ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, ಅವುಗಳನ್ನು ಸಂಘಟಿತ ವಲಯಕ್ಕೆ ತರಲು, ಹಾಗೂ ಕೃಷಿ ಉದ್ಯಮಿಗಳಿಗೆ ಸಾಲ ಸೌಲಭ್ಯ, ತಾಂತ್ರಿಕ ಬೆಂಬಲ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಮೂಲಕ ಬೆಂಬಲ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆಯ ಪ್ರಯೋಜನ ಪಡೆದು, ತನ್ನದೇ ಆದ ʼದೀಕ್ಷಾ ಬ್ರ್ಯಾಂಡ್ʼ ರೂಪಿಸಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಮೆಮನೆ ಗ್ರಾಮದ ಮಮತಾ ವಿನಾಯಕ ಭಟ್ಟ ಅವರು ಯಶಸ್ವಿ ಮಹಿಳಾ ಉದ್ಯಮಿಯಾಗಿ ಪ್ರೇರಣೆಯಾಗಿದ್ದಾರೆ.
ಮಮತಾ ಅವರು ವಾಣಿಜ್ಯ ಪದವೀಧರರಾಗಿದ್ದು, ನಾಲ್ಕು ವರ್ಷಗಳ ಕಾಲ ಶಿರಸಿಯ ಮಾರ್ಕೆಟಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ವೇಳೆ ನಿರ್ವಹಣಾ ಅನುಭವವನ್ನು ಸಂಪಾದಿಸಿದರು. ಸಂಸ್ಥೆಯ ಸಿಇಒ ಅವರ ಪ್ರೋತ್ಸಾಹದಿಂದ ಗೃಹ ಉತ್ಪನ್ನಗಳ ತಯಾರಿಕೆಗೆ ಮುನ್ನುಡಿ ಬರೆದ ಅವರು, ಹಲಸಿನ ಹಪ್ಪಳ ಉತ್ಪಾದನೆ ಮತ್ತು ಪೂರೈಕೆ ಕ್ಷೇತ್ರದಲ್ಲಿ ಯಶಸ್ಸು ಕಂಡು, ಶಿರಸಿಯ ಕದಂಬ ಮಾರ್ಕೆಟಿಂಗ್ ಸಂಸ್ಥೆಯ ಮಾರ್ಕೆಟಿಂಗ್ ಸಹಕಾರ ಭರವಸೆಯೊಂದಿಗೆ ತಮ್ಮದೇ ಒಂದು ಕಿರು ಉದ್ಯಮ ಆರಂಭಿಸಿದರು.



2022ರಲ್ಲಿ PMFME ಯೋಜನೆಯಡಿ ಸಿದ್ದಾಪುರ ತಾಲೂಕು ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ ಹೊಸಗದ್ದೆ ಕೆನರಾ ಬ್ಯಾಂಕ್ನಿಂದ ರೂ.15 ಲಕ್ಷ ಸಾಲ ಪಡೆದ ಮಮತಾ, ಹಿಟ್ಟಿನ ಗಿರಣಿ, ಹುರಿಯುವ ಯಂತ್ರ, ಕರೆಂಟ್ ಡ್ರೈಯರ್, ಪ್ಯಾಕಿಂಗ್ ಯಂತ್ರ ಮುಂತಾದ ಯಂತ್ರೋಪಕರಣಗಳನ್ನು ಖರೀದಿಸಿದರು. ಜೊತೆಗೆ ರೂ.3.75 ಲಕ್ಷ ಸಹಾಯಧನ ಲಭಿಸುವ ಮೂಲಕ ಉತ್ಪಾದನಾ ಸಾಮರ್ಥ್ಯ, ಗುಣಮಟ್ಟ ಮತ್ತು ಮಾರುಕಟ್ಟೆ ವ್ಯಾಪ್ತಿ ಮತ್ತಷ್ಟು ಹೆಚ್ಚಳ ಕಂಡಿತು. ರೂ.10,000 ಬಂಡವಾಳದಿಂದ ಆರಂಭವಾದ ಪ್ರಯತ್ನ ಇಂದಿಗೆ ರೂ.35 ಲಕ್ಷಕ್ಕೂ ಅಧಿಕ ವಹಿವಾಟು ಸಾಧಿಸಿರುವ ʼದೀಕ್ಷಾ ಬ್ರ್ಯಾಂಡ್ʼ ಆಗಿ ಬೆಳೆದಿದೆ.
