ಸಹಕಾರ ಭಾರತಿ ಉಡುಪಿ ತಾಲೂಕು ವತಿಯಿಂದ ಸಂಸ್ಥಾಪನಾ ದಿನಾಚರಣೆಯನ್ನು ಉಡುಪಿ ಇಂಡಸ್ಟ್ರಿಯಲ್ ಕೋ-ಆಪ್ ರೇಟಿವ್ ಸೊಸೈಟಿ, ಕಿನ್ನಿಮುಲ್ಕಿಯ ಸಭಾಭವನದಲ್ಲಿ ಗುರುವಾರ ಆಯೋಜಿಸಲಾಯಿತು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಹಕಾರ ಭಾರತಿ ಉಡುಪಿ ಜಿಲ್ಲಾ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳ ಪ್ರತೀ ಮನೆಗೊಬ್ಬರು ಸಹಕಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಆರ್ಥಿಕ ಪ್ರಗತಿಯೊಂದಿಗೆ ದೇಶದ ಅಭಿವೃದ್ಧಿ ಸಾಧ್ಯವೆಂದರು.
ಸಹಕಾರ ಭಾರತಿ ಉಪಾಧ್ಯಕ್ಷ ಹರೀಶ್ ಕಲ್ಯ ಸಂಸ್ಥಾಪನಾ ದಿನಾಚರಣೆಯ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರ ಭಾರತಿ ಉಡುಪಿ ತಾಲೂಕು ಅಧ್ಯಕ್ಷ ಪಾಂಡುರಂಗ ಕಾಮತ್ ಎಳ್ಳಾರೆ ಮಾತನಾಡಿ, ಪಂಚಾಯತ್ ಹಾಗೂ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಮತ್ತು ಯುವಕರನ್ನು ಸಂಘಟಿಸಿ ಸಹಕಾರ ಭಾರತಿಯನ್ನು ವಿಸ್ತರಿಸುವ ಮೂಲಕ ಸಹಕಾರಿಗಳ ಅಭಿವೃದ್ಧಿಯ ಜೊತೆಗೆ ರಾಷ್ಟ್ರಭಾವನೆ ಬೆಳೆಸುವಂತೆ ಕರೆ ನೀಡಿದರು.
ತಾಲೂಕು ಮಹಿಳಾ ಪ್ರಮುಖ್ ರೂಪಾ ನಾಯಕ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಾಗೇಶ್ ದೇವತಾ ಪ್ರಾರ್ಥನೆ ಸಲ್ಲಿಸಿದರು. ಪ್ರೀತಿ ಕಾಮತ್ ಹಾಗೂ ಜ್ಯೋತಿ ಕಾಮತ್ ಸಹಕಾರ ಗೀತೆಯನ್ನು ಹಾಡಿದರು. ರತ್ನಾಕರ್ ಶೆಟ್ಟಿ ಆತ್ರಾಡಿ ವಂದನಾರ್ಪಣೆ ಮಾಡಿದರು. ಮಂಜುನಾಥ್ ಮಣಿಪಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.





