ದೇವನಹಳ್ಳಿ ರೈತ ಹೋರಾಟದ ಬಗ್ಗೆ ಧ್ವನಿ ಎತ್ತುವಂತೆ ಕೋರಿ ಕೈಗಾರಿಕೋದ್ಯಮಿಗಳು, ತಂತ್ರಜ್ಞಾನ ಮುಖಂಡರುಗಳಿಗೆ ಸಾಹಿತಿಗಳು, ವಿಜ್ಞಾನಿಗಳು ಸೇರಿದಂತೆ ವಿವಿಧ ಕ್ಷೇತ್ರದ ತಜ್ಞರುಗಳು ಬಹಿರಂಗ ಪತ್ರವನ್ನು ಬರೆದಿದ್ದಾರೆ. “ಕರ್ನಾಟಕದ ಆರ್ಥಿಕತೆಯ ಆಧಾರಸ್ತಂಭಗಳಾದ ನೀವು ದೇವನಹಳ್ಳಿಯ ರೈತರೊಂದಿಗೆ ನಿಲ್ಲಬೇಕು” ಎಂದು ಸಾಹಿತಿಗಳು ಒತ್ತಾಯಿಸಿದ್ದಾರೆ.
ದೇವನಹಳ್ಳಿ ರೈತರ ಭೂಮಿ ಸ್ವಾಧೀನ ಕೈಬಿಡುವಂತೆ ಒತ್ತಾಯಿಸಿ ಜುಲೈ 4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ‘ನಾಡ ಉಳಿಸಿ ಸಮಾವೇಶ’ ನಡೆಯಲಿದೆ. ಈಗಾಗಲೇ ರೈತರ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳುವುದನ್ನು ವಿರೋಧಿಸಿ ಫ್ರೀಡಂ ಪಾರ್ಕ್ನಲ್ಲಿ‘ಭೂಮಿ ಸತ್ಯಾಗ್ರಹ’ ನಡೆಯುತ್ತಿದೆ. ಈ ನಡುವೆ ಕೈಗಾರಿಕೋದ್ಯಮಿಗಳೂ ಧನಿ ಎತ್ತುವಂತೆ ಸಾಹಿತಿಗಳು ಬಹಿರಂಗ ಪತ್ರ ಬರೆದಿದ್ದಾರೆ.
ಇದನ್ನು ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ | ಇಂದಿನಿಂದ ಅಹೋರಾತ್ರಿ ಧರಣಿ
“ದೇವನಹಳ್ಳಿ ರೈತ ಹೋರಾಟ ಆರಂಭವಾಗಿ 1,178 ದಿನಗಳಾಗಿವೆ. ‘ಹೈಟೆಕ್ ಡಿಫೆನ್ಸ್ & ಏರೋಸ್ಪೇಸ್ ಪಾರ್ಕ್’ ನಿರ್ಮಾಣಕ್ಕಾಗಿ 1,777 ಎಕರೆ ಫಲವತ್ತಾದ ಭೂಮಿಯನ್ನು ರೈತರಿಂದ ಕಿತ್ತುಕೊಳ್ಳಲಾಗುತ್ತಿದೆ. ಈ ಪೈಕಿ 495 ಎಕರೆ ಸ್ವಾಧೀನ ಪಡೆಯುವುದಿಲ್ಲ ಎಂದರೂ ರೈತರು ತಮ್ಮ ಭೂಮಿಯನ್ನು ಬಿಟ್ಟುಕೊಡಲ್ಲ ಎಂಬ ಸ್ಪಷ್ಟ ನಿಲುವನ್ನು ತಾಳಿದ್ದಾರೆ. ಇದು ಕೈಗಾರಿಕಾ ವಿಸ್ತರಣೆ ಮತ್ತು ರಾಜ್ಯದ ಕೃಷಿ ನೆಲೆಯನ್ನು ಉಳಿಸಿಕೊಳ್ಳುವವರ ಜೀವನೋಪಾಯದ ನಡುವೆ ಗೊಂದಲ ಹೆಚ್ಚಿಸುತ್ತಿದೆ” ಎಂದು