ಮೈಸೂರು ನಗರದ ಕಲಾಮಂದಿರದ, ಕಿರುರಂಗಮಂದಿರದಲ್ಲಿ ಐದು ದಿನಗಳ ಕಾಲ ನಡೆದ ‘ನಿರಂತರ ರಂಗ ಉತ್ಸವ’ ಸಮಾರೋಪದಲ್ಲಿ ಮಾತನಾಡಿದ ಚಿಂತಕ ಹಾಗೂ ಲೇಖಕ ದೇವನೂರು ಬಸವರಾಜು, “ರಂಗಭೂಮಿಯ ಪ್ರಸ್ತುತತೆಯನ್ನು ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಸದಭಿರುಚಿ, ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಂತಹ ಸಂಜೀವಿನಿ ವನವೇ ರಂಗಭೂಮಿ” ಎಂದು ಅಭಿಪ್ರಾಯಪಟ್ಟರು.
“ರಂಗಭೂಮಿಯ ಮೂಲಕ ಬದುಕನ್ನು ಹಸನುಗೊಳಿಸುವ, ಸಮಾಜದಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಹುಟ್ಟಿಸುವ ಕೆಲಸ ನಡೆಯಬೇಕು. ಪ್ರಸಕ್ತ ಕಾಲಘಟ್ಟ ವಿಷಮಯವಾಗಿದ್ದು, ನಾವು ಬದುಕುತ್ತಿರುವ ಪರಿಸ್ಥಿತಿ ಹಾಗು ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಆತಂಕ ಹುಟ್ಟುತ್ತದೆ. ಇಂತಹ ಸಂದರ್ಭದಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಮರುನಿರ್ಮಿಸಬೇಕಾದ ಅಗತ್ಯವಿದೆ. ಅದಕ್ಕೆ, ರಂಗಭೂಮಿ ಅತ್ಯುತ್ತಮ ಮಾರ್ಗವಾಗಿದ್ದು, ಮಾನವೀಯತೆ ಎಲ್ಲೆಡೆ ನೆಲಸಬೇಕಿದೆ. ಅದು ಇಲ್ಲದಿದ್ದರೆ ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ನಾಳೆಯ ನೆಮ್ಮದಿಯೂ ಕಾಣದಂತಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.

“ಜಾತಿ, ಧರ್ಮ, ಅಸಹನೆ ಹೆಚ್ಚಾಗುತ್ತಿದ್ದು, ಹೊಟ್ಟೆ ಕಿಚ್ಚಿನಲ್ಲೇ ಕಾಲ ಕಳೆದು ಹೋಗುತ್ತಿರುವ ಸ್ಥಿತಿಯ ಬಗ್ಗೆ ಆತಂಕವಿದೆ. ಬದುಕು ಕಲೆಗೂ ಹೌದು, ವಿಜ್ಞಾನಕ್ಕೂ ಹೌದು; ಹಾಗೆಯೇ, ರಂಗಭೂಮಿಯೂ ಕೂಡ. ‘ರಂಗಭೂಮಿ’ ಎಂಬ ರೂಪದಲ್ಲಿ ಅಲ್ಲದಿದ್ದರು, ಮನುಷ್ಯನ ನಾಗರಿಕತೆಯ ಆರಂಭದ ಕೇಂದ್ರ ಬಿಂದು ಎನ್ನಬಹುದು. ಚಿತ್ರಕಲೆ, ಕುಣಿತ, ಹಾಡು, ಮಾನವ ಪೂರ್ವದ ಕಲಾರೂಪಗಳು. ನಂತರ ಅವು ಕಲಾ ಪ್ರಕಾರಗಳಾಗಿ ಉಳಿದುಕೊಂಡವು. ಇವೆಲ್ಲದರ ಕ್ರೋಢಿಕೃತ ರೂಪವೇ ರಂಗಭೂಮಿಯಾಗಿದ್ದು, ಅದು ಕಲೆಗಿಂತಲೂ ಮೀರಿದ ಸಾಮಾಜಿಕ ಕಾರ್ಯವನ್ನು ವಿಸ್ತರಿಸಿಕೊಂಡಿದೆ” ಎಂದು ವಿವರಿಸಿದರು.
