- ಧಾರ್ಮಿಕ ಆಚರಣೆಯಂತೆ ಸಂಸತ್ ಭವನ ಉದ್ಘಾಟನೆ ಪ್ರಜಾಪ್ರಭುತ್ವ ವಿರೋಧಿ
- ಬಿಜೆಪಿಯಂತಹ ಪ್ರಜಾಪ್ರಭುತ್ವ, ಮಹಿಳಾ ವಿರೋಧಿ ಸರ್ಕಾರವನ್ನು ಕಂಡಿಲ್ಲ
ಮಹಿಳಾ ಕುಸ್ತಿ ಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣಸಿಂಗ್ ಬಂಧಿಸಲು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ದಸಂಸ ಬಾಗಲಕೋಟೆ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದ್ದು, ಈ ಅವಧಿಯಲ್ಲಿ ಸಾಕಷ್ಟು ಸರ್ಕಾರಗಳನ್ನು ಭಾರತದ ಜನ ಕಂಡಿದ್ದಾರೆ. ಆದರೆ, ಇಂತಹ ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಂತಹ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಹಾಗೂ ಮಹಿಳಾ ವಿರೋಧಿ ಸರ್ಕಾರವನ್ನು ಕಂಡಿಲ್ಲ ಎಂದು ಕಿಡಿಕಾರಿದರು.
ನೂತನ ಸಂಸತ್ ಭವನ ಉದ್ಘಾಟನೆಯನ್ನು ಧಾರ್ಮಿಕ ಆಚರಣೆಯಂತೆ, ರಾಜನ ಪಟ್ಟಾಭಿಷೇಕದಂತೆ ಆಚರಣೆ ಮಾಡುವುದರ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿ ನಡೆ ಅನುಸರಿಸಿದ್ದು ಖಂಡನೀಯ. ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಘನವೆತ್ತ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ವಿರೋಧ ಪಕ್ಷದ ನಾಯಕರು, ನಾನಾ ಕ್ಷೇತ್ರದ ಸಾಧಕರು ಇರಬೇಕಾಗಿತ್ತು. ಅಲ್ಲದೆ ರಾಜದೊರೆಗಳು ಸರ್ವಾಧಿಕಾರಿ ಸಂಕೇತವಾಗಿ ಸ್ಥಾಪಿಸುವಂತಹ ಸೆಂಗೋಲ್ ಸ್ಥಾಪಿಸುವ ಮೂಲಕ ಸರ್ವಾಧಿಕಾರಿ ಹಾಗೂ ಮಹಿಳಾ ವಿರೋಧಿ ಧೋರಣೆ ತಾಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ತಾಲೂಕು ಸಂಚಾಲಕ ಸದಾಶಿವ ಐನಾಪುರ ಮಾತನಾಡಿ, “ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಸುಮಾರು 50 ದಿನಗಳಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳಾ ಕುಸ್ತಿಪಟುಗಳ ಹೋರಾಟವನ್ನು ಪೋಲೀಸರ ಧಮನಗೊಳಿಸಲು ಪ್ರಯತ್ನಿಸುತ್ತಿರುವುದು ಹಾಗೂ ಆರೋಪಿಯಾದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ರಕ್ಷಿಸುತ್ತಿರುವುದು ನೋಡಿದರೆ ಇವರ ಮಹಿಳಾ ವಿರೋಧಿ ನೀತಿ ಸ್ಪಷ್ಟವಾಗಿ ಅರ್ಥವಾಗುತ್ತದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಶಾಲಾ ಪಠ್ಯ ಪರಿಷ್ಕರಣೆ | ಬರಗೂರು ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚನೆ ಮಾಡಿದ ಸರ್ಕಾರ
ದೇಶದ ಸಂವಿಧಾನಿಕ ಮುಖ್ಯಸ್ಥರಾದ ರಾಷ್ಟ್ರಪತಿಗಳು ಈ ಘಟನೆಯಲ್ಲಿ ಮಧ್ಯ ಪ್ರವೇಶಿಸಿ ಆರೋಪಿಯನ್ನು ತಕ್ಷಣ ಬಂಧಿಸಿ, ನೊಂದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಬೇಕು ಎಂದು ಸದಾಶಿವ ಐನಾಪುರ ಆಗ್ರಹಿಸಿದರು.
ಈ ವೇಳೆ ರಬಕವಿ-ಬನಹಟ್ಟ ತಾಲೂಕು ಸಂಚಾಲಕ ಬಸವರಾಜ ದೊಡ್ಡಮನಿ, ಅಪ್ಪಶಿ ಕಾಂಬಳೆ, ರಾಜು ಪೋಳ, ಪ್ರವೀಣಕೂಮಾರ ನಿಡೋಣಿ ಹಾಗೂ ಇತರೆ ಕಾರ್ಯಕರ್ತರು ಇದ್ದರು.




