ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ವಿತರಿಸುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ಪಡಿತರದಾರರಿಗೆ ವಿತರಿಸಲಾಗುತ್ತಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಮಾಡಲಾಗುತ್ತಿದೆ ಎಂಬ ವದಂತಿಗಳೂ ಹರಿದಾಡುತ್ತಿದ್ದು, ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿದೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ.
ಈ ಬಗ್ಗೆ ರಾಮನಗರ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ. “ಪಡಿತರದಾರರಿಗೆ ಮಾಮೂಲಿ ಅಕ್ಕಿಯ ಜೊತೆಗೆ ಪೌಷ್ಠಿಕಾಂಶಯುಕ್ತ ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ. ಸಾರವರ್ಧಿತ ಅಕ್ಕಿಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಜೀವಸತ್ವಗಳು ಮತ್ತು ಕಬ್ಬಿಣಾಂಶ, ಫೋಲಿಕ್ ಆಮ್ಲ ಹಾಗೂ ವಿಟಮಿನ್ ಬಿ ನಂತಹ ಪೋಷಕಾಂಶಗಳನ್ನು ಸೇರಿಸಲಾಗಿರುತ್ತದೆ. ಆದರೆ, ಈ ಅಕ್ಕಿಯನ್ನು ಕೆಲವರು ಪ್ಲಾಸ್ಟಿಕ್ ಅಕ್ಕಿಯೆಂದು ಬಿಂಬಿಸಿ, ಸುಳ್ಳು ಪ್ರಚಾರ ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಪ್ರತಿ ಕ್ವಿಂಟಾಲ್ ಮಾಮೂಲಿ ಅಕ್ಕಿಗೆ 1 ಕೆ.ಜಿ ಸಾರವರ್ಧಿತ ಅಕ್ಕಿಯನ್ನು ಸೇರಿಸಲಾಗುತ್ತದೆ. ಈ ಅಕ್ಕಿ, ಮಾಮೂಲಿ ಅಕ್ಕಿಗಿಂತ ಭಿನ್ನವಾಗಿ ಕಾಣಿಸುತ್ತದೆ. ಇದನ್ನೇ ನೆಪವಾಗಿಟ್ಟುಕೊಂಡು ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ಅಂತಹ ವದಂತಿಗಳನ್ನು ಜನರು ನಂಬಬಾರದು” ಎಂದು ಅವರು ತಿಳಿಸಿದ್ದಾರೆ.
“ಸಾರವರ್ಧಿತ ಅಕ್ಕಿಯ ಸೇವನೆಯು ರಕ್ತಹೀನತೆ ಮತ್ತು ಅಪೌಷ್ಠಿಕತೆಯನ್ನು ಹೋಗಲಾಡಿಸುತ್ತದೆ. ಸರ್ಕಾರ ಪಡಿತರ ಚೀಟಿದಾರರಿಗೆ ವಿತರಿಸುತ್ತಿರುವ ಈ ಅಕ್ಕಿಯನ್ನು ನಿರ್ಭೀತಿಯಿಂದ ಬಳಸಬಹುದು” ಎಂದು ಅವರು ಹೇಳಿದ್ದಾರೆ.




