ಎರಡು ವರ್ಷಗಳ ಹಿಂದೆ ನಡೆದ ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯ ದಲಿತ ದಿನಗೂಲಿ ಕಾರ್ಮಿಕ ಕೃಷ್ಣರ ಕಗ್ಗೋಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಹಾಗೂ ಅಂಬೇಡ್ಕರ್ ಆವಾಸ್ ಮತ್ತು ಬಸವ ಇಂದಿರಾ ಆವಾಸ್ ಮನೆ ನಿರ್ಮಾಣ ಸಹಾಯಧನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಸಮತಾ ಸೈನಿಕ ದಳದ ಉಡುಪಿ ಜಿಲ್ಲಾ ಸಮಿತಿ ಕಾರ್ಯಕರ್ತರು ಬ್ರಹ್ಮಗಿರಿ ಸರ್ಕಲ್ನಲ್ಲಿ ಕಪ್ಪುಪಟ್ಟಿ ಧರಿಸಿ ಧರಣಿ ಪ್ರತಿಭಟನೆ ನಡೆಸಿದರು.

ಸಮತಾ ಸೈನಿಕ ದಳದ ಉಡುಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ, “ಸರ್ವರಿಗೂ ಸೂರು, ಗುಡಿಸಲು ರಹಿತ ರಾಜ್ಯ” ಎಂಬ ಘೋಷಣೆಗಳು ಕೇವಲ ಬಾಯಿ ಮಾತಿನಷ್ಟೇ ಉಳಿದಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಾದ್ಯಂತ ಎಸ್ಸಿ/ಎಸ್ಟಿ/ಒಬಿಸಿ ಹಾಗೂ ಅಲ್ಪಸಂಖ್ಯಾತ ಬಡಜನರು ಇಂದಿಗೂ ಟಾರ್ಪಾಲು, ತಗಡು ಶೀಟ್, ಮುರುಕಲು ಮನೆಗಳಲ್ಲಿ ಹೀನಾಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಅವರು ದೂರಿದರು.

ಈ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿದ ವಿಶ್ವನಾಥ ಪೇತ್ರಿ, ಕಳೆದ ಹತ್ತು ವರ್ಷಗಳಿಂದ ಮನೆ ನಿರ್ಮಾಣಕ್ಕೆ ನೀಡುತ್ತಿರುವ 2 ಲಕ್ಷ ರೂ. ಸಹಾಯಧನದಿಂದ ಇಂದಿನ ದುಬಾರಿ ನಿರ್ಮಾಣ ವೆಚ್ಚದಲ್ಲಿ ಮನೆಯ ತಳಹದಿಯನ್ನೇ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಶಿಲೆಕಲ್ಲು, ಕೆಂಪುಕಲ್ಲು, ಸಿಮೆಂಟ್, ಕಬ್ಬಿಣ, ಮರಳು ಹಾಗೂ ಕೂಲಿ ವೆಚ್ಚಗಳು ಹಲವು ಪಟ್ಟು ಏರಿಕೆಯಾಗಿದ್ದರೂ ಸಹಾಯಧನ ಹೆಚ್ಚಳವಾಗಿಲ್ಲ. ಪರಿಣಾಮವಾಗಿ ಗ್ರಾಮ ಪಂಚಾಯತ್ ಮಂಜೂರಾತಿ ಪತ್ರ ಪಡೆದ ಹಲವರು ಐದು ವರ್ಷ ಕಳೆದರೂ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದರು.