ಬಹಿರಂಗ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ದೇವನಹಳ್ಳಿಯ ಸುತ್ತಮುತ್ತಲಿನ ಫಲವತ್ತಾದ ಭೂಮಿ ಬೆಂಗಳೂರಿನ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಗೆ ಜೀವಸೆಲೆ. ಕೋವಿಡ್ ಲಾಕ್ಡೌನ್ನ ಕಠಿಣ ಸಂದರ್ಭದಲ್ಲಿಯೂ ಈ ರೈತರು ನಗರಕ್ಕೆ ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಿದ್ದಾರೆ. ಸುತ್ತಮುತ್ತಲಿನ ಜಿಲ್ಲೆಗಳು ಒಟ್ಟಾಗಿ ವಾರ್ಷಿಕವಾಗಿ ಅಂದಾಜು 7–8 ಮಿಲಿಯನ್ ಟನ್ ತೋಟಗಾರಿಕಾ ಬೆಳೆಗಳನ್ನು ಉತ್ಪಾದಿಸುತ್ತವೆ. ಆದರೆ ಸ್ಥಳೀಯ ಡೈರಿಗಳು ಪ್ರತಿದಿನ ಬೆಂಗಳೂರಿನ ನಂದಿನಿ/ಮದರ್ ಡೈರಿಗೆ 10 ಮಿಲಿಯನ್ ಲೀಟರ್ಗಿಂತಲೂ ಹೆಚ್ಚು ಹಾಲನ್ನು ತಲುಪಿಸುತ್ತವೆ” ಎಂದು ವಿವರಿಸಲಾಗಿದೆ.
“ಕರ್ನಾಟಕದ ಆರ್ಥಿಕ ಪ್ರಗತಿಗೆ ಕೈಗಾರಿಕಾ ಬೆಳವಣಿಗೆ ಮತ್ತು ಕೃಷಿ ಜೀವನೋಪಾಯ ಎರಡನ್ನೂ ಮೌಲ್ಯೀಕರಿಸುವ ಸಮತೋಲಿತ ವಿಧಾನದ ಅಗತ್ಯವಿದೆ. ‘ಅಭಿವೃದ್ಧಿ’ ಹೆಸರಿನಲ್ಲಿ ಗ್ರಾಮೀಣ ಮತ್ತು ಕೃಷಿ ನೆಲೆಯನ್ನು ದುರ್ಬಲಗೊಳಿಸುವುದು ಆಹಾರ ನೀಡುವ ಕೈಯನ್ನು ಕಚ್ಚಿದಂತೆ. ನೀವು ಖಾಲಿ ಹೊಟ್ಟೆಯಲ್ಲಿ ಗೋಪುರಗಳನ್ನು ನಿರ್ಮಿಸಲು ಸಾಧ್ಯವಿಲ್ಲ” ಎಂದು ಸಾಹಿತಿಗಳು ಹೇಳಿದ್ದಾರೆ.
“ನೀವು ಕರ್ನಾಟಕದ ಬೆಳವಣಿಗೆಯಲ್ಲಿ ಪ್ರಮುಖ ಪಾಲುದಾರರು ಮಾತ್ರವಲ್ಲದೆ, ಸಾರ್ವಜನಿಕ ನಂಬಿಕೆ ಮತ್ತು ಸಾಮಾಜಿಕ ಪ್ರಭಾವ ಬೀರುವವರು ಎಂದು ನಾವು ದೃಢವಾಗಿ ನಂಬುತ್ತೇವೆ. ರಾಜ್ಯದ ಕೈಗಾರಿಕಾ ಭವಿಷ್ಯದ ಶಿಲ್ಪಿಗಳಾಗಿ, ನಿಮ್ಮ ನಾಯಕತ್ವವು ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ, ನಮ್ಮ ಸಮಾಜಕ್ಕೂ ಮುಖ್ಯ” ಎಂದು ಕೈಗಾರಿಕೋದ್ಯಮಿಗಳು, ತಂತ್ರಜ್ಞಾನ ಮುಖಂಡರುಗಳನ್ನು ಉದ್ದೇಶಿಸಿ ಪತ್ರದಲ್ಲಿ ಬರೆಯಲಾಗಿದೆ.
