ಮೈಸೂರಿನ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ. ಎಸ್. ಮುತ್ತುರಾಜು ನೇತೃತ್ವದಲ್ಲಿ, ಸವಿತಾ ಸಮಾಜದ ಬಂಧುಗಳು ಬಿಜೆಪಿಯ ಸಿ.ಟಿ. ರವಿ ಮಾತಿನ ಭರದಲ್ಲಿ ‘ಹಜಾಮ’ ಪದ ಬಳಕೆ ಮಾಡಿರುವುದನ್ನ ಖಂಡಿಸಿ ಪ್ರತಿಭಟನೆ ನಡೆಸಿದರು.
ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ. ಎಸ್. ಮುತ್ತುರಾಜು ಮಾತನಾಡಿ, “ಸಿ.ಟಿ. ರವಿಯವರ ನೀಚತನ ಇದೇನು ಮೊದಲಲ್ಲ. ಹಜಾಮ ಪದ ಬಳಕೆ ಮಾಡುತ್ತಿರುವುದು ಇದು ಎರಡನೆಯ ಸಲ. ತಮ್ಮಲ್ಲಿರುವ ಕೊಳಕುತನವನ್ನ ಸವಿತಾ ಸಮಾಜದ ಬಂಧುಗಳನ್ನು ‘ಹಜಾಮ’ ಎನ್ನುವ ಮೂಲಕ ಜಾತಿ ನಿಂದನೆ ಮಾಡಿ ಅವಮಾನಿಸುವುದು ತರವಲ್ಲ. ಇದನ್ನ ಸಮಾಜ ಎಂದಿಗೂ ಸಹಿಸುವುದಿಲ್ಲ. 24 ಗಂಟೆಯೊಳಗೆ ಸವಿತಾ ಸಮಾಜದವರಲ್ಲಿ ಸಿ.ಟಿ. ರವಿ ಕ್ಷಮೆ ಕೊರಬೇಕು. ಇಲ್ಲದಿದ್ದಲ್ಲಿ. ರಾಜ್ಯದಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

” ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ದೂರು ನೀಡಲಾಗುವುದು. ಇದರ ಜೊತೆಗೆ ದಲಿತರಿಗೆ ಜಾತಿ ನಿಂದನೆಯದಾಗ ಯಾವ ರೀತಿಯಲ್ಲಿ ಅಟ್ರಾಸಿಟಿ ಕಾಯ್ದೆ ಅನ್ವಯ ಆಗುತ್ತದೆಯೋ, ಅದೇ ರೀತಿಯಲ್ಲಿ ಸವಿತಾ ಸಮಾಜದ ಬಗ್ಗೆ ಲಘುವಾಗಿ ಮಾತನಾಡಿದಾಗ ಬಳಕೆಯಾಗುವಂತೆ ಕಾಯ್ದೆ ರೂಪಿಸುವಂತೆ ಕೋರಲಾಗುವುದು” ಎಂದರು.
ಸಿ.ಟಿ. ರವಿ ಈ ಹಿಂದೆಯೂ ಜಾತಿ ನಿಂದನೆ ಮಾಡಿದ್ದರು. ಮತ್ತದೇ ತಪ್ಪನ್ನು ಎಸಗಿದ್ದಾರೆ. ಸವಿತಾ ಸಮಾಜದ ನಿಂದನೆ ಮಾಡುವುದು ಚಟವಾಗಿದೆ. ತಮ್ಮಲ್ಲಿರುವ ನೀಚತನ ಆಗಾಗ ಹೊರ ಹಾಕುವ ಇಂತಹ ಕೀಳುಮಟ್ಟದ ರಾಜಕಾರಣಿಗಳಿಗೆ ರಾಜ್ಯದಲ್ಲಿ ಬುದ್ದಿಕಲಿಸಲಾಗುವುದು. ಸವಿತಾ ಸಮಾಜದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಎಚ್ಚರಿಕೆಯಿಂದ, ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯಬೇಕು. ಇದನ್ನೆಲ್ಲಾ ಬಿಟ್ಟು ನಾಲಿಗೆ ಹರಿಬಿಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ವನ್ಯಜೀವಿ ಸಂರಕ್ಷಣೆ-ಜನರ ಭದ್ರತೆ ಮಹತ್ವದ್ದಾಗಿದೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಬಿ. ಜೆ. ವಿಜಯ್ ಕುಮಾರ್ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.





