“ಜಿಲ್ಲೆಯಲ್ಲಿ ಪತ್ತೆಯಾದ ಕಳಪೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟಗಾರರ ಲೈಸನ್ಸ್ ರದ್ದು ಮಾಡಿ. ಅವರ ವಿರುದ್ಧ ಚಾರ್ಜ್ ಶೀಟ್ ಹಾಕಿ. ಎಫ್ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ” ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದರು.
ಹಾವೇರಿ ಪಟ್ಟಣದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಮಂಗಳವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಈ ಮೊದಲು ರಾಣೇಬೆನ್ನೂರು ಉತ್ತಮ ಸೀಡ್ಸ್ ಗೆ ಹೆಸರಾಗಿತ್ತು. ಈಗ ಕಳಪೆ ಬೀಜ ಮಾರಾಟದಿಂದ ಜಿಲ್ಲೆಯಲ್ಲಿ ಸುದ್ದಿಯಲ್ಲಿದೆ. ರಾಜ್ಯ ಮಟ್ಟದ ವಿಜಲನ್ಸ್ ತಂಡ ಕರೆಸಿ ಪರಿಶೀಲನೆ ಮಾಡಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ” ಸೂಚಿಸಿದರು.
ಶಾಸಕ ಪ್ರಕಾಶ ಕೋಳಿವಾಡ ಅವರು ಮಾತನಾಡಿ, “ಕಳಪೆ ಬೀಜ-ಗೊಬ್ಬರ ಮಾರಾಟಮಾಡಿದ ಪ್ರಕರಣದಲ್ಲಿ ಬಂದ್ ಮಾಡಲಾದ ಅಂಗಡಿಗಳನ್ನು ಪುನಃ ಆರಂಭಿಸಲಾಗಿದೆ. ಇದಕ್ಕೆ ಯಾರು ಅನುಮತಿ ನೀಡಿದರು ಎಂದು ಪ್ರಶ್ನೆ ಮಾಡಿದರು ಹಾಗೂ ಕೂಡಲೇ ಆ ಅಂಗಡಿಗಳನ್ನು ಮುಚ್ಚಿಸಲು ಕ್ರಮವಹಿಸಬೇಕು” ಎಂದರು.
ಸಚಿವರು ‘ಕಳಪೆ ಬೀಜದ ಕುರಿತು ಲ್ಯಾಬ್ ವರದಿ ಏನಂತಾ ಬಂದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಅವರು ಕಳಪೆ ಎಂದು ವರದಿ ಬಂದಿದೆ ಎಂದು ತಿಳಿಸಿದಾಗ, ಕೂಡಲೇ ಕಳಪೆ ಬೀಜ ಮಾರಾಟಗಾರರ ಅಂಗಡಿ ಮುಚ್ಚಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ” ನೀಡಿದರು.
ನಕಲಿ ಆರ್ಟಿಸಿ: ಶಿಗ್ಗಾಂವ ತಾಲೂಕಿನಲ್ಲಿ ನಕಲಿ ಆರ್ಟಿಸಿ ತಯಾರಿಸಿ ರೈತರಲ್ಲದವರು ಬೆಳೆಹಾನಿ ಪರಿಹಾರ ಪಡೆದಿದ್ದಾರೆ. ಇದರಿಂದ ನೈಜ ರೈತರಿಗೆ ಅನ್ಯಾಯವಾಗಿದೆ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಅವ್ಯವಹಾರದಲ್ಲಿ ಅಧಿಕಾರಿಗಳ ಹಸ್ತಕ್ಷೇಪ ಇದೆ ಎಂದು ಅನುಮಾನ ಬರುತ್ತಿದೆ. ನಕಲಿ ಆರ್.ಟಿ.ಸಿ. ತಯಾರಿಸುವ ಏಜೆಂಟರಿದ್ದಾರೆ. ಅವರಿಗೆ ಮೊದಲೇ ಗೊತ್ತಿರುತ್ತದೆ ಯಾವ ಬೆಳೆಗೆ ಬೆಳೆ ವಿಮೆ ಎಂದು. ಇದು ಹೇಗೆ ಸಾಧ್ಯ? ರೈತರು ಬೆಳೆ ವಿಮೆ ಪಾವತಿಸಿದರೆ ಪರಿಹಾರ ಬರುವುದಿಲ್ಲ. ಆದರೆ ಏಜೆಂಟರು ಪಾವತಿಸಿದರೆ ಪರಿಹಾರ ಬರುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ” ಎಂದು ಶಾಸಕ ಯಾಸೀರ್ ಅಹ್ಮದ್ಖಾನ್ ಪಠಾಣ ಅವರು ಸಚಿವರ ಗಮನಕ್ಕೆ ತಂದರು.
ತಂಡ ರಚನೆಗೆ ಸೂಚನೆ: ನಕಲಿ ಆರ್ಟಿಸಿ ತಯಾರಿಸಿ 500 ಎಕರೆ ಪ್ರದೇಶದ ಬೆಳೆ ಪರಿಹಾರ ಪಡೆದಿದ್ದರೂ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಇಲ್ವಾ? ನೀವೆಲ್ಲ ಹೇಗೆ ಕೆಲಸ ಮಾಡ್ತೀರಿ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ತಂಡ ರಚಿಸಿ. ತನಿಖೆ ನಡೆಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಹಾಗೂ ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಅಧಿಕಾರಿಗಳು ಜಾಗೃತರಾಗಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ನೂರಾರು ರೈತರು ಭಿಕ್ಷಾಟನೆ ಮೂಲಕ ಪ್ರತಿಭಟನೆ
“ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಅಂಕಿ-ಸಂಖ್ಯೆ ಇಲಾಖೆಗಳು ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಒಂದೇ ಊರು, ಒಂದೇ ಪ್ರದೇಶ ಹಾಗೂ ಒಂದೇ ಸರ್ವೇ ನಂಬರ್ನಲ್ಲಿ ಹೆಚ್ಚಿನ ಬೆಳೆ ಪರಿಹಾರ ಬರುತ್ತಿದ್ದರೆ ಕಳೆದ ಮೂರು ವರ್ಷದ ಕುರಿತು ಪರೀಕ್ಷೆ ಮಾಡಬೇಕು” ಎಂದು ಸಚಿವರು ಸೂಚನೆ ನೀಡಿದರು.