ಇದನ್ನು ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ: ಜುಲೈ 4ರಂದು ಬೃಹತ್ ‘ನಾಡ ಉಳಿಸಿ ಸಮಾವೇಶ’
“ಇಂದು ನಿಮ್ಮ ಜವಾಬ್ದಾರಿ ಆರ್ಥಿಕ ಯಶಸ್ಸನ್ನು ಮೀರಿ ನೈತಿಕ ನಾಯಕತ್ವ ಮತ್ತು ಅಂತರ್ಗತ ಅಭಿವೃದ್ಧಿಯೆಡೆ ಸಾಗಬೇಕಿದೆ. ಈ ಕ್ಷಣದಲ್ಲಿ, ಮೌನವು ನೀವು ತಟಸ್ಥರಾಗಿದ್ದೀರಿ ಎಂಬ ಅಭಿಪ್ರಾಯ ಮೂಡಿಸದು, ಇದೂ ಪ್ರಭಾವವಾಗಿದೆ. ಕಾನೂನು, ಪಾರದರ್ಶಕತೆಗಾಗಿ ಮಾತ್ರವಲ್ಲ ನ್ಯಾಯಯುತ, ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಯ ನಿಟ್ಟಿನಲ್ಲಿ ಮಾತನಾಡುವ ಸಮಯ ಇದಾಗಿದೆ” ಎಂದು ಸಾಹಿತಿಗಳು ಹೇಳಿದ್ದಾರೆ.
“ಆದ್ದರಿಂದ ಕರ್ನಾಟಕದ ಆರ್ಥಿಕತೆಯ ಆಧಾರಸ್ತಂಭಗಳಾದ ನೀವು ಈ ಕ್ಷಣವನ್ನು ಗುರುತಿಸಿ ದೇವನಹಳ್ಳಿಯ ರೈತರೊಂದಿಗೆ ನಿಲ್ಲಬೇಕೆಂದು ಒತ್ತಾಯಿಸುತ್ತೇವೆ. ನ್ಯಾಯಯುತ, ಹೆಚ್ಚು ಸಮತೋಲಿತ ಅಭಿವೃದ್ಧಿ ಮಾದರಿಗಾಗಿ ನೀವು ಎತ್ತುವ ಧ್ವನಿಯು ಚಳುವಳಿಯನ್ನು ಬಲ ನೀಡಲಿ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಬೆಳವಣಿಗೆಯು ಎಂದಿಗೂ ಬೆಳವಣಿಗೆಯನ್ನು ಉಳಿಸಿಕೊಳ್ಳುವವರನ್ನು ಅಳಿಸಬಾರದು. ನಿಮ್ಮ ನಾಯಕತ್ವವು ಆತ್ಮಸಾಕ್ಷಿ, ಸಮಾನತೆ ಮತ್ತು ನ್ಯಾಯಯುತ ಭವಿಷ್ಯಕ್ಕಾಗಿ ನಿಲ್ಲುವುದು ಮುಖ್ಯ. ಫಲವತ್ತಾದ ಕೃಷಿಯೋಗ್ಯ ಭೂಮಿಯನ್ನು ಕೈಗಾರಿಕಾ ಬಳಕೆಗೆ ನೀಡುವುದನ್ನು ವಿರೋಧಿಸುವ ಮೂಲಕ ಮತ್ತು ಕೈಗಾರಿಕಾ ಕಾರಿಡಾರ್ಗಳನ್ನು ಕೃಷಿಗೆ ಯೋಗ್ಯವಲ್ಲದ ಭೂಮಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಒತ್ತಾಯಿಸುವ ಮೂಲಕ ನೀವು ಆಹಾರ ಭದ್ರತೆಯನ್ನು ರಕ್ಷಿಸಬೇಕು” ಎಂದು ಮನವಿ ಮಾಡಿದ್ದಾರೆ.





