ಹುಮನಾಬಾದ್ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡ್ಗಳಲ್ಲಿ ಕೆಲವು ದಿನಗಳಿಂದ ಮೂಲಭೂತ ಸೌಕರ್ಯಗಳಾದ ಬೀದಿದೀಪ,ಕುಡಿಯುವ ನೀರು, ಗಟಾರು ಸ್ವಚ್ಛತೆ ಕಾರ್ಯವನ್ನು ಪುರಸಭೆ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಎಸ್ಡಿಪಿಐ ಆರೋಪಿಸಿದೆ.
ಈ ಕುರಿತು ಎಸ್ಡಿಪಿಐ ಜಿಲ್ಲಾಧ್ಯಕ್ಷ ಶೇಖ ಮಕ್ಸೂದ್ ನೇತ್ರತ್ವದಲ್ಲಿ ಸೋಮವಾರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, “ಪಟ್ಟಣದಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಒದಗಿಸುವ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಟ್ಯಾಂಕರ್ ನೀರು ಖರೀದಿಸಿ ಕುಡಿಯುವ ಪರಿಸ್ಥಿತಿ ಎದುರಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪಟ್ಟಣದಲ್ಲಿ ಅನೇಕ ಸ್ಲಂ, ವಾರ್ಡ್ಗಳಲ್ಲಿ ಇಲ್ಲಿಯವರೆಗೆ ಚರಂಡಿ ಸ್ವಚ್ಛಗೊಳಿಸಿಲ್ಲ. ಚರಂಡಿಗಳು ಕಸದಿಂದ ಪೂರ್ತಿ ಭರ್ತಿಯಾಗಿವೆ. ಸ್ವಲ್ಪ ಮಳೆಯಾದರೆ ಸಾಕು ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿವೆ, ರಸ್ತೆ ಮೇಲೆ ಹರಿಯುತ್ತಿವೆ. ಅವ್ಯವಸ್ಥೆಯಿಂದ ಸುತ್ತಲಿನ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಪಟ್ಟಣದ ವಿವಿಧೆಡೆ ಬೀದಿ ದೀಪ ಅಳವಡಿಸದ ಕಾರಣ ಅನಾಹುತಗಳು ಸಂಭವಿಸುತ್ತಿವೆ” ಎಂದು ಹೇಳಿದರು.
ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈಗಲಾದರೂ ಅಧಿಕಾರಿಗಳು ಪಟ್ಟಣದ ಎಲ್ಲ ವಾರ್ಡ್ಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆಗಳು ಆಲಿಸಿ ವಾರದೊಳಗೆ ಎಲ್ಲ ಸಮಸ್ಯೆಗಳು ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪುರಸಭೆ ಕಚೇರಿ ಎದುರು ಉಗ್ರ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಆಂತರ್ಯದ ಪ್ರೇರಣೆಯಿಂದ ಪ್ರತಿಯೊಬ್ಬರ ಬೆಳವಣಿಗೆ ಸಾಧ್ಯ : ವಿಕ್ರಮ ವಿಸಾಜಿ
ಈ ಸಂದರ್ಭದಲ್ಲಿ ಎಸ್ಡಿಪಿಐ ಪ್ರಮುಖರಾದ ಸೈಯದ್ ಅಕ್ಬರ್, ಸೈಯದ್ ಮೈಬೂಬ್ ಸಾಬ್ಮ ಸೈಯದ್ ವಾಸಿಂ, ಆದಿಲ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.





