ರಾಜ್ಯದಲ್ಲಿ ವಿವಾದಾತ್ಮಕವಾಗಿರುವ ಕೆಐಒಸಿಎಲ್ ಮತ್ತು ವಿಐಆರ್ಎಲ್ ಗಣಿಗಾರಿಕೆಗೆ ಅನುಮತಿ ನೀಡಿರುವುದನ್ನು ತಡೆಯುವಂತೆ ಓವರ್ಸೈಟ್ ಆಥಾರಿಟಿಯ ನ್ಯಾಯಮೂರ್ತಿ ಬಿ.ಸುದರ್ಶನರೆಡ್ಡಿ ಹಾಗೂ ರಾಜ್ಯದ ಕಾನೂನು ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹೀರೆಮಠ್ ಹೇಳಿದರು.
ರಾಯಚೂರುನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಕೇಂದ್ರ ಉಕ್ಕು ಸಚಿವಾಲಯದ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಪ್ರಮಾಣವಚನ ತೆಗೆದುಕೊಂಡ ದಿನದಂದೇ ಸಂಡೂರು ತಾಲೂಕಿನ ದೇವದಾರಿ ಗಣಿಗಾರಿಕೆಗೆ ಸಹಿ ಹಾಕುವ ಅಗತ್ಯ ಏನಿತ್ತು” ಎಂದು ಪ್ರಶ್ನಿಸಿದರು.
“ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಪರಾಮರ್ಶಿಸದೇ ಗಣಿಗಾರಿಕೆಗೆ ಅನುಮತಿ ನೀಡುವ ಅತುರತೆ ಏನಿತ್ತು. ಗಣಿಗಾರಿಕೆ ಅನುಮತಿ ಕೋರಿ ರಾಜ್ಯ ಸರ್ಕಾರ ಪ್ರಸ್ತಾವನೆಯಿದ್ದರೂ ಪರಿಶೀಲಸಿ ನಿರ್ಧರಿಸಬೇಕಿರುವುದು ಸಚಿವಾಲಯದ ಕರ್ತವ್ಯ. ಅದಿರು ಗಣಿಗಾರಿಕೆಯಿಂದ ಆಗುವ ಅಪಾಯಗಳನ್ನು ಈಗಾಗಲೇ ಸುಪ್ರಿಂಕೋರ್ಟ್ ಸೇರಿ ಹಲವಾರು ಪರಿಸರ ರಕ್ಷಣಾ ಸಂಸ್ಥೆಗಳು, ಸಮಿತಿಗಳು ವರದಿ ನೀಡಿವೆ. ಅಪಾಯಗಳನ್ನು ಯೋಚಿಸದೇ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ” ಎಂದು ಆರೋಪಿಸಿದರು.
“20 ವರ್ಷಗಳಿಂದ ಪಶ್ಚಿಮ ಘಟ್ಟದಲ್ಲಿ ಕೆಐಒಸಿಎಲ್ ನಡೆಸುತ್ತಿದ್ದ ಗಣಿಗಾರಿಕೆ ಗುತ್ತಿಗೆಯನ್ನು ರದ್ದುಪಡಿಸಿದೆ. ಗಣಿಗಾರಿಕೆಯಿಂದ ಪರಿಸರ ಹಾಗೂ ಅರಣ್ಯ ಪ್ರದೇಶ ಹಾನಿಯಾಗುತ್ತಿದ್ದ ಕಾರಣಕ್ಕೆ ಗುತ್ತಿಗೆ ರದ್ದುಪಡಿಸಿದ್ದಾರೆ. ಮತ್ತೆ ಅದೇ ಕಂಪನಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ಕೆಐಒಸಿಎಲ್ ಗಣಿಗಾರಿಕೆಯಿಂದ 99,330 ಮರಗಳು, ವಿಐಎಸ್ಎಲ್ ಗಣಿಗಾರಿಕೆಯಿಂದ 29,440 ಮರುಗಳು ನಾಶವಾಗುತ್ತವೆ. ಅಪಾರ ಪರಿಸರ ಸಂಪತ್ತು ಗಣಿಗಾರಿಕೆ ಪರ್ಯಾಯ ವ್ಯವಸ್ಥೆ ಹೇಗೆ ಸರಿದೂಗಿಸಲು ಸಾಧ್ಯ” ಎಂದರು.
“ಸುಪ್ರಿಂಕೋರ್ಟ್ ಸೂಚನೆ ಮೇರೆಗೆ ಬಳ್ಳಾರಿ, ತುಮಕೂರು, ಚಿತ್ರದುರ್ಗ ಸೇರಿ ನಾಲ್ಕು ಜಿಲ್ಲೆಗಳ ಪರಿಸರ ಪುನಶ್ಚೇತನ ಕಾರ್ಯಕ್ರಮ ಸಮರ್ಪಕ ಜಾರಿಗೊಳಿಸಲಾಗಿದೆ. ಸಮಿತಿ ವರದಿಯಂತೆ ನಾಲ್ಕು ಜಿಲ್ಲೆಗಳ 283 ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ 400 ಗ್ರಾಮಗಳನ್ನು ಗುರುತಿಸಿರುವುದು ಅವೈಜ್ಞಾನಿಕವಾಗಿದೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸೇರಿದಂತೆ ಅಭಿವೃದ್ದಿ ಸೂಚ್ಯಂಕ ಆಧಾರದ ಮೇಲೆ ರೂಪಿತವಾಗಿರುವ ಕ್ರಿಯಾ ಯೋಜನೆಯಂತೆ ಜಾರಿಗೊಳಿಸಬೇಕು. ಕಟ್ಟಡ, ಕಾಮಗಾರಿ ಕೆಲಸಗಳನ್ನು ಕೈಗೆತ್ತಿಕೊಳ್ಳಬಾರದು” ಎಂದು ಒತ್ತಾಯಿಸಿದರು.
“ಪರಿಸರ ಪುನಶ್ಚೇತನಕ್ಕೆ ನಿಗದಿಪಡಿಸಲಾದ 25 ಸಾವಿರ ಕೋಟಿ ರೂ. ಬಳಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಬದ್ದತೆ ತೋರಬೇಕು. ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರೊಂದಿಗೆ ಸಕರಾತ್ಮಕ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಎರಡು ಗಣಿಗಾರಿಕೆ ಅನುಮತಿ ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ನೀಟ್ ರದ್ದು ಮಾಡಿದರೆ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ: ಶಿಕ್ಷಣ ಸಚಿವ
ಪತ್ರಿಕಾಗೋಷ್ಠಿಯಲ್ಲಿ ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಜಾನವೆಸ್ಲಿ, ಖಾಜಾ ಅಸ್ಲಂ ಅಹ್ಮದ್, ಭೀಮರಾಯ ಜರದಬಂಡಿ ಉಪಸ್ಥಿತರಿದ್ದರು.