ಪ್ರಸ್ತುತ 600 ಚದರ ಅಡಿ ಕಚ್ಚಾ ಮನೆ ನಿರ್ಮಾಣಕ್ಕೂ ಕನಿಷ್ಠ 20 ಲಕ್ಷ ರೂ. ವೆಚ್ಚವಾಗುತ್ತದೆ. ಪಿಟಿಸಿಎಲ್ ಕಾಯ್ದೆ ಹಾಗೂ ಇತರ ತಾಂತ್ರಿಕ ಅಡೆತಡೆಗಳಿಂದ ಗ್ರಾಮೀಣ ಭಾಗದ ಎಸ್ಸಿ/ಎಸ್ಟಿ ಜನರಿಗೆ ಬ್ಯಾಂಕ್ಗಳಿಂದ ಗೃಹಸಾಲ ಪಡೆಯುವುದೂ ಕಷ್ಟವಾಗುತ್ತಿದೆ. ಪಟ್ಟಣದ ಸಮೀಪದ ಭೂಮಿಗೆ ಮಾತ್ರ ಸೀಮಿತ ಪ್ರಮಾಣದಲ್ಲಿ ಸಾಲ ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಅರ್ಹರಿಗೆ ಬ್ಯಾಂಕ್ಗಳು ಹಿಂದೇಟು ಹಾಕುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಅವರು ಆರೋಪಿಸಿದರು.
ಪರ್ಯಾಯ ಮಠದ ಸ್ವಾಮಿಗಳ 2 ವರ್ಷದ ಪುರ ಪ್ರವೇಶಕ್ಕೆ 6 ಕೋಟಿ ರೂಪಾಯಿ ನೀಡುವ ಸರ್ಕಾರ ಪರಿಶಿಷ್ಟರ ಸ್ವಂತ ಮನೆ ನಿರ್ಮಾಣಕ್ಕೆ ಕೇವಲ 2 ಲಕ್ಷ ರೂಪಾಯಿ ಎಲ್ಲಿದೆ ಸಮಾನತೆ ? ಬೀದಿ ನಾಯಿಗಳ ಆಶ್ರಯ ನಿವೇಶನಕ್ಕೆ 6 ಎಕ್ರೆ ಭೂಮಿ. ಪರಿಶಿಷ್ಟರ ಆಶ್ರಯ ನಿವೇಶನಕ್ಕೆ ಕೇವಲ 2 ಸೆಂಟ್ಸ್ ಭೂಮಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡುವ ಅಂಬೇಡ್ಕರ್ ಆವಾಸ್ ಮನೆ ನಿರ್ಮಾಣ ಸಹಾಯಧನವನ್ನು ಕನಿಷ್ಠ 9 ಲಕ್ಷ ರೂ.ಗಳಿಗೆ ಹಾಗೂ ಒಬಿಸಿ ವರ್ಗಕ್ಕೆ ನೀಡುವ ಬಸವ ಇಂದಿರಾ ಆವಾಸ್ ಸಹಾಯಧನವನ್ನು ಕನಿಷ್ಠ 5 ಲಕ್ಷ ರೂ.ಗಳಿಗೆ ಹೆಚ್ಚಿಸಿ, ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಘೋಷಿಸಿ ಗ್ರಾಮೀಣ ಪ್ರದೇಶದಲ್ಲಿ ತಕ್ಷಣ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದೇ ವೇಳೆ 2024ರ ಮಾರ್ಚ್ 2ರಂದು ರಾತ್ರಿ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಗುಂಡಿಕ್ಕಿ ಹತ್ಯೆಗೀಡಾದ ಹನೆಹಳ್ಳಿಯ ಕೃಷ್ಣರ ಪ್ರಕರಣದಲ್ಲಿ ಇಂದಿಗೂ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಿಐಡಿಗೆ ಒಪ್ಪಿಸಬೇಕೆಂದು ಧರಣಿ ವೇಳೆ ಆಗ್ರಹಿಸಲಾಯಿತು.

ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಧರಣಿ ನಡೆಸಲು ಕಾರ್ಯಕರ್ತರು ಪೂರ್ವ ಘೋಷಣೆ ನೀಡಿದ್ದರೂ, ಪೊಲೀಸರು ಇದಕ್ಕೆ ಅವಕಾಶ ನೀಡದೆ ನಾಯರ್ಕೆರೆ ಭಾಗದಲ್ಲೇ ಬೆಳಗ್ಗಿನಿಂದ ಬಿಗು ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು. ಅಜ್ಜರಕಾಡಿನ ಹುತಾತ್ಮ ಚೌಕದಲ್ಲಿ ಒಗ್ಗೂಡಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ಬ್ರಹ್ಮಗಿರಿಯತ್ತ ತೆರಳಿದಾಗ ಪೊಲೀಸರು ತಡೆದು ಮುಂದಕ್ಕೆ ಸಾಗಲು ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ತಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರೂ ಪೊಲೀಸರು ಅನುಮತಿ ನೀಡದ ಹಿನ್ನೆಲೆ, ಕಾಂಗ್ರೆಸ್ ನಾಯಕರನ್ನು ಸ್ಥಳಕ್ಕೆ ಕರೆಸಿ ತಮ್ಮ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರವಾನಿಸುವಂತೆ ಒತ್ತಾಯಿಸಿದರು. ಬಳಿಕ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲು, ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ಮಹಾಬಲ ಕುಂದರ್, ಸುರೇಶ್ ಶೆಟ್ಟಿ ಬನ್ನಂಜೆ, ಕೀರ್ತಿ ಶೆಟ್ಟಿ, ನಾಗೇಶ್ ಕುಮಾರ್ ಉದ್ಯಾವರ ಸೇರಿದಂತೆ ಹಲವು ನಾಯಕರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಅದನ್ನು ಮುಖ್ಯಮಂತ್ರಿಗೆ ಕಳುಹಿಸುವುದಾಗಿ ಭರವಸೆ ನೀಡಿದರು.

ಧರಣಿಯಲ್ಲಿ ಸಮತಾ ಸೈನಿಕ ದಳದ ಪದಾಧಿಕಾರಿಗಳಾದ ಗಣೇಶ್ ಸಾಲ್ಯಾನ್, ಜ್ಯೋತಿ ಶಿರಿಯಾರ, ವಿಶ್ವೇಶ್ ಬ್ರಹ್ಮಾವರ, ಸತೀಶ್ ಜನ್ನಾಡಿ, ಗಜೇಂದ್ರ ನಲ್ಲೂರು, ಎ.ಕೆ. ಸುಬ್ರಹ್ಮಣ್ಯ, ರಾಮ ಕೂಟೂರು ಸೇರಿದಂತೆ ಹಲವರು ಭಾಗವಹಿಸಿದ್ದರು.