ತಮ್ಮ ಉದ್ಯಮದ ಕುರಿತು ಈದಿನದೊಂದಿಗೆ ಮಾತನಾಡಿದ ಬ್ರ್ಯಾಂಡ್ ಓನರ್ ಮಮತಾ, “ಕಳೆದ ಮೂರು ವರ್ಷಗಳಿಂದ “ದೀಕ್ಷಾ ಫುಡ್ ಪ್ರಾಡಕ್ಟ್ಸ್ (ಡಿಎಫ್ಪಿ) ಲೋಗೋದಡಿ ಈ ಉದ್ಯಮ ನಡೆಸುತ್ತಿದ್ದೇನೆ. PMFME ಯೋಜನೆಯಡಿಯಲ್ಲಿ ಶೇ.50 ರಷ್ಟು ಸಹಾಯಧನದೊಂದಿಗೆ ಲೋನ್ ಪಡೆದು ಈ ಘಟಕ ಶುರು ಮಾಡಲಾಗಿದೆ. ಘಟಕದಲ್ಲಿ ರೋಸ್ಟರ್ ಮಷೀನ್, ಗ್ರೈಂಡರ್ ಹಾಗೂ ಜರಡಿ ಮಷೀನ್ಗಳಿವೆ. ಅವುಗಳ ಸಹಾಯದಿಂದ ಉತ್ತಮ ಗುಣಮಟ್ಟದ ಆಹಾರ ಪದಾರ್ಥ ತಯಾರಿಸಿ ಮಾರುಕಟ್ಟೆಗೆ ಕೊಡಲಾಗುತ್ತದೆ. ಬಾಳೆಕಾಯಿ ಚಿಪ್ಸ್ ಹಾಗೂ ಕಷಾಯದ ಪುಡಿಗಳು ಮಾರುಕಟ್ಟೆಯಲ್ಲಿ ಭದ್ರ ಜಾಗ ಹಿಡಿದಿವೆ” ಎಂದು ಮಾಹಿತಿ ಹಂಚಿಕೊಂಡರು.
ಹಲಸಿನ ಹಪ್ಪಳದಿಂದ ಆರಂಭವಾದ ಈ ಉದ್ಯಮ ಇಂದು ಕಷಾಯ ಪುಡಿ, ಬಾಳೆಕಾಯಿ ಹಪ್ಪಳ, ಸೂಜು ಮೆಣಸು ಖಾರದ ಬಾಳೆ ಚಿಪ್ಸ್, ಸಬ್ಬಕ್ಕಿ ಸಂಡಿಗೆ ಮುಂತಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದೆ. ಹಬ್ಬದ ದಿನಗಳಲ್ಲಿ ಸ್ಥಳೀಯ ಮಹಿಳೆಯರೊಂದಿಗೆ ಸೇರಿ ಚಕ್ಕುಲಿ ಹಿಟ್ಟು, ಮಡೆ ಹಿಟ್ಟು, ಪಂಚ ಕಜ್ಜಾಯ, ಮೋದಕಗಳನ್ನು ಟನ್ಗಟ್ಟಲೆ ತಯಾರಿಸಿ ಶಿರಸಿಯ TSSಗೆ ಪೂರೈಕೆ ಮಾಡಲಾಗುತ್ತಿದ್ದು, ಹತ್ತಾರು ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನೂ ಒದಗಿಸಿ ಮಾದರಿ ಮಹಿಳಾ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ | ದೇವಭಾಗ್ ಬೀಚ್ನಲ್ಲಿ ಮತ್ತೆ ‘ಮೀನಿನ ಮಳೆ’!
ಮಮತಾ ಭಟ್ ಅವರ ಪರಿಶ್ರಮ ಮತ್ತು ದೃಢ ಸಂಕಲ್ಪದಿಂದ ʼದೀಕ್ಷಾ ಬ್ರ್ಯಾಂಡ್ʼ ಸ್ಥಳೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗುರುತು ಕಟ್ಟಿಕೊಂಡಿದ್ದು, ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬನೆ ಮತ್ತು ಸಬಲೀಕರಣದ ಮಾದರಿಯಾಗಿದೆ.
“PMFME ಯೋಜನೆಯಡಿ ಅರ್ಹ ಸಣ್ಣ ಉದ್ಯಮಿಗಳು, ಸ್ವಸಹಾಯ ಗುಂಪುಗಳು (SHG), ರೈತ ಉತ್ಪಾದಕರ ಸಂಸ್ಥೆಗಳು (FPO) ಮತ್ತು ಸಹಕಾರಿ ಸಂಘಗಳಿಗೆ ಗರಿಷ್ಠ ರೂ.15 ಲಕ್ಷ ಸಾಲದ ಮೇಲೆ 50% ಸಹಾಯಧನ ಸಹ ಲಭ್ಯವಿದೆ. ಆಸಕ್ತರು ತಮ್ಮ ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು” ಎಂದು ಉತ್ತರ ಕನ್ನಡ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾವಂಕರ್ ಅವರು ತಿಳಿಸಿದರು.