ಹಿರಿಯ ರಂಗ ನಿರ್ದೇಶಕ ಚಿದಂಬರರಾವ್ ಜಂಬೆರ್ ಮಾತನಾಡಿ, ನಿರಂತರ ತಂಡವನ್ನು ಹಲವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ. ಇವರು ನಡೆಸುತ್ತಿರುವ ಸಹಜರಂಗ ತರಬೇತಿ ಶಿಬಿರಗಳು, ಕಾವ್ಯ ಓದು, ಸಾಹಿತ್ಯ ಹಾಗೂ ನಾಟಕಗಳ ಅಧ್ಯಯನದ ಮೂಲಕ ವಿದ್ಯಾರ್ಥಿಗಳನ್ನು ಸರಿಯಾದ ದಿಕ್ಕಿನತ್ತ ಕರೆದೊಯ್ಯುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ನಿರಂತರ ಫೌಂಡೇಷನ್ ಅಧ್ಯಕ್ಷ ಎಂ.ಎಂ. ಸುಗುಣ ಮಾತನಾಡಿ, “ಜಿಡಿಪಿ ಅಥವಾ ಷೇರು ಸೂಚ್ಯಂಕದ ಬೆಳವಣಿಗೆಯೇ ದೇಶದ ಪ್ರಗತಿ ಎಂಬ ಭ್ರಮಾ ಲೋಕವನ್ನು ಸೃಷ್ಟಿಸಲಾಗುತ್ತಿದೆ. ಆದರೆ, ಅದು ನಿಜವಲ್ಲ. ಸಾಂಸ್ಕೃತಿಕ ಅಭಿವ್ಯಕ್ತಿಯೇ ದೇಶದ ಸಮೃದ್ಧಿಯ ನಿಜವಾದ ಸಂಕೇತ. ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನವನ್ನು ಮುಕ್ತವಾಗಿ ವ್ಯಕ್ತಪಡಿಸಿಕೊಳ್ಳುವ ಸಮಾಜ ನಿರ್ಮಾಣವಾಗಬೇಕು. ರಂಗಭೂಮಿ ಜೀವಂತ ಕಲೆ; ಅದು ಸಮಾಜದ ಆಗುಹೋಗುಗಳಿಗೆ ನೇರವಾಗಿ ಮುಖಾಮುಖಿಯಾಗುತ್ತದೆ. ವರ್ತಮಾನದಲ್ಲಿ ಭವಿಷ್ಯವನ್ನು ಚಿಂತಿಸುವುದು, ಇತಿಹಾಸದಲ್ಲಿನ ನಕಾರಾತ್ಮಕತೆಯನ್ನು ತಿದ್ದಿ ಕ್ರಿಯಾತ್ಮಕತೆಗೆ ರೂಪಿಸುವುದೇ ರಂಗಭೂಮಿಯ ಕರ್ತವ್ಯ” ಎಂದು ಅಭಿಪ್ರಾಯಪಟ್ಟರು.
ಈ ವಿಶೇಷ ವಿಡಿಯೋ ವೀಕ್ಷಿಸಿ:https://www.youtube.com/watch?v=rBBDK8Y88O0
ಸಮಾರೋಪ ಸಮಾರಂಭದಲ್ಲಿ ರೈತ ಸಂಘದ ಹೊಸಕೋಟೆ ಬಸವರಾಜು, ಪ್ರೊ. ಕಾಳಚನ್ನೆಗೌಡ, ಮೀನಾ ಮಸೂರು, ಪ್ರೊ. ಚ. ಸರ್ವಮಂಗಳ, ಶ್ರೀನಿವಾಸ್ ಪಾಲಳ್ಳಿ, ಪ್ರಸಾದ್ ಕುಂದೂರು, ಹರಿಪ್ರಸಾದ್, ಡಾ. ನರೆಂದ್ರಕುಮಾರ್, ದೇವಾನಂದ್ ವರಪ್ರಸಾದ್ ಸೇರಿದಂತೆ ಪ್ರೇಕ್ಷಕರು ಇದ್ದರು.





