕಸ್ಮಿಕ. ಆದರೇ, ಹೋರಾಟದ ಕಿಚ್ಚು ವಿರಾಟ ಸ್ವರೂಪದಲ್ಲಿತ್ತು. 2000 ನೇ ಸಾಲಿನಲ್ಲಿ ಅಂದು ಭುವನ ಸುಂದರಿ ಸ್ಪರ್ಧೆ ನಡೆವಾಗ ಅದಕ್ಕೆ ಪ್ರತಿಯಾಗಿ ನಮ್ಮಲ್ಲಿ ‘ಕಾಯಕ ಸುಂದರಿ’ ಕಾರ್ಯಕ್ರಮ ನಡೆಸಿ ಗೌರವ ಸಲ್ಲಿಸಿದ್ದರು. ತಳ ಸಮುದಾಯದ ಮಹಿಳೆಯರಿಗೆ, ವ್ಯಕ್ತಿ ಗೌರವಕ್ಕೆ ಕಾರಣಕರ್ತರಾದರು. ಅಸಹಜ ಸಾವುಗಳಿಗೆ ಮುಂಚೆ ಯಾವುದೇ ಪರಿಹಾರ ಇರಲಿಲ್ಲ. ಈಗ ಪರಿಹಾರ ದೊರಕುತ್ತಿದೆ ಎಂದರೆ ಅದಕ್ಕೆ ಕಾರಣ ಪುಟ್ಟಣ್ಣಯ್ಯ. ಸದನದಲ್ಲಿ ಹೆಚ್ಚು ಮಹಿಳೆಯರ ಬಗ್ಗೆ ಮಾತನಾಡಿದರು ಗರ್ಭಕೋಶದ ಚಿಕಿತ್ಸೆ ವಿಚಾರದಲ್ಲಿ ಧ್ವನಿ ಮಾಡಿದ್ದರು. ಅತಿ ಹೆಚ್ಚು ಪತ್ರಗಳು ನೆರವನ್ನು ಕೋರಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹೋಗುತ್ತಿದ್ದವು.

ವರಿಷ್ಠರಾದ ಸುನೀತಾ ಪುಟ್ಟಣ್ಣಯ್ಯ ಅವರು ಮಾತನಾಡಿ, ಪುಟ್ಟಣ್ಣಯ್ಯನವರು ನಮ್ಮನ್ನ ಆಗಲಿಲ್ಲ. ಈಗಲೂ ಎಲ್ಲಿಯೋ ಒಂದು ಕಡೆ ಹೋರಾಟ ಮಾಡುತ್ತಿದ್ದಾರೆ. ಇಲ್ಲ ಚಳವಳಿ ದಿಸೆಯಿಂದ ಜೈಲಲ್ಲಿ ಇರಬಹುದು ಎನಿಸುತ್ತದೆ. ಬದುಕಿದ್ದಾಗಲೂ ಅಷ್ಟೇ ರೈತರ ಸಮಸ್ಯೆ, ಹೋರಾಟ ಇದಿಷ್ಟರಲ್ಲೇ ಜೀವನ ಕಳೆದರು. ಮನೆಗೆ ಸಮಯ ಕೊಡಲೇ ಇಲ್ಲ. ಈಗಲೂ ನಮಗೆ ಹಾಗೆಯೇ ಅನಿಸುತ್ತದೆ. ಹೋರಾಟದಲ್ಲಿ ಇದ್ದಾರೆ ಎನ್ನುವ ಮನಸ್ಥಿತಿಯಲ್ಲಿಯೇ ಇದ್ದೇವೆ.
ಈ ವಿಶೇಷ ಬರಹ ಓದಿದ್ದೀರಾ? ‘ನಿಮ್ಮೊಂದಿಗೆ ನಾವಿದ್ದೇವೆ; ಆತ್ಮಹತ್ಯೆ ಬೇಡ, ಆತ್ಮವಿಶ್ವಾಸವಿರಲಿ’: ರೈತ ಕಣ್ಮಣಿ ಪುಟ್ಟಣ್ಣಯ್ಯ ನೆನಪು
ಇತ್ತೀಚಿಗೆ ಇಲವಾಲದಿಂದ ರೈತ ಮುಖಂಡರೊಬ್ಬರು ಕರೆ ಮಾಡಿದ್ದರು. ಅವರು ಹೇಳಿದ್ದು, ಪುಟ್ಟಣ್ಣಯ್ಯ ಅವರನ್ನ ಯಾರೋ ಎತ್ತಿಕೊಂಡು ಹೋಗಿದ್ದಾರೆ. ಅಂದರೇ, ಇಲವಾಲದಲ್ಲಿ ಅನಾವರಣ ಆಗಬೇಕಿದ್ದ ಪುಟ್ಟಣ್ಣಯ್ಯ ಅವರ ಪ್ರತಿಮೆಯನ್ನ ಯಾರೋ ಎತ್ತಿಕೊಂಡು ಹೋಗಿದ್ದಾರೆ ಎನ್ನುವ ಬದಲು, ಪುಟ್ಟಣ್ಣಯ್ಯ ಅವರನ್ನೇ ಎತ್ತಿಕೊಂಡು ಹೋದರು ಎನ್ನುವಂತೆ ಹೇಳಿದರು. ಅಂದರೇ, ಪುಟ್ಟಣ್ಣಯ್ಯ ಜನರ ಮನಸ್ಸಿನಲ್ಲಿ ಅಷ್ಟರಮಟ್ಟಿಗೆ ನೆಲೆಸಿದ್ದಾರೆ.
ಕಾರ್ಯಕ್ರಮದ ಲೈವ್ ವೀಕ್ಷಿಸಿ: https://www.youtube.com/live/hifeyI5LgFw?si=4aB0XnxzvKd98kF3
ಕೇವಲ ರಾಜಕೀಯವಾಗಿ ಅಭಿವೃದ್ಧಿ ಎಂದರೆ ಸಾಲದು. ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದರ ಮೂಲಕ ಸ್ವಯಂ ಉದ್ಯೋಗದ ಕಡೆಗೆ ಒತ್ತು ಕೊಡಲಾಗಿದೆ. ಸ್ವಾವಲಂಬಿ ಜೀವನಕ್ಕೆ ಏನೆಲ್ಲ ಮಾಡಬೇಕು ಅಂತಹ ನಿಲುವಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.





