ಸಮಾಜಮುಖಿ ಬಳಗದ ವತಿಯಿಂದ ಬೆಂಗಳೂರು ಅರೆಮನೆ ರಸ್ತೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನ.8 ಮತ್ತು 9 ರಂದು ಹಮ್ಮಿಕೊಳ್ಳಲಾಗಿರುವ ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್ ಎ.ಕೋಟ್ಯಾನ್ ಮಂಗಳವಾರ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಕನ್ನಡ ಕ್ರಿಯಾಶೀಲ ಮನಸ್ಸುಗಳನ್ನು ಒಂದೆಡೆ ಸೇರಿಸಿ ಚರ್ಚಿಸುವ ಉದ್ದೇಶದಿಂದ ಸಮಾಜಮುಖಿ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಕನ್ನಡ ಮುಂದಿರುವ ಸಮಸ್ಯೆ, ಸವಾಲುಗಳನ್ನು ಚರ್ಚಿಸಿ ಅದಕ್ಕೆ ಬೇಕಾಗಿರುವ ಪರಿಹಾರೋಪಾಯಗಳನ್ನು ಕಂಡುಕೊಳ್ಳ ಬೇಕಾಗಿದೆ. ಈ ಸಮ್ಮೇಳನ ಎಲ್ಲ ಸಹಕಾರದೊಂದಿಗೆ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ.ಈಶ್ವರ ಭಟ್, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ವನಿತಾ ಶೆಟ್ಟಿ, ಕನ್ನಡ ಉಪನ್ಯಾಸಕರಾದ ಸುಲೋಚನಾ ಪಚ್ಚನಡ್ಕ, ಸಾಹಿತ್ಯ ಸಂಘದ ಪ್ರತಿನಿಧಿಗಳಾದ ಹಿತ, ಶ್ರೀನಿಧಿ, ಪ್ರಾರ್ಥನ, ಕನ್ನಡ ಉಪನ್ಯಾಸಕ ಮತ್ತು ಸಮಾಜಮುಖಿ ಯುವ ವೇದಿಕೆಯ ಸದಸ್ಯ ರಾಮಾಂಜಿ ಉಪಸ್ಥಿತರಿದ್ದರು.




