ಮೈಸೂರು ಜಿಲ್ಲೆ, ಹೆಗ್ಗಡದೇವನಕೊಟೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಫಾರಿ ಬಂದ್ ಮಾಡಿರುವುದರಿಂದ ಸರಿ ಸುಮಾರು ಎರಡು ಸಾವಿರ ಉದ್ಯೋಗಿಗಳಿಗೆ, ಅವರನ್ನೇ ನಂಬಿಕೊಂಡಿರುವ ಕುಟುಂಬಗಳಿಗೆ ಸಂಕಷ್ಟ ಉಂಟಾಗಲಿದೆ ಎಂದು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ನೀಡಿದರು.
ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷ ತಡೆಯುವ ಉದ್ದೇಶದಿಂದ ಇತ್ತೀಚಿಗೆ ಅರಣ್ಯ ಸಚಿವರಾದ ಈಶ್ವರ್ ಬಿ. ಖಂಡ್ರೆ ಅವರು ಸಫಾರಿ ಬಂದ್ ಮಾಡಿ ಆದೇಶ ಹೊರಡಿಸಿದ್ದರು. ಇದರಿಂದಾಗಿ ಪ್ರವಾಸಿಗರು ರೆಸಾರ್ಟ್ಗಳಿಗೆ ಬಾರದ ಹಿನ್ನಲೆಯಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದರಿಂದ ಮುಂದೇನು? ಎನ್ನುವ ಆತಂಕಕ್ಕೆ ಒಳಗಾಗಿದ್ದಾರೆ.
ತಾಲ್ಲೂಕು ಕಚೇರಿ ಆವರಣದಲ್ಲಿ ವಾಟರ್ ವುಡ್ ಅಂಡ್ ರೆಸಾರ್ಟ್, ಸಾರಾಯ್ ರೆಸಾರ್ಟ್, ಸಂದೇಶ್ ವಾಟರ್ ಎಡ್ಜ್ ಕಾವ್ ರೆಸಾರ್ಟ್, ರೆಡ್ ಅರ್ಥ್, ಡಿಸ್ಕವರಿ ವಿಲೇಜ್, ಕಬಿನಿ ಲೇಕ್, ವೈಲ್ಡ್ ಅರೇಂಜ್ ಕಬಿನಿ ಲೇಕ್ ವ್ಯೂ, ಕಬಿನಿ ಸ್ಟ್ರಿಂಗ್ಸ್, ಫೈರ್ ಫೈಲ್ಸ್ ಸೇರಿದಂತೆ 12 ರೆಸಾರ್ಟ್ ಗಳ ಉದ್ಯೋಗಿಗಳು ಪ್ರತಿಭಟನೆ ನಡೆಸಿ ಸಫಾರಿ ಸ್ಥಗಿತ ವಾಪಸ್ ಪಡೆಯುವಂತೆ ಒತ್ತಾಯಿಸಿದರು.

ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ ಯಾವುದೇ ಕೈಗಾರಿಕೆ, ಕಾರ್ಖಾನೆ ಇಲ್ಲದಿರುವುದರಿಂದ ರೆಸಾರ್ಟ್ ಗಳು ಉದ್ಯೋಗದ ಆಸರೆಯಾಗಿವೆ. ಪ್ರಕೃತಿ ಸಿರಿ ಹೊಂದಿರುವುದರಿಂದ ಪ್ರವಾಸಿಗರು ಹೆಚ್ಚಿನ ಮಟ್ಟದಲ್ಲಿ ಬರುತ್ತಾರೆ. ಇದರಿಂದಾಗಿ ರೆಸಾರ್ಟ್ ನಡೆಯುತ್ತಿತ್ತು. ಉದ್ಯೋಗ ಅವಕಾಶ ಲಭಿಸಿತ್ತು. ಇದೀಗ ಅದನ್ನು ನಿಷೇಧಿಸಲಾಗಿದೆ. ಈಗ ಪ್ರವಾಸಿಗರು ಬರದೇ ಬಿಕೋ ಎನ್ನುತ್ತಿವೆ.
ಈ ಸುದ್ದಿ ಓದಿದ್ದೀರಾ? ಮಳವಳ್ಳಿ | ಕಾಲುವೆಗೆ ಬಿದ್ದಿದ್ದ ಕಾಡಾನೆ ರಕ್ಷಣೆ
ಹೀಗೇ ಮುಂದುವರೆದರೆ ರೆಸಾರ್ಟ್ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದನ್ನೇ ನಂಬಿ ಜೀವನ ನಡೆಸುತ್ತಿರುವ ಕುಟುಂಬಗಳ ಪರಿಸ್ಥಿತಿಯನ್ನು ಆಲೋಚಿಸದೆ ಆದೇಶ ಮಾಡಲಾಗಿದೆ. ಇದರಿಂದ ಕುಟುಂಬಗಳು ಬೀದಿಪಾಲಾಗುವ ಸಾಧ್ಯತೆ ಹೆಚ್ಚಿದ್ದು ಕೂಡಲೇ ಸಫಾರಿ ಬಂದ್ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಪುರಾತತ್ವ ಇಲಾಖೆಯ ನಿರ್ಲಕ್ಷ್ಯ; ಕೋಟೆ ಪ್ರದೇಶದಲ್ಲಿ ನಿಯಮ ಉಲ್ಲಂಘನೆಯ ಆರೋಪ
ಪ್ರತಿಭಟನೆಯಲ್ಲಿ ಹೊಸಮಾಳ ಸ್ವಾಮಿ, ಯಶೋಧ, ದೇವಯ್ಯ, ಸಲೀಂ, ಷಣ್ಮುಗ, ಚಂದ್ರು, ಶಿವಪ್ಪ, ಮೂರ್ತಿ, ವಿಜಯಕುಮಾರ್, ಚಿಕ್ಕಣ್ಣ, ಕೃಷ್ಣ, ಪ್ರತಾಪ್ ಸಿಂಹ, ದೇವೇಶ, ರವಿ, ರಾಕಿ, ಮಹೇಶ್, ಗುರುಸ್ವಾಮಿ ಸೇರಿದಂತೆ ನೂರಾರು ಜನ ಇದ್ದರು.





