ಸರ್ಕಾರದ ಆದೇಶದಕ್ಕೆ ವಿರುದ್ಧವಾಗಿ 9/11 ಪ್ರಮಾಣಪತ್ರಗಳನ್ನು ವಿತರಣೆ ಮಾಡಿದ ಆರೋಪದ ಮೇಲೆ ಬಳ್ಳಾರಿ ಜಿಲ್ಲೆಯ ಹೊಸದರೋಜಿ ಗ್ರಾಮ ಪಂಚಾಯತಿ ಪಿಡಿಒ ಮತ್ತು ಎಸ್ಡಿಎ ಅಧಿಕಾರಿಯನ್ನು ಅಮಾನತು ಮಾಡಿಲಾಗಿದೆ.
ಸಂಡೂರು ತಾಲೂಕಿನ ಹೊಸದರೋಜಿ ಗ್ರಾಮ ಪಂಚಾಯತಿ ಪಿಡಿಒ ಸಿದ್ಧಲಿಂಗಸ್ವಾಮಿ, ಎಸ್ಡಿಎ ಸಿದ್ಧರಾಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಇಬ್ಬರನ್ನೂ ಅಮಾನತುಗೊಳಿಸಿ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಹ್ಯಾರಿಸ್ ಸುಮೇರ್ ಆದೇಶಿಸಿದ್ದಾರೆ.
ಹೊಸದರೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಗಳ ಸಾರ್ವಜನಿಕರಿಗೆ ನಿಯಮಬಾಹಿರತವಾಗಿ 9/11 ಪ್ರಮಾಣಪತ್ರಗಳನ್ನು ಪಿಡಿಒ ಸಿದ್ದಲಿಂಗಸ್ವಾಮಿ ಮತ್ತು ಎಸ್ಡಿಎ ಸಿದ್ದರಾಮ ಅವರು ವಿತರಣೆ ಮಾಡಿದ್ದರು. ಈ ಸಂಬಂಧ ಲೋಕಾಯುಕ್ತದಲ್ಲಿ ಸುಮೊಟೋ ಪ್ರಕರಣ ದಾಖಲಾಗಿದೆ. ವಿಚಾರಣೆ ಬಾಕಿ ಇರುವ ಕಾರಣ ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಸಿಇಒ ಹ್ಯಾರಿಸ್ ತಿಳಿಸಿದ್ದಾರೆ.
ಪತ್ರಕರ್ತರಿಗೆ ಬೆದರಿಕೆ ಆರೋಪ; ಪಿಡಿಒ ಅಮಾನತಿಗೆ ಆಗ್ರಹ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಳ್ಳೋಳ್ಳಿ ಗ್ರಾಮ ಪಂಚಾಯತಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅವರು ಪತ್ರಕರ್ತ ನಾಗಯ್ಯ ಸ್ವಾಮಿ ಎಂಬವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಪಿಡಿಒ ದೇವಿಂದ್ರಪ್ಪ ಅವರನ್ನು ಅಮಾನತುಗೊಳಿಸಬೇಕೆಂದು ಚಿತ್ತಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಿಸಿದೆ. ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
ಅಳ್ಕೊಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಹಾಗೂ ಖರ್ಚು ವೆಚ್ಚದ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಪತ್ರಕರ್ತ ನಾಗಯ್ಯ ಮಾಹಿತಿ ಕೇಳಿದ್ದರು. ಆದರೆ, ಮಾಹಿತಿ ನೀಡದ ಪಿಡಿಒ ದೇವಿಂದ್ರಪ್ಪ ಮಾರ್ಚ್ 5ರಂದು ಪತ್ರಕರ್ತನಿಗೆ ಕರೆ ಮಾಡಿ, ‘ಆರ್ಟಿಐ ಸಲ್ಲಿಸಿ, ಬ್ಲಾಕ್ಮೇಲ್ ಮಾಡ್ತಿದ್ದೀಯಾ? ನಿನ್ನ ವಿರುದ್ಧ ಕೇಸ್ ಹಾಕಿ ಜೈಲಿಗೆ ಹಾಕಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ. ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.




